ಚೆನ್ನೈ : ರಾಷ್ಟ್ರಪತಿ ರಾಮನಾಥ್ ಕೋವಿಂದ್ ಇಂದು ಚೆನ್ನೈನಲ್ಲಿರುವ ಕಾವೇರಿ ಆಸ್ಪತ್ರೆಗೆ ಆಗಮಿಸಿ ಡಿಎಂಕೆ ಹಿರಿಯ ನಾಯಕ ಕರುಣಾನಿಧಿ ಅವರ ಆರೋಗ್ಯ ವಿಚಾರಿಸಿದರು.
ಹೈದ್ರಾಬಾದ್ ನಿಂದ ಆಗಮಿಸಿದ ರಾಷ್ಟ್ರಪತಿ , ವಿಮಾನ ನಿಲ್ದಾಣದಿಂದ ನೇರವಾಗಿ ಕರುಣಾನಿಧಿ ಚಿಕಿತ್ಸೆ ಪಡೆಯುತ್ತಿರುವ ಕಾವೇರಿ ಆಸ್ಪತ್ರೆಗೆ ಆಗಮಿಸಿದರು.
ನಂತರ ಆಸ್ಪತ್ರೆಯಲ್ಲಿದ್ದ ಡಿಎಂಕೆ ಕಾರ್ಯಾಧ್ಯಕ್ಷ ಎಂ. ಕೆ. ಸ್ಟಾಲಿನ್ , ಮತ್ತು ಡಿಎಂಕೆ ಸಂಸದೆ ಕನ್ನಿಮೊಳಿ ಅವರೊಂದಿಗೆ ಕರುಣಾನಿಧಿ ಆರೋಗ್ಯ ಕುರಿತಂತೆ ರಾಮನಾಥ್ ಕೋವಿಂದ್ ಮಾಹಿತಿ ಪಡೆದುಕೊಂಡರು.
ಕರುಣಾನಿಧಿ ಆರೋಗ್ಯ ಕುರಿತಂತೆ ಅವರ ಕುಟುಂಬ ಸದಸ್ಯರು ಹಾಗೂ ವೈದ್ಯರಿಂದ ಮಾಹಿತಿ ಪಡೆದುಕೊಂಡಿದ್ದು, ಅವರು ಬೇಗನೆ ಗುಣಮುಖರಾಗಲಿ ಎಂದು ಹಾರೈಸುವುದಾಗಿ ರಾಷ್ಟ್ರಪತಿ ಭವನದ ಅಧಿಕೃತ ಟ್ವಿಟರ್ ನಲ್ಲಿ ಹೇಳಲಾಗಿದೆ.
ರಾಮನಾಥ್ ಕೋವಿಂದ್ ಅವರೊಂದಿಗೆ ತಮಿಳುನಾಡು ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಕೂಡಾ ಹಾಜರಿದ್ದರು.
ಹಲವು ಹಿರಿಯ ನಾಯಕರು ಹಾಗೂ ರಾಜಕಾರಣಿಗಳು ಆಸ್ಪತ್ರೆಯಲ್ಲಿರುವ ಕರುಣಾನಿಧಿ ಅವರನ್ನು ಭೇಟಿಯಾಗಲು ಆಗಮಿಸುತ್ತಿದ್ದಾರೆ. ಕಳೆದ ವಾರ ಉಪರಾಷ್ಟ್ರಪತಿ ಎಂ. ವೆಂಕಯ್ಯನಾಯ್ಡು ಆಸ್ಪತ್ರೆಗೆ ಆಗಮಿಸಿ ಆರೋಗ್ಯ ವಿಚಾರಿಸಿದ್ದರು. ನಿನ್ನೆ ದಿನ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಕೇಂದ್ರ ಸಚಿವ ಸುರೇಶ್ ಪ್ರಭು ಭೇಟಿ ನೀಡಿದ್ದರು.
ರಕ್ತದೊತ್ತಡ ಸಮಸ್ಯೆಯಿಂದಾಗಿ ಜುಲೈ 28 ರಿಂದ ಕರುಣಾನಿಧಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
Advertisement