ನೋಯ್ಡಾ: ಫೇಸ್ ಬುಕ್ ನಲ್ಲಿ ಯೋಗ ಗುರು ಬಾಬಾ ರಾಮದೇವ್ ಅವರ ಪತಂಜಲಿ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ಆಚಾರ್ಯ ಬಾಲಕೃಷ್ಣ ಅವರಂತೆ ವರ್ತಿಸುತ್ತಿದ್ದ ನಕಲಿ ಯುವಕನೊಬ್ಬನನ್ನು ಶನಿವಾರ ನೋಯ್ಡಾ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿ ಮೊಮ್ಮದ್ ಜೀಶಾನ್ ಎಂದು ಗುರುತಿಸಲಾಗಿದ್ದು, ಆತನಿಂದ ಮೊಬೈಲ್ ಫೋನ್ ಹಾಗೂ ಎರಡು ಸಿಮ್ ಕಾರ್ಡ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಮೊಮ್ಮದ್ ಜೀಶಾನ್ ಆಚಾರ್ಯ ಬಾಲಕೃಷ್ಣ ಅವರ ಹೆಸರಿನಲ್ಲಿ ನಕಲಿ ಫೇಸ್ ಬುಕ್ ಖಾತೆ ಓಪನ್ ಮಾಡಿ, ಅವರ ಅಭಿಮಾನಿಗಳೊಂದಿಗೆ ಅನುಚಿತ ಸಂಭಾಷಣೆ ನಡೆಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಯ ಬಂಧನದ ಬಳಿಕ ಪ್ರತಿಕ್ರಿಯಿಸಿದ ಪತಂಜಲಿ ವಕ್ತಾರ ಎಸ್ ಕೆ ತಿಜರವಾಲ ಅವರು, ಧಾರ್ಮಿಕ ನಾಯಕರ ಮಾನಹಾನಿಗೆ ಯತ್ನಿಸಲಾಗುತ್ತಿದ್ದು, ಆತನ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಮೊಹಮ್ಮದ್ ಜೀಶಾನ್ ನಡೆಸಿದ ಕೃತ್ಯ ನಮ್ಮ ಸಂಸ್ಕೃತಿಗೆ, ಧರ್ಮಕ್ಕೆ ಹಾಗೂ ಮೌಲ್ಯಗಳಿಗೆ ವಿರುದ್ಧವಾಗಿದ್ದು, ಆರೋಪಿಯ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಬೇಕು ಎಂದು ತಿಜರವಾಲ ಟ್ವೀಟ್ ಮಾಡಿದ್ದಾರೆ.