ಪುಣೆ: ಆಸ್ಪತ್ರೆಗೆ ದಾಖಲಾಗುತ್ತಿದ್ದಂತೆಯೇ ತಾವು ಸಾವಿಗೀಡಾದರು ಎಂಬ ಸುದ್ದಿ ಹರಡಿದರೆ ಯಾರಿಗಾದರೂ ಕೋಪ ನೆತ್ತಿಗೇರದೇ ಇರದು. ಆದರೆ ಎನ್ ಸಿಪಿ ಮುಖ್ಯಸ್ಖ ಶರದ್ ಪವಾರ್ ಅವರಂತೂ ತಮ್ಮ ಬಗ್ಗೆ ಹರಡಿದ ಇಂಥ ಸುದ್ದಿ ಕೇಳಿ ಹೊಟ್ಟೆ ಹುಣ್ಣಾಗುವಂತೆ ನಕ್ಕುಬಿಟ್ಟರಂತೆ.
ಮೊನ್ನೆ ತಾನೇ ಪವಾರ್ ಅವರು ಮಾಮೂಲಿನಂತೆ ಆರೋಗ್ಯ ತಪಾಸಣೆಗೆಂದು ಆಸ್ಪತ್ರೆಗೆ ಹೋಗಿದ್ದರು. ಈ ವಿಷಯ ಗೊತ್ತಾಗುತ್ತಿದ್ದಂತೆಯೇ ಸಾಮಾಜಿಕ ಜಾಲತಾಣಗಳಲ್ಲಿ ಯಾರೋ "ಪವಾರ್ ಕೊನೆಯುಸಿರೆಳೆದರು" ಎಂಬ ಗಾಳಿಸುದ್ದಿ ಹರಿಬಿಟ್ಟಿದ್ದಾರೆ. ಇದು ಟ್ವಿಟ್ಟರ್ ಮತ್ತು ಫೇಸ್ ಬುಕ್ ಗಳಲ್ಲಿ ಭಾರಿ ಚರ್ಚೆಗೆ ಕಾರಣವಾಯಿತು. ಕೆಲವರಂತೂ ಇನ್ನು ಒಂದು ಹೆಜ್ಜೆ ಮುಂದೆ ಹೋಗಿ, "ಗಣರಾಜ್ಯೋತ್ಸವ ಇರುವ ಕಾರಣ ಪವಾರ್ ಮೃತಪಟ್ಟ ಸುದ್ದಿಯನ್ನು ಮುಚ್ಚಿಡಲಾಗಿದೆ. ಬುಧವಾರ ಈ ನೋವಿನ ಸಂಗತಿಯನ್ನು ಬಹಿರಂಗ ಪಡಿಸಲಾಗುತ್ತದೆ" ಎಂದೂ ಟ್ವೀಟ್ ಮಾಡಿದ್ದಾರೆ.
ಎಚ್ಚೆತ್ತ ಎನ್ ಸಿಪಿ, ಕೂಡಲೇ ಪವಾರ್ ಅವರು, ಬೆಡ್ ನಲ್ಲಿ ಕುಳಿತು ಮಗಳು ಸುಪ್ರಿಯಾ ಸುಳೆ ಜತೆ ಮಾತನಾಡುತ್ತಾ ಕುಳಿತಿದ್ದ ವಿಡಿಯೋವೊಂದನ್ನು ಬಿಡುಗಡೆ ಮಾಡಿತು. ಪವಾರ್ ಅವರೂ ಈ ವಿಷಯ ಕೇಳಿ ನಕ್ಕು, ಈ ಹಿಂದಿನ ಇಂಥ ಘಟನೆಗಳನ್ನು ಸ್ಮರಿಸುತ್ತಾ ಖುಷಿಪಟ್ಟರಂತೆ.
Advertisement