ನವದೆಹಲಿ: ರಾಷ್ಟ್ರೀಯತೆಯ ಸಿದ್ಧಾಂತಕ್ಕೆ ಬಿಜೆಪಿ ಬದ್ಧವಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭಾನುವಾರ ಹೇಳಿದ್ದಾರೆ.
ರಾಜಧಾನಿ ದೆಹಲಿಯಲ್ಲಿ ನಿರ್ಮಾಣ ಮಾಡಿರುವ ಬಿಜೆಪಿ ನೂತನ ಪ್ರಧಾನ ಕಚೇರಿಯನ್ನು ಉದ್ಘಾಟಿಸಿದ ಬಳಿಕ ಮಾತನಾಡಿರುವ ಅವರು, ಆಲೋಚನೆ, ಕ್ರಮ ಹಾಗೂ ಅನುಷ್ಟಾನ ಯಾವುದೇ ಇರಲಿ ಬಿಜೆಪಿ ರಾಷ್ಟ್ರೀಯತೆಗೆ ಬದ್ಧವಾಗಿದ್ದು, ಪಕ್ಷದ ಮುಖ್ಯ ಧ್ಯೇಯ ನಿಜವಾದ ಪ್ರಜಾಪ್ರಭುತ್ವವಾಗಿದೆ ಎಂದು ಹೇಳಿದ್ದಾರೆ.
ಇದೇ ವೇಳೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರನ್ನು ಕೊಂಡಾಡಿರುವ ಅವರು, ನಿಗದಿ ಪಡಿಸಲಾಗಿದ್ದ ಕಾಲಮಿತಿಯೊಳಗೆ ಬಿಜೆಪಿ ಕಚೇರಿಯನ್ನು ನಿರ್ಮಾಣ ಮಾಡಿದ್ದಕ್ಕಾಗಿ ಅಮಿತ್ ಶಾ ಹಾಗೂ ಅವರ ತಂಡವನ್ನು ಈ ಮೂಲಕ ಅಭಿನಂದಿಸಲು ಇಚ್ಛಿಸುತ್ತೇನೆಂದು ತಿಳಿಸಿದ್ದಾರೆ.
ಶ್ಯಾಮ್ ಪ್ರಸಾದ್ ಮುಖರ್ಜಿ ಮತ್ತು ಪಂಡಿತ್ ದೀನ್ ದಯಾಳ್ ಉಪಾಧ್ಯಾಯರಂತಹ ದೊಡ್ಡ ವ್ಯಕ್ತಿಗಳೊಂದಿಗದೆ ಬಿಜೆಪಿ ತನ್ನ ಕಾರ್ಯಕವನ್ನು ಆರಂಭಿಸಿತ್ತು. ಕಾರ್ಯಕರ್ತರ ತಲೆಮಾರುಗಳು ಪಕ್ಷಕ್ಕಾಗಿ ತಮ್ಮ ಜೀವವನ್ನು ಸಮರ್ಪಿಸಿದ್ದಾರೆ. ದೇಶದಲ್ಲಿರುವ ಹಲವಾರು ರಾಜಕೀಯ ಪಕ್ಷಗಳ ಅಸ್ತಿತ್ವತೆ ಪ್ರಜಾಪ್ರಭುತ್ವದ ಸೌಂದರ್ಯವನ್ನು ಹೆಚ್ಚಿಸಿದೆ. ಭಾರತದಲ್ಲಿ ರಾಜಕೀಯ ಪಕ್ಷ ಸ್ಥಾಪನೆ ಮಾಡುವುದು ಕಠಿಣ ಕೆಲಸವಲ್ಲ. ದೇಶದಲ್ಲಿ ಹಲವಾರು ರಾಜಕೀಯ ಪಕ್ಷಗಳಿದ್ದು, ತಮ್ಮದೇ ದೃಷ್ಟಿ, ಸಿದ್ಧಾಂತ ಹಾಗೂ ಕಾರ್ಯಚಟುವಟಿಕೆಗಳ ಸಂಸ್ಕೃತಿಯನ್ನು ಹೊಂದಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದ ಬಳಿಕ ಬಿಜೆಪಿ ನಾಯಕರು ಹಾಗೂ ಜನ ಸಂಘಗಳು ಎಲ್ಲಾ ಪ್ರಮುಖ ಜನಸಾಮಾನ್ಯ ಚಳುವಳಿಗಳಲ್ಲಿ ಮುಂಚೂಣಿಯಲ್ಲಿದ್ದಾರೆಂದಿದ್ದಾರೆ.
ಮಾಜಿ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿಯವರ ನಾಯಕತ್ವದಲ್ಲಿ ಆಡಳಿರೂಢ ಎನ್'ಡಿಎ ಸರ್ಕಾರವು ಭಾರತೀಯರಲ್ಲಿ ಭರವಸೆಗಳ ಕಿರಣವನ್ನು ಹೆಚ್ಚಿಸಿದೆ ಎಂದು ಪ್ರಧಾನಿ ಮೋದಿಯವರು ಇದೇ ವೇಳೆ ಹೇಳಿದ್ದಾರೆ.