ನವದೆಹಲಿ: ವಾಹನಗಳಲ್ಲಿ ಪರಿಸರಕ್ಕೆ ಮಾಲಿನ್ಯ ಕಾರಕವಾದ ಅಂಶಗಳನ್ನು ನಿಯಂತ್ರಿಸುವ ಭಾರತ್ ಸ್ಟೇಜ್ 4 (ಬಿಎಸ್ 4)ರ ಬದಲಾಗಿ 6ನ್ನೇ ಜಾರಿಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿದೆ. 2020ರ ಒಳಗಾಗಿ ದೇಶಾದ್ಯಂತ ಅನುಷ್ಠಾನಕ್ಕೆ ತೀರ್ಮಾನಿಸಲಾಗಿದೆ. ದೆಹಲಿಯಲ್ಲಿ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ನೇತೃತ್ವದಲ್ಲಿ ಬುಧವಾರ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ಬಗ್ಗೆ ನಿರ್ಧರಿಸಲಾಗಿದೆ.
ಸುಪ್ರೀಂಕೋರ್ಟಲ್ಲಿ ಮಂಗಳವಾರ ನಡೆದ ವಿಚಾರಣೆ ವೇಳೆ, ದೇಶಾದ್ಯಂತ ಭಾರತ್ ಸ್ಟೇಜ್ 4ರಲ್ಲಿನ ನ್ಯೂನತೆಗಳನ್ನು ಪರಿಹರಿಸದೆ ನೇರವಾಗಿ ಭಾರತ್ ಸ್ಟೇಜ್ 6ರ ಜಾರಿಗೆ ಮುಂದಾಗುತ್ತೀರಾ ಎಂದು ಕೇಂದ್ರವನ್ನು ಪ್ರಶ್ನಿಸಿತ್ತು. ಅದಕ್ಕೆ ಪೂರಕವಾಗಿ ಬುಧವಾರದ ಸಭೆಯಲ್ಲಿ ನಿರ್ಧಾರ ಕೈಗೊಂಡಿದೆ. ಸಭೆಯ ಬಳಿಕ ಮಾತನಾಡಿದ ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ``ದೇಶದಲ್ಲೀಗ ಯೂರೋ 3ಕ್ಕೆ ಸಮನಾಗಿರುವ ಬಿಎಸ್ 3 ಜಾರಿಯಲ್ಲಿದೆ. ಆಯ್ದ ಕೆಲವು ನಗರಗಳಲ್ಲಿ ಬಿಎಸ್ 4 ಇದೆ. ಈ ವರ್ಷದ ಏಪ್ರಿಲ್ ಒಳಗಾಗಿ ಅದನ್ನು ಮತ್ತಷ್ಟು ನಗರಗಳಿಗೆ ವಿಸ್ತರಿಸಲಾಗುತ್ತದೆ. 2017ರ ಒಳಗಾಗಿ ದೇಶಾದ್ಯಂತ ಅದನ್ನು ಜಾರಿ ಮಾಡಲಾಗುತ್ತದೆ'' ಎಂದು ತಿಳಿಸಿದರು.
ಬೇಕು ರು.80 ಸಾವಿರ ಕೋಟಿ: 2020ರ ಒಳಗಾಗಿ ಬಿಎಸ್ 6ನ್ನು ಜಾರಿ ಮಾಡಬೇಕೆಂದರೆ ತೈಲ ಶುದ್ಧೀಕರಣಗಾರಗಳು ತಮ್ಮಲ್ಲಿರುವ ಪೆಟ್ರೋಲಿಯಂ ಉತ್ಪನ್ನಗಳನ್ನು ಶುದ್ಧೀಕರಿಸುವ
ತಂತ್ರಜ್ಞಾನವನ್ನು ಮೇಲ್ಜರ್ಜೆಗೆ ಏರಿಸಲು ರು.80 ಸಾವಿರ ಕೋಟಿ ಬೇಕಾಗುತ್ತದೆ. ಬಿಎಸ್ 3 ಮತ್ತು 4 ನೇ ಹಂತ ಜಾರಿಯ ವೇಳೆ ಅವುಗಳು ರು.55 ಸಾವಿರ ಕೋಟಿ ತಂತ್ರಜ್ಞಾನ
ಮೇಲ್ದರ್ಜೆಗೆ ಹೂಡಿಕೆ ಮಾಡಿದ್ದವು.
ಎಲ್ಲೆಲ್ಲಿ ಬಿಎಸ್ 4 ಬಳಕೆಯಲ್ಲಿದೆ ?
ಜಮ್ಮು ಮತ್ತು ಕಾಶ್ಮೀರ, ಪಂಜಾಬ್, ಹರ್ಯಾಣ, ಹಿಮಾಚಲ ಪ್ರದೇಶ, ಉತ್ತರಾಖಂಡ, ದೆಹಲಿ, ರಾಜಸ್ಥಾನದ ಕೆಲ ಭಾಗ, ಪಶ್ಚಿಮ ಉತ್ತರ ಪ್ರದೇಶ. ಕರ್ನಾಟಕ ಸೇರಿದಂತೆ ದೇಶದ ಉಳಿದ ಭಾಗಗಳಲ್ಲಿ ಬಿಎಸ್ 3 ಬಳಕೆ.
ಈ ವಾರಕ್ಕೇ ಮುಕ್ತಾಯವೇ?
ಬೆಸ-ಸಮ ನಿಯಮ ಜಾರಿ ಬಗ್ಗೆ ದೆಹಲಿ ಹೈಕೋರ್ಟ್ ಅತೃಪ್ತಿ ವ್ಯಕ್ತಪಡಿಸಿದೆ. ಜನರಿಗೆ ಅನುಕೂಲವಾಗುವಂತೆ ಸಾರ್ವಜನಿಕ ಸಾರಿಗೆ ಒದಗಿಸಲಾಗಿಲ್ಲ. ಹೀಗಾಗಿ ಈ ವಾರಾಂತ್ಯಕ್ಕೇ ಮುಕ್ತಾಯ ಏಕೆ ಮಾಡಬಾರದು ಎಂದು ಮುಖ್ಯ ನ್ಯಾಯಮೂರ್ತಿ ಜಿ.ರೋಹಿಣಿ ಮತ್ತು ನ್ಯಾ.ಜಯಂತ್ ನಾಥ್ರನ್ನೊಳಗೊಂಡ ಪೀಠ ಪ್ರಶ್ನಿಸಿದೆ. ``ನೀವು ಸಲ್ಲಿಸಿದ ಯೋಜನೆ ಪೂರ್ತಿಯಾಗಿಲ್ಲ. ಒಂದು ವಾರದ ಅವಧಿಯನ್ನು ನಾವು ನಿಮಗೆ ನೀಡಿದ್ದೆವು. ಸದ್ಯದ ವ್ಯವಸ್ಥೆಯಿಂದ ದೆಹಲಿಯಲ್ಲಿ ಮಾಲಿನ್ಯ ಪ್ರಮಾಣ ಎಷ್ಟು ಕಡಿಮೆಯಾಗಿದೆ'' ಎಂದು ಕೋರ್ಟ್ ಪ್ರಶ್ನಿಸಿತು
Advertisement