ನವದೆಹಲಿ: ಕೇಂದ್ರಸರ್ಕಾರ ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದು, ದೆಹಲಿ ಸರ್ಕಾರ ಕಾರ್ಯನಿರ್ವಹಿಸದಂತೆ ಮಾಡುತ್ತಿದೆ ಎಂದು ಆಮ್ ಆದ್ಮಿ ಪಕ್ಷದ ನಾಯಕರು ಆರೋಪಿಸಿದ್ದಾರೆ.
ಪ್ರಧಾನಮಂತ್ರಿ ನರೇಂದ್ರಮೋದಿ ಅವರ ಮನೆ ಮುಂದೆ ಪ್ರತಿಭಟನೆಗೆ ಪೊಲೀಸರು ಅನುಮತಿ ನೀಡುತ್ತಿಲ್ಲ, ಪ್ರತಿಭಟನಾ ಮೆರವಣಿಗೆಯನ್ನು ಪಾಲ್ಗೊಳ್ಳುವ ಪಕ್ಷದ ಕಾರ್ಯಕರ್ತರನ್ನು ತಡೆಯಲಾಗುತ್ತಿದೆ ಎಂದು ಟೀಕಿಸಿದ್ದಾರೆ.
ಐಎಎಸ್ ಅಧಿಕಾರಿಗಳ ಮುಷ್ಕರ ಅಂತ್ಯಗೊಳಿಸುವಂತೆ ಒತ್ತಾಯಿಸಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹಾಗೂ ಸಚಿವರುಗಳು ಲೆಪ್ಟಿನೆಂಟ್ ಗೌರ್ವನರ್ ಕಚೇರಿಯಲ್ಲಿ ಕಳೆದ ಆರು ದಿನಗಳ ಹಿಂದೆ ಪ್ರತಿಭಟನೆ ನಡೆಸುತ್ತಿದ್ದಾರೆ.
ಪ್ರಧಾನಮಂತ್ರಿ ಕಚೇರಿ ಅಥವಾ ನಿವಾಸದ ಬಳಿ ಪ್ರತಿಭಟನೆ ನಡೆಸಲು ಎಎಪಿ ಯಾವುದೇ ಅನುಮತಿ ಪಡೆದಿಲ್ಲ. ಈ ಪ್ರದೇಶಗಳಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು, ಪ್ರತಿಭಟನೆ ನಡೆಸುವಂತಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಆಮ್ ಆದ್ಮಿ ಪಕ್ಷದ ಕಾರ್ಯಕರ್ತರ ಪ್ರತಿಭಟನೆ ಹಿನ್ನೆಲೆಯಲ್ಲಿ ಹಿನ್ನೆಲೆಯಲ್ಲಿ ನಾಲ್ಕು ರೈಲ್ವೆ ನಿಲ್ದಾಣ, ಕೇಂದ್ರೀಯ ಸಚಿವಾಲಯ, ಪಟೇಲ್ ಚೌಕಾ, ಉದ್ಯೋಗ ಭವನ ಹಾಗೂ ಲೋಕ ಕಲ್ಯಾಣ ಮಾರ್ಗವನ್ನು ಮುಚ್ಚಲಾಗಿತ್ತು. ಮಂಡಿ ಹೌಸ್ ಬಳಿ ಪ್ರತಿಭಟನೆಗೆ ವ್ಯವಸ್ಥೆ ಮಾಡಲಾಗುವುದು, ಪ್ರತಿಭಟನೆ ನಡೆಸಲು ಮುಂದಾದರೆ ಬಂಧಿಸಲಾಗುವುದು ಎಂದು ಅವರು ಹೇಳಿದ್ದಾರೆ.
ಈ ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಿರುವ ಎಎಪಿ ನಾಯಕರು , ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವ ಕಾರ್ಯಕರ್ತರನ್ನು ತಡೆಯಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಎಪಿ ನಾಯಕ ಸೌರಬ್ ಭಾರದ್ವಾಜ್, ಪ್ರತಿಭಟನೆ ವೇಳೆಯಲ್ಲಿ ಯಾವುದೇ ಹಿಂಸಾಚಾರಕ್ಕೆ ಅವಕಾಶ ನೀಡುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಲೆಪ್ಟಿನೆಂಟ್ ಜನರಲ್ ಅನ್ಯಾಯ ಮಾಡುತ್ತಿದ್ದು, ಜನತೆ ಪ್ರಧಾನಿ ಬಳಿ ನ್ಯಾಯವನ್ನಷ್ಟೇ ಕೇಳಲಿದ್ದಾರೆ. ಆದರೆ, ಪೊಲೀಸರು ಸಾರ್ವಜನಿಕರಿಗೆ ಅವಕಾಶ ಮಾಡಿ ಕೊಡುತ್ತಿಲ್ಲ ಎಂದು ದೆಹಲಿ ಎಎಪಿ ಮುಖ್ಯಸ್ಥ ಗೋಪಾಲ್ ರೈ ಆರೋಪಿಸಿದ್ದಾರೆ.
Advertisement