ಕೊಚ್ಚಿ: ಮಲಯಾಳಂ ನಟಿ ಅಪಹರಣ ಹಾಗೂ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ನಟ ದಿಲೀಪ್ ಅವರು ಜಾಮೀನು ನೀಡುವಂತೆ ಕೋರಿ ಸೋಮವಾರ ಕೇರಳ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ನಟಿಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದ ಆರೋಪದ ಮೇರೆಗೆ ನಟ ದಿಲೀಪ್ ಅವರನ್ನು ಕೆಲ ದಿನಗಳ ಹಿಂದಷ್ಟೇ ಅಧಿಕಾರಿಗಳು ಬಂಧನಕ್ಕೊಳಪಡಿಸಿದ್ದರು. ಬಳಿಕ ಜಾಮೀನು ನೀಡುವಂತೆ ಕೋರಿ ದಿಲೀಪ್ ಅವರು ಸ್ಥಳೀಯ ನ್ಯಾಯಾಲಯದ ಮೊರೆ ಹೋಗಿದ್ದರು.
ವಿಚಾರಣೆ ನಡೆಸಿದ್ದ ನ್ಯಾಯಾಲಯ ಅಂಗಮಾನಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಜಾಮೀನು ಅರ್ಜಿ ತಿರಸ್ಕರಿಸಿ, 10 ದಿನಗಳ ನ್ಯಾಯಾಂಗ ಬಂಧನವನ್ನು ವಿಸ್ತರಿಸಿತ್ತು. ಇದೀಗ ಜಾಮೀನು ಕೋರಿ ದಿಲೀಪ್ ಅವರು ಕೇರಳ ಹೈಕೋರ್ಟ್'ನಲ್ಲಿ ಮನವಿ ಸಲ್ಲಿಸಿದ್ದಾರೆ.
ಫೆ.17 ರಂದು ರಾತ್ರಿ 7.30 ರ ಸುಮಾರಿಗೆ ತ್ರಿಶೂರ್ನಿಂದ ಎರ್ನಾಕುಲಂಗೆ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ನಟಿಯನ್ನು ಅಪಹರಿಸಿ ಲೈಂಗಿಕ ಕಿರುಕುಳ ನೀಡಲಾಗಿತ್ತು. ನಂತರ ರಾತ್ರಿ ಪರಿವಟ್ಟಲಂ ಎಂಬಲ್ಲಿ ನಟಿಯನ್ನು ಕಾರಿನಲ್ಲೇ ಬಿಟ್ಟು ಆರೋಪಿಗಳು ಪರಾರಿಯಾಗಿದ್ದರು. ನಂತರ ನಟಿ ನಿರ್ದೇಶಕರೊಬ್ಬರ ಮನೆಗೆ ತೆರಳಿ ಅಲ್ಲಿಂದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಪ್ರಕರಣ ಸಾಕಷ್ಟು ಸುದ್ದಿಗೆ ಗ್ರಾಸವಾಗಿತ್ತು. ಪ್ರಕರಣ ಸಂಬಂಧ 11ನೇ ಆರೋಪಿಯಾಗಿ ನಟ ದಿಲೀಪ್ ಅವರನ್ನು ಜುಲೈ.10 ರಂದು ಬಂಧನಕ್ಕೊಳಪಡಿಸಲಾಗಿತ್ತು.
ಬಂಧನ ಕುರಿತಂತೆ ಹೇಳಿಕೆ ನೀಡಿದ್ದ ದಿಲೀಪ್, ನಾನು ಮುಗ್ಧ, ವಿನಾ ಕಾರಣ ನನ್ನನ್ನು ಪ್ರಕರಣದಲ್ಲಿ ಸಿಲುಕಿಸಲಾಗಿದೆ. ತನಿಖಾ ತಂಡದೊಂದಿಗೆ ಮೊದಲಿನಿಂದಲೂ ಸಹಕರಿಸುತ್ತಿದ್ದೇನೆಂದು ಹೇಳಿದ್ದರು.