ಕರ್ತಾರ್ಪುರ ಕಾರಿಡಾರ್: ನ.26ಕ್ಕೆ ರಾಷ್ಟ್ರಪತಿ ಕೋವಿಂದ್, ಪಂಜಾಬ್ ಸಿಎಂರಿಂದ ಶಂಕುಸ್ಥಾಪನೆ

ಬಹು ನಿರೀಕ್ಷಿತ ಕರ್ತಾರ್ಪುರ ಕಾರಿಡಾರ್ ಯೋಜನೆಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹಾಗೂ ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಅವರು ನ.26 ರಂದು ಶಂಕುಸ್ಥಾಪನೆ ನೆರವೇರಿಸಲಿದ್ದಾರೆಂದು ಶುಕ್ರವಾರ ತಿಳಿದುಬಂದಿದೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಬಹು ನಿರೀಕ್ಷಿತ ಕರ್ತಾರ್ಪುರ ಕಾರಿಡಾರ್ ಯೋಜನೆಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹಾಗೂ ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಅವರು ನ.26 ರಂದು ಶಂಕುಸ್ಥಾಪನೆ ನೆರವೇರಿಸಲಿದ್ದಾರೆಂದು ಶುಕ್ರವಾರ ತಿಳಿದುಬಂದಿದೆ. 
ಈ ಕುರಿತಂತೆ ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಅವರು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿದ್ದು, ಗುರುದಾಸ್ಪುರ ಅಂತರಾಷ್ಟ್ರೀಯ ಗಡಿ ಬಳಿ ನಿರ್ಮಾಣ ಮಾಡಲು ಯೋಜಿಸಿರುವ ಕರ್ತಾರ್ಪುರ ಕಾರಿಡಾರ್'ಗೆ ನಾನು ಹಾಗೂ ರಾಷ್ಟ್ರಪತಿ ಕೋವಿಂದ್ ಇಬ್ಬರೂ ಜಂಟಿಯಾಗಿ ಶಂಕುಸ್ಥಾಪನೆ ನೆರವೇರಿಸುತ್ತಿದ್ದೇವೆಂಬುದನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಸಂತೋಷವಾಗುತ್ತಿದೆ ಎಂದು ಹೇಳಿದ್ದಾರೆ.
ನ.26 ರಂದು ಕರ್ತಾರ್ಪುರ ಕಾರಿಡಾರ್'ಗೆ ಶಂಕುಸ್ಥಾಪನೆ ನೆರವೇರಿಸುತ್ತಿದ್ದು, ಶ್ರೀ ಗುರು ನಾನಕ್ ದೇವ್ ಅವರ ಭಕ್ತರಿಗೆ ಇದೊಂದು ಅತ್ಯದ್ಭುತ ಕ್ಷಣವಾಗಲಿದೆ ಎಂದು ತಿಳಿಸಿದ್ದಾರೆ. 
ಸಿಖ್ ಧರ್ಮ ಸಂಸ್ಥಾಪಕ ಗುರು ನಾನಕ್ ದೇವ್ ಅವರ 550ನೇ ಜನ್ಮ ದಿನಾಚರಣೆ ಹಿನ್ನಲೆಯಲ್ಲಿ ಅಂತರಾಷ್ಟ್ರೀಯ ಗಡಿಗೆ ಹೊಂದಿಕೊಂಡಂತೆ ತನ್ನ ನೆಲದಲ್ಲಿರುವ ಗುರುನಾನಕ್ ಅವರ ಸಮಾಧಿ ಸ್ಥಳ ಕರ್ತಾರ್ಪುರ ಸಾಹಿಬ್'ಗೆ ತೆರಳುಿವ ಹಾದಿಯನ್ನು ಭಾರತಿಯ ಸಿಕ್ಖರಿಗೆ ಮುಕ್ತಗೊಳಿಸುವುದಾಗಿ ನಿನ್ನೆಯಷ್ಟೇ ಪಾಕಿಸ್ತಾನ ಘೋಷಣೆ ಮಾಡಿತ್ತು. 
ಪಂಜಾಬ್'ನ ಗುರುದಾಸ್ಪುರದಲ್ಲಿರುವ ಡೇರಾ ಬಾಬಾ ನಾನಕ್'ನಿಂದ ಅಂತಾರಾಷ್ಟ್ರೀಯ ಗಡಿವರೆಗೆ ನಾವು ಕಾರಿಡಾರ್ ಅಭಿವೃದ್ಧಿಪಡಿಸುತ್ತೇವೆ. ಗಡಿಯಾಚೆಯಿಂದ ಕರ್ತಾರ್ಪುರವರೆಗೆ ನೀವೂ ಕಾರಿಡಾರ್ ಅಭಿವೃದ್ಧಿ ಮಾಡಿ ಎಂದು ಕೇಂದ್ರ ಸರ್ಕಾರ ಪಾಕಿಸ್ತಾನಕ್ಕೆ ಗುರುವಾರವಷ್ಟೇ ಸಲಹೆ ಮಾಡಿತ್ತು. ಇದಾದ ಬೆನ್ನಲ್ಲೇ ಸಿಖ್ ಭಕ್ತರಿಗೆ ಗುರು ನಾನಕ್'ರ ಸಮಾಧಿ ದರ್ಶನಕ್ಕೆ ಅವಕಾಶ ಕಲ್ಪಿಸುವುದಾಗಿ ಪಾಕಿಸ್ತಾನ ಘೋಷಣೆ ಮಾಡಿದೆ. 
ಸಿಖ್ ಧರ್ಮ ಸಂಸ್ಥಾಪಕ ಗುರು ನಾನಕ್ ಅವರ ಸಮಾಧಿ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ನರೋವಲ್ ಜಿಲ್ಲೆಯಲ್ಲಿದೆ. ಅಂತರಾಷ್ಟ್ರೀಯ ಗಡಿಯಲ್ಲಿ ನಿಂತರೆ ಸಮಾಧಿ ಇರುವ ಕರ್ತಾರ್ಪುರ ಗುರುದ್ವಾರ ಕಾಣುತ್ತದೆ. ಆದರೆ, ಅಲ್ಲಿಗೆ ಹೋಗಲು ಸಿಕ್ಖರು ಪಾಕಿಸ್ತಾನದ ವೀಸಾಗೆ ಅರ್ಜಿ ಸಲ್ಲಿಸಬೇಕು. 
ಪಾಕಿಸ್ತಾನ ಪ್ರಧಾನಿ ಇರ್ಮಾನ್ ಖಾನ್ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು ಅವರು ಕರ್ತಾರ್ಪುರ ಕಾರಿಡಾರ್'ನ್ನು ಪಾಕಿಸ್ತಾನ ತೆರೆಯಲಿದೆ ಎಂದು ಹೇಳಿದ್ದರು. 
ಕರ್ತಾರ್ಪುರ ಸಾಹಿಬ್ ಹಾಗೂ ಗುರುದಾಸ್ಪುರದ ಡೇರಾ ಬಾಬಾ ನಾನಕ್ ನಡುವೆ ನೇರ ಕಾರಿಡಾರ್ ನಿರ್ಮಾಣಕ್ಕೆ ಬೇಡಿಕೆ ಇದೆ. ಉಭಯ ದೇಶಗಳ ಸಂಬಂಧ ಹಳಸಿರುವ ಹಿನ್ನಲೆಯಲ್ಲಿ ಡೇರಾ ಬಾಬಾ ನಾನಕ್ ಬಳಿ ಬೃಹತ್ ಸಾಮರ್ಥ್ಯದ ಟೆಲಿಸ್ಕೋಪ್ ಅಳವಡಿಸಿ, ಕರ್ತಾರ್ಪುರ ಸಾಹಿಬ್ ದರ್ಶನ ಮಾಡಿಸಲು ಕೇಂದ್ರ ಸರ್ಕಾರ ಉದ್ದೇಶಿಸಿದೆ ಎಂದು ವರದಿಗಳು ತಿಳಿಸಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com