ರಕ್ತ ಸಿಕ್ತವಾಯ್ತು ಪ್ರೇಮಿಗಳ ದಿನ: ಪತ್ನಿ ಕೊಂದು ತನ್ನ ಕುತ್ತಿಗೆ ಕೊಯ್ದುಕೊಂಡ ಗಂಡ

ಪ್ರೇಮಿಗಳ ದಿನದಂದು ಪತಿಯೊಬ್ಬ ತನ್ನ ಪತ್ನಿಯನ್ನು ಕೊಲೆ ಮಾಡಿ ನಂತರ ನಡು ರಸ್ತೆಯಲ್ಲೇ ತನ್ನ ಕುತ್ತಿಗೆಯನ್ನು ಕೊಯ್ದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಯೊಂದು ಇಂದೋರ್ ನ ದ್ವಾರಕಾಪುರ ಪ್ರದೇಶದಲ್ಲಿ ಭಾನುವಾರ ನಡೆದಿದೆ...
ರಕ್ತ ಸಿಕ್ತವಾಯ್ತು ಪ್ರೇಮಿಗಳ ದಿನ: ಪತ್ನಿ ಕೊಂದು ತನ್ನ ಕುತ್ತಿಗೆ ಕೊಯ್ದುಕೊಂಡ ಗಂಡ
ರಕ್ತ ಸಿಕ್ತವಾಯ್ತು ಪ್ರೇಮಿಗಳ ದಿನ: ಪತ್ನಿ ಕೊಂದು ತನ್ನ ಕುತ್ತಿಗೆ ಕೊಯ್ದುಕೊಂಡ ಗಂಡ
ಇಂದೋರ್: ಪ್ರೇಮಿಗಳ ದಿನದಂದು ಪತಿಯೊಬ್ಬ ತನ್ನ ಪತ್ನಿಯನ್ನು ಕೊಲೆ ಮಾಡಿ ನಂತರ ನಡು ರಸ್ತೆಯಲ್ಲೇ ತನ್ನ ಕುತ್ತಿಗೆಯನ್ನು ಕೊಯ್ದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಯೊಂದು ಇಂದೋರ್ ನ ದ್ವಾರಕಾಪುರ ಪ್ರದೇಶದಲ್ಲಿ ಭಾನುವಾರ ನಡೆದಿದೆ. 
ಅನಿತಾ ಕೊಲೆಯಾದ ದುರ್ದೈವಿ. ದಂಪತಿಗಳ ಇಬ್ಬರ ನಡುವೆಯೂ ಹಲವು ದಿನಗಳಿಂದ ವಿರಸ ಏರ್ಪಟ್ಟಿತ್ತು. ನಿನ್ನೆ ಕೂಡ ಇಬ್ಬರ ನಡುವೆ ಜಗಳವಾಗಿದೆ. ಆದರೆ, ಈ ಬಾರಿ ನಡೆದ ಜಗಳ ಗಂಡನ ಕೋಪ ಮತ್ತಷ್ಟು ಏರುವಂತಾಗಿದೆ. ನಿನ್ನೆ ಮಧ್ಯಾಹ್ನ ಇಬ್ಬರ ನಡುವೆ ನಡೆದ ಜಗಳ ತಾರಕ್ಕೇರಿ ನಾರಾಯಣ್ ಗೌಲೆ ಮನೆಯಲ್ಲಿದ್ದ ಚಾಕುವನ್ನು ತೆಗೆದುಕೊಂಡು ಪತ್ನಿಗೆ ಇರಿದಿದ್ದಾನೆ. ನಂತರ ಚಾಕು ಹಿಡಿದು ಮನೆಯಿಂದ ಹೊರಟು ಹೋಗಿದ್ದಾನೆ. 
ಈ ವೇಳೆ ಮನೆಯಿಂದ ರಕ್ತಸಿಕ್ತ ಚಾಕು ಹಿಡಿದು ಹೊರಬಂದ ನಾರಾಯಣ್'ನನ್ನು ನೋಡಿದ ಸ್ಥಳೀಯರು ಅನುಮಾನಗೊಂಡು ಮನೆಗೆ ಹೋಗಿ ನೋಡಿದ್ದಾರೆ. ಈ ವೇಳೆ ಅನಿತಾ ರಕ್ತದ ಮಡುವಿನಲ್ಲಿ ಬಿದ್ದಿದ್ದನ್ನು ನೋಡಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪತ್ನಿಯನ್ನು ಆಸ್ಪತ್ರೆಗೆ ಸೇರಿಸಿರುವ ವಿಷಯ ತಿಳಿದ ನಾರಾಯಣ್ ಆಸ್ಪತ್ರೆಗೆ ಬಂದಿದ್ದಾನೆ. ನಂತರ ಪತ್ನಿ ಸಾವನ್ನಪ್ಪಿರುವ ವಿಷಯ ತಿಳಿದು ನಾಟಕವಾಡಿ, ಕೂಗಾಡಿದ್ದಾನೆ. ಈ ವೇಳೆ ಪೊಲೀಸರು ಎಷ್ಟೇ ತಡೆದರೂ ನಿಯಂತ್ರಣಕ್ಕೆ ಬಾರದ ಆತ ನಂತರ ಕೈಯಲ್ಲಿದ್ದ ಚಾಕುವಿನಿಂದ ತನ್ನ ಕುತ್ತಿಗೆಯನ್ನು ಕೊಯ್ದುಕೊಂಡಿದ್ದಾನೆ. 
ಇದೀಗ ಆರೋಪಿಗೆ ಅದೇ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಕೊಡಿಸಲಾಗುತ್ತಿದ್ದು, ಆತನ ಪರಿಸ್ಥಿತಿ ಚಿಂತಾಜನಕವಾಗಿರುವುದಾಗಿ ಹೇಳಲಾಗುತ್ತಿದೆ. ಇತ್ತ ಪತ್ನಿಯ ಮೃತದೇಹವನ್ನು ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. 
ಮೂಲಗಳ ಪ್ರಕಾರ ನಾರಾಯಣ್ ಗೌಲೆ ಅವರು ಅವರು ಪುರಸಭೆಯಲ್ಲಿ ಗುತ್ತಿಗೆ ನೌಕರನಾಗಿ ಕಾರ್ಯನಿರ್ವಹಿಸುತ್ತಿದ್ದ. ಕಳೆದ ಒಂದು ವರ್ಷದ ಹಿಂದಷ್ಟೇ ಕೆಲಸವನ್ನು ಕಳೆದುಕೊಂಡಿದ್ದ. ಉದ್ಯೋಗಕ್ಕಾಗಿ ಸುತ್ತಾಡುತ್ತಿದ್ದ ನಾರಾಯಣ್ ಪ್ರತೀ ನಿತ್ಯ ಪತ್ನಿಯೊಂದಿಗೆ ಜಗಳವಾಡುತ್ತಿದ್ದ ಎಂದು ಹೇಳಲಾಗುತ್ತಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com