ಚೆನ್ನೈ: ಮೀನುಗಾರನನ್ನು ಕೊಂದ ಶ್ರೀಲಂಕಾ ಸೈನಿಕರ ದೌರ್ಜನ್ಯದ ವಿರುದ್ಧ ಇದೀಗ ತಮಿಳುನಾಡಿನಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದು, ರಾಮೇಶ್ವರಂನಲ್ಲಿ ಸ್ಥಳೀಯ ಮೀನುಗಾರರು ವ್ಯಾಪಕ ಪ್ರತಿಭಟನೆ ನಡೆಸುತ್ತಿದ್ದಾರೆ.
ನಿನ್ನೆಯಷ್ಟೇ ತಮಿಳುನಾಡು ಸರ್ಕಾರ ಲಂಕಾ ಸೇನೆ ಬಂಧಿಸಿದ್ದ 85 ಮೀನುಗಾರರನ್ನು ಬಿಡುಗಡೆ ಮಾಡಿಸುವಂತೆ ಕೋರಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿತ್ತು. ಪತ್ರದಲ್ಲಿ ಮೀನುಗಾರರ ಬಿಡುಗಡೆ ಮತ್ತು ಅವರಿಂದ ವಶಪಡಿಸಿಕೊಳ್ಳಲಾದ 128 ಬೋಟ್ ಗಳು ಮತ್ತು ಮೀನುಗಾರಿಕಾ ವಸ್ತುಗಳನ್ನು ವಾಪಸ್ ಕೊಡಿಸಬೇಕು ಎಂದು ಸಿಎಂ ಪಳನಿ ಸ್ವಾಮಿ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದರು. ಅಲ್ಲದೆ ಪ್ರತಿನಿತ್ಯ ಭಾರತೀಯ ಮೀನುಗಾರರು ಈ ಬಗ್ಗೆ ಸಮಸ್ಯೆ ಅನುಭವಿಸುತ್ತಿದ್ದು. ಈ ಕೂಡಲೇ ಇದಕ್ಕೆ ಶಾಶ್ವತ ಪರಿಹಾರ ಆಲೋಚಿಸಬೇಕು ಮತ್ತು ವಿದೇಶಾಂಗ ಇಲಾಖೆಯ ಮೂಲಕ ಬಂಧನಕ್ಕೀಡಾಗಿರುವ ಮೀನುಗಾರರನ್ನು ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದರು.
ಇದಾದ ಕೆಲವೇ ಗಂಟೆಗಳಲ್ಲಿ ಸೋಮವಾರ ಸಂಜೆ ಶ್ರೀಲಂಕಾ ಸೈನಿಕರು ಭಾರತೀಯ ಮೀನುಗಾರರ ಮೇಲೆ ಗುಂಡಿನ ದಾಳಿ ನಡೆಸಿ ಕ್ರೌರ್ಯ ಮೆರೆದಿದ್ದಾರೆ. ಘಟನೆಯಲ್ಲಿ ಓರ್ವ ಮೀನುಗಾರ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತೋರ್ವನ ಕಾಲಿಗೆ ಗುಂಡು ತಗುಲಿದೆ. ಸಂಜೆ ವೇಳೆ ಘಟನೆ ಸಂಭವಿಸಿತಾದರೂ ಲಂಕಾ ಸೈನಿಕರಿಂದ ತಪ್ಪಿಸಿಕೊಂಡು ಮೃತ ದೇಹವನ್ನು ರಾಮೇಶ್ವರಂ ದಡಕ್ಕೆ ಸೇರಿಸುವಷ್ಟರಲ್ಲಿ ರಾತ್ರಿ 12.30 ಆಗಿತ್ತು ಎಂದು ರಾಮೇಶ್ವರಂ ಮೀನುಗಾರರ ಒಕ್ಕೂಟದ ಅಧ್ಯಕ್ಷ ಪಿ ಶೇಷುರಾಜ್ ಅವರು ತಿಳಿಸಿದ್ದಾರೆ.
Advertisement