ಜಮ್ಮು-ಕಾಶ್ಮೀರ ಬಿಕ್ಕಟ್ಟನ್ನು ಮೋದಿ ಸರ್ಕಾರ ತಪ್ಪಾಗಿ ನಿರ್ವಹಿಸಿದೆ: ಡಾ.ಮನಮೋಹನ್ ಸಿಂಗ್

2014ರಲ್ಲಿ ಪ್ರಧಾನಿ ಮೋದಿಯವರು ಚುನಾವಣಾ ಪ್ರಚಾರ ನಡೆಸುತ್ತಿದ್ದಾಗ ಸಾಕಷ್ಟು ಭರವಸೆಗಳನ್ನು ...
ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್
ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್
Updated on

ನವದೆಹಲಿ: 2014ರಲ್ಲಿ ಪ್ರಧಾನಿ ಮೋದಿಯವರು ಚುನಾವಣಾ ಪ್ರಚಾರ ನಡೆಸುತ್ತಿದ್ದಾಗ ಸಾಕಷ್ಟು ಭರವಸೆಗಳನ್ನು ನೀಡಿದ್ದರು. ಅಂತಹ ಭರವಸೆಗಳನ್ನು ಇಂದಿನವರೆಗೆ ಈಡೇರಿಸಿಲ್ಲ, ದೇಶದಲ್ಲಿ 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿದ್ದರು. ಆದರೆ ಎರಡು ಲಕ್ಷ ಉದ್ಯೋಗವನ್ನು ಕೂಡ ನಾವು ನೋಡಿಲ್ಲ. ಬದಲಿಗೆ ಸಣ್ಣ ಉದ್ದಿಮೆದಾರರಿಗೆ ಮತ್ತು ಅಸಂಘಟಿತ ವಲಯಗಳಿಗೆ ತೊಂದರೆಯಾಗಿದೆ ಎಂದು ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಆರೋಪಿಸಿದ್ದಾರೆ.

ದೆಹಲಿಯಲ್ಲಿ ಇಂದು ಕಾಂಗ್ರೆಸ್ ಸಮಗ್ರ ಅಧಿವೇಶನವನ್ನುದ್ದೇಶಿಸಿ ಮಾತನಾಡಿದ ಅವರು, ಜಮ್ಮು-ಕಾಶ್ಮೀರದ ವಿಶೇಷ ಸಮಸ್ಯೆಗಳನ್ನು ಭಾರತ ಗುರುತಿಸಬೇಕು ಮತ್ತು ಅವುಗಳನ್ನು ಬಗೆಹರಿಸಲು ಗಂಭೀರ ಪ್ರಯತ್ನ ನಡೆಸಬೇಕು. ದೇಶದ ಸ್ವಾತಂತ್ರ್ಯ ಸಂಗ್ರಾಮದ ಮುಂಚೂಣಿ ವಹಿಸಿದ್ದ ಕಾಂಗ್ರೆಸ್ ಪಕ್ಷ ಸ್ವಾತಂತ್ರ್ಯ ಸಿಕ್ಕಿದ ನಂತರ ಭಾರತವನ್ನು ಮುಂದಕ್ಕೆ ಸಾಗಿಸಿದೆ. ಅಭಿವೃದ್ಧಿಯಲ್ಲಿ ಕೆಲಸ ಮಾಡಲು ಇಂದು ಕಾಂಗ್ರೆಸ್ ಪಕ್ಷಕ್ಕೆ ಆಹ್ವಾನ ನೀಡಲಾಗಿದೆ. ರಾಹುಲ್ ಗಾಂಧಿಯವರ ನಾಯಕತ್ವದಲ್ಲಿ ನಾವು ಐತಿಹಾಸಿಕ ಪಾತ್ರ ವಹಿಸುತ್ತೇವೆ ಎಂಬ ನಂಬಿಕೆ ನನಗಿದೆ ಎಂದರು.

6 ವರ್ಷಗಳಲ್ಲಿ ನಾವು ರೈತರ ಆದಾಯವನ್ನು ದ್ವಿಗುಣಗೊಳಿಸುವುದಾಗಿ ಪ್ರಧಾನಿ ಭರವಸೆ ನೀಡಿದ್ದರು. ಅದನ್ನು ಸಾಧಿಸಬೇಕೆಂದರೆ ಪ್ರತಿ ವರ್ಷ ಆರ್ಥಿಕ ಬೆಳವಣಿಗೆ ಶೇಕಡಾ 12ರಷ್ಟಿರಬೇಕು. ಅದು ಸಾಧ್ಯವಿಲ್ಲ. ಇದು ಕೇವಲ ಪ್ರಧಾನಿಯವರ ಟೊಳ್ಳು ಭರವಸೆಗಳಷ್ಟೆ ಎಂದು ಟೀಕಿಸಿದರು.

ನೆರೆಯ ದೇಶಗಳೊಂದಿಗೆ ಸ್ನೇಹದ ಪರಿಸರವನ್ನು ಸೃಷ್ಟಿಸಬೇಕಾದ್ದು ಭಾರತದ ಕೆಲಸವಾಗಿದೆ. ಕಾಂಗ್ರೆಸ್ ಪಕ್ಷ ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ನಮ್ಮಲ್ಲಿನ ಸಮಸ್ಯೆಗಳನ್ನು ಶಾಂತಿಯುತವಾಗಿ ಪರಿಹರಿಸಬೇಕಿದೆ. ಪ್ರತಿಕೂಲ ವರ್ತನೆಯಿಂದ ಅದು ಸಾಧ್ಯವಿಲ್ಲ. ಪಾಕಿಸ್ತಾನ ನಮ್ಮ ನೆರೆಯ ದೇಶ ಎಂಬುದನ್ನು ನಾವು ನೆನಪಿನಲ್ಲಿಟ್ಟುಕೊಳ್ಳಬೇಕು. ಆದರೆ ಅದು ಭಯೋತ್ಪಾದನೆಗೆ ಕೊಡುವ ಬೆಂಬಲವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಉಪ ಖಂಡದಲ್ಲಿನ ಶಾಂತಿಗೆ ಭಯೋತ್ಪಾದನೆ ಸಮಸ್ಯೆ ಎಂಬುದನ್ನು ನಾವು ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಬೇಕು ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com