ಮುಂಬೈ: ಹಿಂದೂಗಳು ಎಂದಿಗೂ ಅನ್ಯ ಮತದವರನ್ನು ಮತಾಂತರ ಮಾಡುವುದಿಲ್ಲ. ಹೀಗಾಗಿಯೇ ಹಿಂದೂಗಳ ಸಂಖ್ಯೆ ಕ್ಷೀಣಿಸುತ್ತಿದೆ ಎಂದು ಹೇಳಿಕೆ ನೀಡಿ ವಿರೋಧ ಪಕ್ಷಗಳ ತೀವ್ರ ಟೀಕೆಗೆ ಒಳಗಾಗಿರುವ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಕಿರಣ್ ರಿಜಿಜು ಅವರ ಬೆನ್ನಿಗೆ ಬಿಜೆಪಿ ಮಂಗಳವಾರ ಬಂದಿದೆ.
ಕಿರಣ್ ರಿಜಿಜು ಹೇಳಿಕೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ನಾಯರಿ ಶೈನಾ ಎನ್.ಸಿ ಅವರು, ಇತರೆ ಧರ್ಮಗಳು ಆಮಿಷಗಳನ್ನು ಒಡ್ಡಿ ಜನರನ್ನು ಮತಾಂತರ ಮಾಡುತ್ತಿರುತ್ತವೆ. ಆದರೆ, ಹಿಂದೂಗಳು ಇತರ ಧರ್ಮೀಯರನ್ನು ಮತಾಂತರ ಮಾಡುವುದಿಲ್ಲ. ಹಿಂದೂಗಳು ಮತಾಂತರ ಮಾಡವುದಿಲ್ಲ ಎಂಬುದು ಸತ್ಯವಾದ ಮಾತು. ಕಿರಣ್ ರಿಜಿಜು ಅವರ ಹೇಳಿಕೆ ಸರಿಯಿದೆ. ಇದು ಐತಿಹಾಸಿಕವಾದ ವಿಚಾರವಾಗಿದ್ದು, ಸಾಮಾಜಿಕ ಚರ್ಚೆಯಾಗಿದೆ. ಹೇಳಿಕೆ ವೈಯಕ್ತಿಕ, ಸಮುದಾಯದ ವಿರುದ್ಧದ ದಾಳಿಯಲ್ಲ ಎಂದು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅರುಣಾಚಲ ಪ್ರದೇಶವನ್ನು ಹಿಂದೂ ಬಹುಸಂಖ್ಯಾತ ರಾಜ್ಯವನ್ನಾಗಿಸಲು ಹೊರಟಿದ್ದಾರೆ ಎಂಬ ಕಾಂಗ್ರೆಸ್ ಆರೋಪಕ್ಕೆ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಪ್ರತಿಕ್ರಿಯೆ ನೀಡಿದ್ದ ಕಿರಣ್ ರಿಜಿಜು ಅವರು, ಹಿಂದೂಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಏಕೆಂದರೆ ಹಿಂದೂಗಳು ಎಂದಿಗೂ ಅನ್ಯ ಮತದವರನ್ನು ಮತಾಂತರ ಮಾಡುವುದಿಲ್ಲ, ಆದ್ದರಿಂದಲೇ ಬೇರೆ ರಾಷ್ಟ್ರಗಳಲ್ಲಿ ಆಗದೇ ಇರುವ ರೀತಿ ನಮ್ಮಲ್ಲಿ ಅಲ್ಪಸಂಖ್ಯಾತರ ಸಂಖ್ಯೆ ಹೆಚ್ಚುತ್ತಿದೆ. ಕಾಂಗ್ರೆಸ್ ಈ ರೀತಿಯ ಪ್ರಚೋದನಕಾರಿ ಹೇಳಿಕೆಗಳನ್ನು ನೀಡಬಾರದು. ಭಾರತ ಧರ್ಮ ನಿರಪೇಕ್ಷ ರಾಷ್ಟ್ರವಾಗಿದ್ದು, ಪ್ರತಿಯೊಂದು ಮತ, ಧರ್ಮದವರು ಶಾಂತಿ ಮತ್ತು ಸ್ವಾತಂತ್ರ್ಯವನ್ನು ಅನುಭವಿಸುವಂತಿರಬೇಕು ಎಂದು ಹೇಳಿದ್ದರು.
Advertisement