ನವದೆಹಲಿ: ಕೃಷಿ ವಲಯ ಮತ್ತು ರೈತರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಮುಂದಿನ ಕೆಲವು ವಾರಗಳವರೆಗೆ ಗ್ರಾಮೀಣ ಪ್ರದೇಶಗಳಲ್ಲಿ ಜನರಿಗೆ ಹೊಸ ನೋಟುಗಳು ಸಿಗುವಂತೆ ಮಾಡಲು ಕೇಂದ್ರ ಸರ್ಕಾರ ಗಮನ ಹರಿಸಲಿದೆ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.
ಇಂದು ದೆಹಲಿಯಲ್ಲಿ ನಡೆದ ಬಿಜೆಪಿ ಸಂಸದೀಯ ಪಕ್ಷದ ಸಭೆಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಮಾತನಾಡಿದರು. ಅಧಿಕ ಮೌಲ್ಯದ ನೋಟುಗಳ ಚಲಾವಣೆಯನ್ನು ಹಿಂತೆಗೆದುಕೊಂಡಿರುವ ಸರ್ಕಾರದ ನಿರ್ಧಾರಕ್ಕೆ ಬೆಂಬಲ ನೀಡುವ ಕುರಿತು ನಿಲುವಳಿಯನ್ನು ಹೊರಡಿಸಲಾಯಿತು.
ಮುಂದಿನ ಕೆಲವು ವಾರಗಳವರೆಗೆ ನಾವು ಕೃಷಿ ವಲಯದತ್ತ ಗಮನ ಹರಿಸಲಿದ್ದೇವೆ. ರಬಿ ಋತು ಬರುತ್ತಿದೆ ಎಂದು ಹೇಳಿದ ಹಣಕಾಸು ಸಚಿವರು ಇನ್ನು ಕೆಲ ದಿನಗಳವರೆಗೆ ಜನರು ನೋಟಿಗಾಗಿ ತೊಂದರೆ ಅನುಭವಿಸಬೇಕಾಗಬಹುದು ಎಂದು ಹೇಳಿದರು. ನೋಟುಗಳ ನಿಷೇಧದ ನಂತರದ ಭಾರತವನ್ನು ಅವರು ಹೊಸ ಸಾಮಾನ್ಯ ಎಂದು ವ್ಯಾಖ್ಯಾನಿಸಿದರು. ಕಳೆದ 70 ವರ್ಷಗಳ ಸಾಮಾನ್ಯ ಅವಧಿಯನ್ನು ನಿಲ್ಲಿಸಿ ಪ್ರಧಾನಿ ಮೋದಿಯವರು ಹೊಸ ಸಾಮಾನ್ಯವನ್ನು ಸೃಷ್ಟಿಸಿದ್ದಾರೆ ಎಂದರು.
ಸರ್ಕಾರದ ನಿರ್ಧಾರಕ್ಕೆ ವಿರೋಧ ಪಕ್ಷಗಳ ಟೀಕೆಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, ನೋಟುಗಳ ಅಪಮೌಲ್ಯೀಕರಣದ ಬಗ್ಗೆ ಸದನದಲ್ಲಿ ಚರ್ಚೆ ನಡೆಸಲು ಸರ್ಕಾರ ಸಿದ್ದವಿದೆ ಎಂದು ಮತ್ತೊಮ್ಮೆ ಹೇಳಿದ್ದಾರೆ.
ಕೆಲವರು ಹೇಳುತ್ತಾರೆ, ನೋಟು ನಿಷೇಧದ ಬಗ್ಗೆ ಹಣಕಾಸು ಸಚಿವರಿಗೆ ಕೂಡ ಗೊತ್ತಿರಲಿಲ್ಲ ಎಂದು,ಮತ್ತೊಮ್ಮೆ ಅವರೇ ಹೇಳುತ್ತಾರೆ, ಪಕ್ಷದಲ್ಲಿ ಕೆಲವರಿಗೆ ಇದು ಮೊದಲೇ ತಿಳಿದಿತ್ತು ಎಂದು ವಿರೋಧ ಪಕ್ಷದವರಿಗೆ ತಿರುಗೇಟು ನೀಡಿದರು.
ನೋಟುಗಳ ನಿಷೇಧ ಒಂದು ಐತಿಹಾಸಿಕ ನಿರ್ಧಾರವಾಗಿದ್ದು ಇನ್ನು 20 ವರ್ಷಗಳ ಕಾಲವೂ ಇದೊಂದು ಒಳ್ಳೆಯ ನಿರ್ಧಾರ ಎಂದೇ ಬಣ್ಣಿಸಲಾಗುತ್ತದೆ. ಇದೊಂದು ಬಹಳ ದೊಡ್ಡ ತೀರ್ಮಾನವಾಗಿತ್ತು. ಈ ನಿರ್ಧಾರ ತೆಗೆದುಕೊಳ್ಳಲು ಸರ್ಕಾರಕ್ಕೆ ತುಂಬಾ ಧೈರ್ಯ ಬೇಕಾಗಿತ್ತು. ಇದೊಂದು ಐತಿಹಾಸಿಕ ಹೆಜ್ಜೆಯಾಗಿದ್ದು, ಇಡೀ ದೇಶ ಇದನ್ನು ಸ್ವಾಗತಿಸುತ್ತಿದೆ. ಡಿಜಿಟಲ್ ಆರ್ಥಿಕತೆಗೆ ಇದರಿಂದ ಪ್ರಯೋಜನವಾಗಲಿದ್ದು ಗ್ರಾಮೀಣ ಪ್ರದೇಶಗಳಲ್ಲಿ ಹೂಡಿಕೆ ಹೆಚ್ಚಾಗಲಿದೆ ಎಂದು ಜೇಟ್ಲಿ ಬಣ್ಣಿಸಿದರು.