ಡೋಕ್ಲಾಮ್ ವಿವಾದ: ಟಿಬೆಟ್ ನಲ್ಲಿ ಚೀನಾ ಭಾರೀ ಸಮರಾಭ್ಯಾಸ

ಡೋಕ್ಲಾಮ್ ವಿವಾದ ಉಭಯ ರಾಷ್ಟ್ರಗಳ ಗಡಿಯಲ್ಲಿ ಸಂಘರ್ಷ ಏರ್ಪಟ್ಟಿದ್ದು, ಭಾರತಕ್ಕೆ ಬೆದರಿಕೆಯೊಡ್ಡುವ ಪ್ರಯತ್ನಗಳನ್ನು ಚೀನಾ ಮುಂದುವರೆಸಿದೆ. ಇದರಂತೆ ಟಿಬೆಟ್ ನಲ್ಲಿ ಚೀನಾ ವಾಯುಪಡೆ ಭಾರೀ ಸಮರಾಭ್ಯಾಸ ನಡೆಸುತ್ತಿದೆ ಎಂದು ವರದಿಗಳು ತಿಳಿಸಿವೆ....
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಡೋಕ್ಲಾಮ್ ವಿವಾದ ಉಭಯ ರಾಷ್ಟ್ರಗಳ ಗಡಿಯಲ್ಲಿ ಸಂಘರ್ಷ ಏರ್ಪಟ್ಟಿದ್ದು, ಭಾರತಕ್ಕೆ ಬೆದರಿಕೆಯೊಡ್ಡುವ ಪ್ರಯತ್ನಗಳನ್ನು ಚೀನಾ ಮುಂದುವರೆಸಿದೆ. ಇದರಂತೆ ಟಿಬೆಟ್ ನಲ್ಲಿ ಚೀನಾ ವಾಯುಪಡೆ ಭಾರೀ ಸಮರಾಭ್ಯಾಸ ನಡೆಸುತ್ತಿದೆ ಎಂದು ವರದಿಗಳು ತಿಳಿಸಿವೆ. 
ಡೋಕ್ಲಾಮ್ ಗಡಿ ವಿವಾದಿಂದಾಗಿ ಕಳೆದ 3 ತಿಂಗಳಿನಿಂದಲೂ ಭಾರತ ಹಾಗೂ ಚೀನಾ ನಡುವಿನ ಸಂಬಂಧ ತೀವ್ರವಾಗಿ ಹದಗೆಟ್ಟಿದ್ದು, ವಿವಾದ ತಾರಕಕ್ಕೇರಿದ್ದಾಗಿನಿಂದಲೂ ಯುದ್ಧೋತ್ಸಾಹ ತೋರುತ್ತಿರುವ ಚೀನಾ ಟಿಬೆಟ್ ನಲ್ಲಿ ಭಾರೀ ತಾಲೀಮು ನಡೆಸುತ್ತಿದೆ ಎಂದು ತಿಳಿದುಬಂದಿದೆ. 
ರಷ್ಯನ್ ಸುಖೋಯ್ ನ ಅತ್ಯಾಧುನಿಕ ಜೆ-11 ಸೇರಿ ಇತರ ಯುದ್ಧ ವಿಮಾನಗಳ ಹಾರಾಟ ಟಿಬೆಟ್ ನಲ್ಲಿ ತೀವ್ರಗೊಂಡಿದೆ. ಲ್ಹಾಸಾ-ಗೊಂಗ್ಕಾದಲ್ಲಿ 25 ಯುದ್ಧ ವಿಮಾನಗಳು ಇದೀಗ ಬೀಡುಬಿಟ್ಟಿದ್ದು, ಇವುಗಳಲ್ಲಿ 20 ವಿಮಾನಗಳು ಜೆ-11 ಆಗಿವೆ. 

ಹೋಪಿಂಗ್ ಎಂಬಲ್ಲಿ 8, ಹೋಟಾನ್ ಎಂಬಲ್ಲಿ 9 ಹಾಗೂ ಕಾಳಿ ಎಂಬಲ್ಲಿ 12 ಯುದ್ಧವಿಮಾನಗಳಿವೆ. ಇದರಿಂದ ಒಟ್ಟಾರೆ 48 ಯುದ್ಧ ವಿಮಾನಗಳು ಟಿಬೆಟ್ ನಲ್ಲಿ ಬೀಡು ಬಿಚ್ಚಂತಾಗಿದೆ ಎಂದು ವರದಿಗಳು ತಿಳಿಸಿವೆ. 

ಜನವರಿಯಲ್ಲಿ 47, ಫೆಬ್ರವರಿಯಲ್ಲಿ 32, ಮಾರ್ಚ್ ನಲ್ಲಿ 19 ಹಾಗೂ ಏಪ್ರಿಲ್ ತಿಂಗಳಿನಲ್ಲಿ 17 ಹಾರಾಟಗಳು ಟಿಬೆಟ್ ನಲ್ಲಿ ನಡೆದಿದ್ದವು. ಆದರೆ, ಮೇ ತಿಂಗಳ ಬಳಿಕ ಹಾರಾಟದ ಪ್ರಮಾಣ ದಿಢೀರ್ ಏರಿಕೆಯಾಗಿದೆ. ಮೇನಲ್ಲಿ 268, ಜೂನ್ ನಲ್ಲಿ 164 ಹಾಗೂ ಜುಲೈನಲ್ಲಿ 166 ವಿಮಾನ ಹಾರಾಟಗಳು ನಡೆದಿವೆ. ಇದರಿಂದ ಒಟ್ಟಾರೆ 713 ಹಾರಾಟಗಳು ನಡೆದಂತಾಗಿವೆ. ಇದೀಗ ಹಾರಾಟದ ಪ್ರಮಾಣದ ಹೆಚ್ಚಳವು ಪರಿಸ್ಥಿತಿಯ ಗಂಭೀರತೆಯನ್ನು ಸೂಚಿಸುತ್ತಿದೆ ಎಂದು ವಿಶ್ಲೇಷಿಸಲಾಗುತ್ತಿದೆ. 

ಭಾರತವನ್ನು ಸೋಲಿಸುವ ಶಕ್ತಿ ಚೀನಾಗಿದೆ: ಚೀನಾ ತಜ್ಞರ ಹೇಳಿಕೆ
ಈ ನಡುವೆ ಡೋಕ್ಲಾಮ್ ವಿವಾದ ಸಂಬಂಧ ಚೀನಾ ಪದೇ ಪದೇ ಯುದ್ಧೋತ್ಸಾಹ ತೋರುತ್ತಿದ್ದು, ಸೇನಾ ಸಂಘರ್ಷದಲ್ಲಿ ಭಾರತವನ್ನು ಸೋಲಿಸುವ ಶಕ್ತಿ ಚೀನಾಗಿದೆ ಎಂದು ಚೀನಾ ತಜ್ಞರು ಬುಧವಾರ ಅಭಿಪ್ರಾಯಪಟ್ಟಿದ್ದಾರೆ. 

ಈ ಕುರಿತಂತೆ ಚೀನಾದ ಸರ್ಕಾರಿ ಒಡೆತನದ ಪತ್ರಿಕೆ ಗ್ಲೋಬಲ್ ಟೈಮ್ಸ್ ವರದಿ ಮಾಡಿದೆ. ಡೋಕ್ಲಾಮ್ ವಿವಾದ ಸಂಬಂಧ ಭಾರತ ಹಾಗೂ ಚೀನಾ ನಡುವೆ ಸೇನಾ ಸಂಘರ್ಷ ಎದುರಾಗಿದ್ದೇ ಆದರೆ, ಸಂಘರ್ಷದಲ್ಲಿ ಭಾರತವನ್ನು ಚೀನಾ ಮಣಿಸಲಿದೆ. 

ಒಂದು ವೇಳೆ ವಿವಾದಿತ ಡೋಕ್ಲಾಮ್ ನಿಂದ ಭಾರತ ತನ್ನ ಸೇನೆಯನ್ನು ಹಿಂದಕ್ಕೆ ಕರೆಸಿಕೊಂಡರೂ, ಚೀನಾ ಹಿಂದಕ್ಕೆ ಸರಿಯವುದಿಲ್ಲ. ಏಕೆಂದರೆ, ಷರತ್ತಿನಿಂದಾಗಿ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳಲಾಗಿದೆಯೇ ವಿನಃ ಸಮಸ್ಯೆಗೆ ಪರಿಹಾರ ದೊರಕಿಲ್ಲ. ವಿವಾದ ಕುರಿತು ಭಾರತದ ಆಕ್ರಮಣಕಾರಿ ಮತ್ತು ಪ್ರಚೋದನಕಾರಿ ನಡವಳಿಕೆಗೆ ಚೀನಾ ದಿಟ್ಟ ಉತ್ತರವನ್ನು ನೀಡಲಿದೆ ಎಂದು ಚೀನಾದ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಇಂಟರ್ ನ್ಯಾಷನಲ್ ಸ್ಟ್ರಾಟಜಿಯ ನಿರ್ದೇಶಕ ಯೆ ಹೇಲಿನ್ ಹೇಳಿದ್ದಾರೆಂದು ವರದಿಯಲ್ಲಿ ತಿಳಿಸಿದೆ. 

ಕಳೆದೆರಡು ತಿಂಗಳಿನಿಂದ ಭಾರತ–ಚೀನಾ ಗಡಿಯ ಸಿಕ್ಕಿಂ ವಲಯದಲ್ಲಿ ಸಂಘರ್ಷ ನಡೆಯುತ್ತಿದ್ದು, ಗಡಿ ಪ್ರದೇಶಕ್ಕೆ ಅಕ್ರಮವಾಗಿ ಪ್ರವೇಶಿಸಿದ ಚೀನೀ ಸೈನಿಕರು ಅಲ್ಲಿ ಇದ್ದ ಭಾರತೀಯ ಬಂಕರ್ ಗಳನ್ನು ನಾಶ ಮಾಡಿದ್ದರು.  ಇದೇ ಕಾರಣಕ್ಕೆ ಗಡಿ ಗಸ್ತು ನಡೆಸುವ ಯೋಧರಿಗೆ ಬೆಂಬಲವಾಗಿ ಇನ್ನಷ್ಟು ಸೈನಿಕರನ್ನು ಕಳುಹಿಸಲಾಗಿತ್ತು. ಯುದ್ಧ ಮಾಡುವ ಉದ್ದೇಶಕ್ಕೆ ಅಲ್ಲ ಎಂದು ಭಾರತ ಸ್ಪಷ್ಟಪಡಿಸಿತ್ತು. ಜೂನ್‌ 6 ಘಟನೆ ಬಳಿಕ ಇಂಡೋ-ಚೀನಾ ಗಡಿ ಪ್ರಕ್ಷುಬ್ದಗೊಂಡಿದೆ.
 
ಭಾರತದ ಗಡಿ ರಕ್ಷಣಾ ದೃಷ್ಟಿಯಿಂದ ಭೂತಾನ್ ನೊಂದಿಗೆ ಒಪ್ಪಂದ ಮಾಡಿಕೊಂಡಿರುವ ಭಾರತ ಸಿಲಿಗುರಿ ಕಾರಿಡಾರ್ ನಿರ್ಮಿಸುತ್ತಿದೆ. ಒಂದು ವೇಳೆ ಈ ಕಾರಿಡಾರ್ ಪೂರ್ಣಗೊಂಡಿದ್ದೇ ಆದರೆ ಗಡಿಯಲ್ಲಿ ಚೀನಿ ಸೈನಿಕರು ಏನೇ  ಯೋಜನೆ ರೂಪಿಸಿದರೂ ಭಾರತಕ್ಕೆ ಆದರ ಮಾಹಿತಿ ಲಭ್ಯವಾಗುತ್ತದೆ. ಇನ್ನು ಇದೇ ಕಾರಿಡಾರ್ ಗೆ ಹೊಂದಿಕೊಂಡಂತೆ ಭಾರತೀಯ ಪಡೆಗಳ ಶಿಬಿರವಿದ್ದು, ಇದೇ ಕಾರಣಕ್ಕೆ ಚೀನಾ ಕೂಡ ಡೋಕ್ಲಾಮ್ ಸಮೀಪದಲ್ಲೇ ದಿಢೀರ್ ರಸ್ತೆ  ನಿರ್ಮಾಣಕ್ಕೆ ಮುಂದಾಗಿತ್ತು. ಇದನ್ನು ಯಾವಾಗ ಭಾರತೀಯ ಸೈನಿಕರು ವಿರೋಧಿಸಿದರೋ ಆಗ ಚೀನೀ ಸೈನಿಕರು ಕಾಲುಕೆರೆದು ಸಂಘರ್ಷಕ್ಕೆ ಮುಂದಾಗಿದ್ದಾರೆ.

ಗಡಿಯಲ್ಲಿ ವಿವಾದ ತಾರಕ್ಕೇರಿದ್ದಾಗಿನಿಂದಲೂ ಭಾರತವನ್ನು ಬೆದರಿಸುವ ಪ್ರಯತ್ನಗಳನ್ನು ಚೀನಾ ಮಾಡುತ್ತಲೇ ಬಂದಿದೆ. ಡೋಕ್ಲಾಮ್ ವಿವಾದ ಸಂಬಂಧ ಕೆಲ ತಿಂಗಳಿನಿಂದಲೂ ಭಾರತ ಹಾಗೂ ಚೀನಾ ನಡುವೆ ವಾಕ್ಸಮರ ಮುಂದುವರೆಯುತ್ತಲೇ ಇದೆ.  

ಡೋಕ್ಲಾಮ್ ವಿವಾದದಲ್ಲಿ ಚೀನಾ ಗರಿಷ್ಟ ಸಂಯಮವನ್ನು ತೋರಿಸಿದೆ. ಆದರೆ, ಇದೀಗ ನಮ್ಮ ತಾಳ್ಮೆಯ ಕಟ್ಟೆಯೊಡೆದಿದೆ. ಭಾರತ ಇದನ್ನು ತಿಳಿಯಬೇಕಿದ್ದು, ಮೊದಲು ಡೋಕ್ಲಾಮ್ ನಿಂದ ತನ್ನ ಸೇನಾಪಡೆಗಳನ್ನು ಭಾರತ ಹಿಂದಕ್ಕೆ ಕರೆಸಿಕೊಳ್ಳಬೇಕು. ಇಲ್ಲದೇ ಹೋದರೆ, ಗಂಭೀರ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಚೀನಾ ಈ ಹಿಂದೆ ಭಾರತಕ್ಕೆ ಬೆದರಿಕೆ ಹಾಕಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com