ರಾಹುಲ್ ಗಾಂಧಿ ಸದನದಲ್ಲಿ ನಿದ್ದೆ ಮಾಡಲಿಲ್ಲ: ಕಾಂಗ್ರೆಸ್ ಸಮರ್ಥನೆ

ಗುಜರಾತ್ ನಲ್ಲಿ ದಲಿತರ ಮೇಲಿನ ಹಲ್ಲೆಗೆ ಸಂಬಂಧಪಟ್ಟಂತೆ ಲೋಕಸಭೆಯಲ್ಲಿ ಆಡಳಿತ ಪಕ್ಷ ಮತ್ತು ಪ್ರತಿಪಕ್ಷದ ನಡುವೆ ...
ರಾಹುಲ್ ಗಾಂಧಿ ಲೋಕಸಭೆಯಲ್ಲಿ ತಲೆ ತಗ್ಗಿಸಿ ಕಣ್ಣು ಮುಚ್ಚಿ ಕುಳಿತಿದ್ದ ದೃಶ್ಯ(ಫೋಟೋ ಕೃಪೆ-ಲೋಕಸಭೆ)
ರಾಹುಲ್ ಗಾಂಧಿ ಲೋಕಸಭೆಯಲ್ಲಿ ತಲೆ ತಗ್ಗಿಸಿ ಕಣ್ಣು ಮುಚ್ಚಿ ಕುಳಿತಿದ್ದ ದೃಶ್ಯ(ಫೋಟೋ ಕೃಪೆ-ಲೋಕಸಭೆ)
ನವದೆಹಲಿ: ಗುಜರಾತ್ ನಲ್ಲಿ ದಲಿತರ ಮೇಲಿನ ಹಲ್ಲೆಗೆ ಸಂಬಂಧಪಟ್ಟಂತೆ ಲೋಕಸಭೆಯಲ್ಲಿ ಆಡಳಿತ ಪಕ್ಷ ಮತ್ತು ಪ್ರತಿಪಕ್ಷದ ನಡುವೆ ಗಂಭೀರವಾದ ಚರ್ಚೆ ನಡೆಯುತ್ತಿರುವಾಗ ರಾಹುಲ್ ಗಾಂಧಿ ನಿದ್ದೆ ಮಾಡುತ್ತಿದ್ದರು ಎಂಬ ಟೀಕೆಗೆ ಸಂಬಂಧಪಟ್ಟಂತೆ ಕಾಂಗ್ರೆಸ್ ಸ್ಪಷ್ಟನೆ ನೀಡಿದೆ. 
ಟಿವಿ ಮಾಧ್ಯಮಗಳಲ್ಲಿ ಇಂದು ರಾಹುಲ್ ಗಾಂಧಿ ಬೆಳಗಿನ ಕಲಾಪದ ವೇಳೆ ತಲೆ ಬಗ್ಗಿಸಿಕೊಂಡು ಕಣ್ಣು ಮುಚ್ಚಿದ ಸ್ಥಿತಿಯನ್ನು ತೋರಿಸುತ್ತಿತ್ತು. ಮಾಧ್ಯಮಗಳು ರಾಹುಲ್ ಗಾಂಧಿ ನಿದ್ದೆ ಮಾಡುತ್ತಿದ್ದರು ಎಂದು ಹೇಳಿದರೆ ಕಾಂಗ್ರೆಸ್ ನಾಯಕರು ತಮ್ಮ ನಾಯಕನ ಪರ ಮಾತನಾಡಿದ್ದಾರೆ.
ಅವರು ಮೊಬೈಲ್ ನಲ್ಲಿ ಮೆಸೇಜ್ ಚೆಕ್ ಮಾಡುತ್ತಿದ್ದರು. ಮೊಬೈಲ್ ಚೆಕ್ ಮಾಡುವುದು ಅಪರಾಧವಲ್ಲ ಎಂದಿದ್ದಾರೆ ಕಾಂಗ್ರೆಸ್ ನಾಯಕ ಅಭಿಷೇಕ್ ಸಿಂಘ್ವಿ.
ಇನ್ನು ಕಾಂಗ್ರೆಸ್ ನಾಯಕಿ ರೇಣುಕಾ ಚೌಧರಿ ಹವಾಮಾನವನ್ನು ದೂರಿದ್ದಾರೆ. ಹೊರಗೆ ಬಿಸಿಲು ಇದೆ. ಹಾಗಿರುವಾಗ ಸಂಸತ್ತಿನ ಒಳಗೆ ಹೋದವರು ಹವಾ ನಿಯಂತ್ರಿತ ಕೊಠಡಿಯೊಳಗೆ ಕಣ್ಣುಮುಚ್ಚಿ ರಿಲ್ಯಾಕ್ಸ್ ಮಾಡಿಕೊಳ್ಳೋಣ ಎನಿಸುತ್ತದೆ. ಸದನದ ಒಳಗೆ ಆ ಗಲಾಟೆ ಮಧ್ಯೆ ಯಾರಿಗಾದರೂ ನಿದ್ದೆ ಬರುತ್ತದೆಯೇ? ಖಂಡಿತಾ ಸಾಧ್ಯವಿಲ್ಲ ಎಂದು ರೇಣುಕಾ ಚೌಧರಿ ಹೇಳಿದರು. 
2014ರಲ್ಲಿ ಕೂಡ ಇದೇ ರೀತಿ ರಾಹುಲ್ ಗಾಂಧಿ ನಿದ್ದೆ ಮಾಡುವ ಭಂಗಿಯಲ್ಲಿ ಕ್ಯಾಮರಾ ಕಣ್ಣಿಗೆ ಸಿಕ್ಕಿಬಿದ್ದಿದ್ದರು. ಆಗ ಅಗತ್ಯ ವಸ್ತುಗಳ ಬೆಲೆಯೇರಿಕೆ, ಹಣದುಬ್ಬರ ಕುರಿತು ಸದನದಲ್ಲಿ ಚರ್ಚೆಯಾಗುತ್ತಿತ್ತು.
ಇನ್ನು ಕಾಂಗ್ರೆಸ್ ಬೆಂಬಲಿಗ ಮತ್ತು ಅಂಕಣಕಾರ ತೆಹ್ಸೀನ್ ಪೂನವಲ್ಲ ಟ್ವೀಟ್ ಮಾಡಿ, ''ಮಾಧ್ಯಮ ಮತ್ತು ಬಿಜೆಪಿ ಮಿತ್ರರೇ, ರಾಹುಲ್ ಗಾಂಧಿಯವರು ಧ್ಯಾನ ಮಾಡುತ್ತಿದ್ದರು. ಸದನದಲ್ಲಿ ಸ್ಪೀಕರ್ ಮಾತನ್ನು ಸರಿಯಾಗಿ ಕೇಳಲು ಇರುವ ಉತ್ತಮ ಮಾರ್ಗವೆಂದರೆ ಕಣ್ಣುಗಳನ್ನು ಮುಚ್ಚಿ ಉಸಿರಾಡಿ ನಂತರ ಕೇಳಿಸಿಕೊಳ್ಳುವುದು, ರಾಹುಲ್ ಗಾಂಧಿಯವರು ಅದನ್ನು ಮಾಡಿದ್ದಾರೆ'' ಎಂದಿದ್ದಾರೆ.
ಉತ್ತರ ಪ್ರದೇಶದ ಮಾಡಿ ಮುಖ್ಯಮಂತ್ರಿ, ಬಿಎಸ್ ಪಿ ನಾಯಕಿ ಮಾಯಾವತಿ ಮಾತ್ರ ಟೀಕಿಸಿದ್ದಾರೆ. ರಾಹುಲ್ ಗಾಂಧಿಯವರು ಹಗುರವಾಗಿ ಅಲ್ಪನಿದ್ರೆ ಮಾಡುತ್ತಿದ್ದರು. ಕೆಳಜಾತಿಯ ರಕ್ಷಣೆಗೆ ಹೋರಾಡುವಲ್ಲಿ ಪಕ್ಷದ ನಿರಾಸಕ್ತಿಯನ್ನು ಇದು ತೋರಿಸುತ್ತದೆ.
 ಗುಜರಾತ್ ನಲ್ಲಿ ದಲಿತರ ಮೇಲಿನ ಹಲ್ಲೆಗೆ ಸಂಬಂಧಿಸಿದಂತೆ ಆ ರಾಜ್ಯ ಮತ್ತು ಕೇಂದ್ರದಲ್ಲಿ ಪ್ರಮುಖ ಪ್ರತಿಪಕ್ಷವಾಗಿರುವ ಕಾಂಗ್ರೆಸ್ ಆ ವಿಷಯವನ್ನು ಸದನದಲ್ಲಿ ಎತ್ತುವಲ್ಲಿ ವಿಫಲವಾಗಿದೆ. ತಾವು ಸಂಸತ್ತಿನಲ್ಲಿ ಆ ವಿಷಯವನ್ನು ಎತ್ತಿದ ಬಳಿಕವಷ್ಟೇ ಕಾಂಗ್ರೆಸ್ ಜಾಗೃತವಾಗಿದ್ದು ಎಂದು ಅವರು ಸಾರಿದರು.
ದಲಿತರ ಮೇಲೆ ಹಲ್ಲೆ ನಡೆದ ಗುಜರಾತ್ ನ ಉನಾ ಪ್ರದೇಶಕ್ಕೆ ರಾಹುಲ್ ಗಾಂಧಿ ನಾಳೆ ಭೇಟಿ ನೀಡಲಿದ್ದಾರೆ. ಇಂತಹ ಸಂದರ್ಭದಲ್ಲಿ ಲೋಕಸಭೆಯಲ್ಲಿ ಅವರು ನಿದ್ರೆಗೆ ಜಾರಿದ್ದು ಎಲ್ಲರನ್ನೂ ಅಚ್ಚರಿಯುಂಟುಮಾಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com