ನವದೆಹಲಿ: ಕಳೆದ ಮೇನಲ್ಲಿ ತಮಿಳುನಾಡು ವಿಧಾನಸಭೆ ಚುನಾವಣೆ ವೇಳೆ ಮತದಾರರ ಮೇಲೆ ಪ್ರಭಾವ ಬೀರಲು ಹಣ ಹಂಚಿಕೆ ಮಾಡುತ್ತಿರುವ ಬಗ್ಗೆ ಸಾಕ್ಷ್ಯ ದೊರೆತ ರದ್ದಾಗಿದ್ದ ಎರಡು ವಿಧಾನಸಭೆ ಕ್ಷೇತ್ರಗಳಿಗೆ ನವೆಂಬರ್ 19ರಂದು ಚುನಾವಣೆ ನಡೆಯಲಿದೆ.
ಕೇಂದ್ರ ಚುನಾವಣಾ ಆಯೋಗ ಇಂದು ತಮಿಳುನಾಡಿನ ಅರವಕುರಿಚಿ ಮತ್ತು ತಂಜಾವುರ್ ವಿಧಾನಸಭಾ ಕ್ಷೇತ್ರಗಳ ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ನವೆಂಬರ್ 19ರಂದು ಮತದಾನ ನಡೆಯಲಿದೆ.
ಆಯೋಗ ಅಕ್ಟೋಬರ್ 26ರಂದು ಅಧಿಸೂಚನೆ ಹೊರಡಿಸುತ್ತಿದ್ದು, ನವೆಂಬರ್ 19ಕ್ಕೆ ಮತದಾನ ಹಾಗೂ ನವೆಂಬರ್ 22ಕ್ಕೆ ಫಲಿತಾಂಶ ಪ್ರಕಟಗೊಳ್ಳಲಿದೆ.
ತಮಿಳುನಾಡು ಮುಖ್ಯಮಂತ್ರಿ ಹಾಗೂ ಎಐಎಡಿಎಂಕೆ ಮುಖ್ಯಸ್ಥ ಜೆ.ಜಯಲಲಿತಾ ಅವರು ಆಸ್ಪತ್ರೆಯಲ್ಲಿರುವ ಸಂದರ್ಭದಲ್ಲೇ ಚುನಾವಣೆ ನಡೆಯುತ್ತಿದ್ದು, ಆಡಳಿತರೂಢ ಜಯಾ ಅನಪಸ್ಥಿತಿಯಲ್ಲೇ ಚುನಾವಣೆ ಎದುರಿಸಬೇಕಾಗಿದೆ.
ಮತದಾರರ ಮೇಲೆ ಪ್ರಭಾವ ಬೀರಲು ಹಣ ಹಂಚಿಕೆ ಮಾಡಿದ ಸಾಕ್ಷ್ಯ ದೊರೆತ ಹಿನ್ನೆಲೆಯಲ್ಲಿ ಚುನಾವಣಾ ಅಧಿಸೂಚನೆ ರದ್ದಾಗಿದ್ದು ಭಾರತದ ಚುನಾವಣೆ ಇತಿಹಾಸದಲ್ಲೇ ಇದೇ ಮೊದಲು.