"ಅಂದು ಹೇಗೆ ಸ್ಥಳೀಯ ಭಾಷೆಗಳಲ್ಲಿ ದೈನಿಕಗಳ ಮುದ್ರಣ ಪ್ರಾಮುಖ್ಯತೆ ಪಡೆದಿತ್ತೋ ಇಂದಿಗೂ ಅದೇ ಪ್ರಾಮುಖ್ಯತ ಪತ್ರಿಕೆಗಳಿಗೆ ಇದೆ. ಮಾಧ್ಯಮಗಳು ಮತ್ತು ಪತ್ರಿಕೆಗಳ ಮೇಲೆ ಜನರು ಇರಿಸಿರುವ ವಿಶ್ವಾಸಾರ್ಹತೆಯನ್ನು ಕಾಪಾಡಿಕೊಳ್ಳಲು ಹೆಚ್ಚಿನ ಪ್ರಯತ್ನ ಮಾಡಬೇಕು. ಮಾಧ್ಯಮ ಸಂಸ್ಥೆಗಳ ನಡುವಿನ ಆರೋಗ್ಯಕರ ಸ್ಪರ್ಧೆ ಪ್ರಜಾಪ್ರಭುತ್ವಕ್ಕೆ ಆರೋಗ್ಯಕರವಾಗಿರುತ್ತದೆ. ಸಾರ್ವಜನಿಕ ಹಿತಾಸಕ್ತಿ ಮೇರೆಗೆ ಸಂಪಾದಕೀಯಗಳ ರಚನೆಯಾಗಬೇಕು. "ಮಾಧ್ಯಮಗಳು ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿದ್ದು, ಅದಕ್ಕೆ ಖಂಡಿತಾ ಅಧಿಕಾರವಿದೆ. ಆದರೆ ಆ ಅಧಿಕಾರವನ್ನು ದುರುಪಯೋಗ ಪಡಿಸಿಕೊಳ್ಳುವುದು ಅಪರಾಧ ಎಂದು ಮಹಾತ್ಮಾ ಗಾಂಧಿ ಹೇಳುತ್ತಿದ್ದರು. ಇತ್ತೀಚೆಗೆ ಸಾಕಷ್ಟು ಸುದ್ದಿ ಪತ್ರಿಕೆಗಳು ಹಾಗೂ ಮಾಧ್ಯಮಗಳು ಸಾಕಷ್ಟು ರಾಜಕೀಯ ಕೇಂದ್ರಿತವಾಗುತ್ತಿವೆ. ರಾಜಕೀಯ ಹೊರತಾಗಿಯೂ ದೇಶದಲ್ಲಿ ಸಾಕಷ್ಟು ಸಂಗತಿಗಳಿವೆ. ಮಾಧ್ಯಮಗಳು 125 ಕೋಟಿ ಭಾರತೀಯರನ್ನು ಪ್ರತಿನಿಧಿಸುವ ಸಂಪರ್ಕ ತಾಣಗಳಾಗಿದ್ದು, ಇನ್ನು ಸಾಕಷ್ಟು ವಿಚಾರಗಳ ಕುರಿತು ಮಾಧ್ಯಮಗಳು ಬೆಳಕು ಚೆಲ್ಲಬೇಕು" ಎಂದು ಪ್ರಧಾನಿ ಮೋದಿ ಹೇಳಿದರು.