ಈ ಕುರಿತಂತೆ ಕೇಂದ್ರ ಸರ್ಕಾರದ ವಕ್ತಾರ ಪ್ರತಿಕ್ರಿಯೆ ನೀಡಿದ್ದು, ಡೋಕ್ಲಾಮ್ ವಿವಾದ ಹಾಗೂ ಕಾಷ್ಮೀರ ವಿಚಾರ ಕುರಿತಂತೆ ಶುಕ್ರವಾರ ಕರೆಯಲಾಗಿದ್ದ ಸಭೆಯಲ್ಲಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ಗೃಹ ಸಚಿವ ರಾಜನಾಥ ಸಿಂಗ್, ರಕ್ಷಣಾ ಸಚಿವ ಅರುಣ್ ಜೇಟ್ಲಿ ಅವರು 14 ವಿರೋಧ ಪಕ್ಷಗಳ ನಾಯಕರಿಗೆ ವಿವರಣೆ ನೀಡಿದ್ದರು. ಅಂದಿನ ಸಭೆಯಲ್ಲಿ ಗೈರಾಗಿದ್ದ ಮತ್ತಿತರೆ ವಿಪಕ್ಷಗಳ ನಾಯಕರಿಗೆ ಶನಿವಾರ ಮತ್ತೆ ಸಭೆ ನಡೆಸಿ ಎರಡನೇ ದಿನವೂ ವಿವರಣೆ ನೀಡಲಾಯಿತು ಎಂದು ಹೇಳಿದ್ದಾರೆ.
ಶುಕ್ರವಾರ ನಡೆದ ಸಭೆಯಲ್ಲಿ ಜೆಡಿಎಸ್, ಸಿಪಿಐ, ಆರ್'ಎಸ್'ಪಿ, ಜೆಎಂಎಂ, ಸಿಕ್ಕಿಂ ಡೆಮಾಕ್ರಟಿಕ್ ಫ್ರಂಟ್, ಅಕಾಲಿ ದಳ, ಕಾಂಗ್ರೆಸ್, ಟಿಎಂಸಿ, ಸಿಪಿಐ-ಎಂ, ಜೆಡಿ-ಯು, ಡಿಎಂಕೆ, ಬಿಎಸ್'ಪಿ ಎನ್ ಸಿಪಿ ಮತ್ತು ಇನ್ನಿತರೆ ಪಕ್ಷಗಳು ಹಾಜರಿದ್ದವು. ಸಭೆಯಲ್ಲಿ ಚೀನಾ ಮತ್ತು ಭಾರತದ ಗಡಿಯಲ್ಲಿ ಮತ್ತು ಜಮ್ಮು-ಕಾಶ್ಮೀರದಲ್ಲಿನ ಪರಿಸ್ಥಿತಿಗಳು ತೀರಾ ಹದಗೆಡುತ್ತಿದ್ದು ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆಂದು ತಿಳಿಸಿದ್ದಾರೆ.