ವಿಶಾಖಪಟ್ಟಣ: ಉದ್ಯೋಗಕ್ಕೆಂದು ಸಿಂಗಾಪುರಕ್ಕೆ ತೆರಳಿದ್ದ ಯುವಕನೊಬ್ಬ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆಯೊಂದು ನಡೆದಿದೆ.
ಚಿಂತಕಾಯಲ ಮಹೇಶ್ (19) ಸಾವನ್ನಪ್ಪಿರುವ ಯುವಕನಾಗಿದ್ದಾನೆ. ಈತ ವಿಶಾಖಪಟ್ಟಣದ ಮೂಲದವನಾಗಿದ್ದಾನೆ. ಉದ್ಯೋಗ ಸಲಹಾ ಸಂಸ್ಥೆಯಾಗಿರುವ ಜಾಗತಿಕ ತಾಂತ್ರಿಕ ತರಭೇತಿ ಕೇಂದ್ರವನ್ನು ಸಂಪರ್ಕಿಸಿದ್ದ , ಈ ಸಂಸ್ಥೆಯ ಮೂಲಕ ಮೆಕಾನಿಕ್ ಆಗಿ ಕೆಲಸ ಮಾಡಲು ಕಳೆದ ತಿಂಗಳು ಸಿಂಗಾಪುರಕ್ಕೆ ತೆರಳಿದ್ದ.
ಮಹೇಸ್ ಹೃದಯ ಸ್ತಂಭನದಿಂದ ಸಾವನ್ನಪ್ಪಿದ್ದಾನೆಂದು ಹೇಳಲಾಗುತ್ತಿದೆ. ಆದರೆ, ಆತನ್ನು ಸಿಂಗಾಪುರಕ್ಕೆ ಕರೆದುಕೊಂಡು ಹೋಗಿದ್ದ ಕಂಪನಿ ನಮ್ಮೊಂದಿಗೆ ಯಾವುದೇ ಮಾತುಕತೆಯನ್ನು ನಡೆಸಿಲ್ಲ ಎಂದು ಮೃತ ಮಹೇಶ್ ಪೋಷಕರು ಹೇಳಿದ್ದಾರೆ.
ಮಹೇಶ್ ವಾರಗಳ ಹಿಂದೆಯೇ ಸಾವನ್ನಪ್ಪಿದ್ದಾನೆ. ಆದರೆ, ಇದೀಗ ನಮಗೆ ಈ ಸುದ್ದಿ ತಲುಪಿದೆ. ಆತನ ಸಾವಿನ ಹಿಂದೆ ಸಾಕಷ್ಟು ಅನುಮಾನಗಳು ಮೂಡತೊಡಗಿವೆ. ಹೀಗಾಗಿ ಅಧಿಕಾರಿಗಳು ಕೂಡಲೇ ಸಾವಿಗೆ ಪ್ರಮುಖ ಕಾರಣವನ್ನು ತಿಳಿಸಬೇಕಿದೆ ಎಂದು ಪೋಷಕರು ಆಗ್ರಹಿಸಿದ್ದಾರೆ. ಅಲ್ಲದೆ, ವಿಶಾಖಪಟ್ಟಣಂ ನ ವಿಮಾನ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸುತ್ತಿರುವ ಅವರು, ಮೃತ ದೇಹವನ್ನು ತೆಗೆದುಕೊಳ್ಳಲು ನಿರಾಕರಿಸಿದ್ದಾರೆ. ಮಗನ ಸಾವಿಗೆ ಕಂಪನಿ ಮುಖ್ಯಸ್ಥರು ನಿಖರವಾದ ಕಾರಣವನ್ನು ತಿಳಿಸಬೇಕಿದ್ದು, ಪರಿಹಾರವನ್ನು ನೀಡಬೇಕೆಂದು ಆಗ್ರಹಿಸಿದ್ದಾರೆ.
ಮೂಲಗಳ ಪ್ರಕಾರ ಈಗಾಗಲೇ ಕಂಪನಿಯ ಮುಖ್ಯಸ್ಥರು ಕುಟುಂಬಸ್ಥರಿಗೆ ಪರಿಹಾರ ಹಣವನ್ನು ನೀಡಿದ್ದು, ಕಂಪನಿ ಕೊಡುತ್ತಿರುವ ಪರಿಹಾರ ಧನಕ್ಕೆ ಕುಟುಂಬಸ್ಥರು ಅಸಂತೃಪ್ತಿಗೊಂಡಿದ್ದಾರೆಂದು ಹೇಳಲಾಗುತ್ತಿದೆ.
Advertisement