ನವದೆಹಲಿ: ರಾಜಧಾನಿ ದೆಹಲಿಯಲ್ಲಿ ನಡೆಯುತ್ತಿರುವ 2 ದಿನಗಳ ಕಿಸಾನ್ ರ್ಯಾಲಿಯಲ್ಲಿ ಪಾಲ್ಗೊಳ್ಳುವ ಸಲುವಾಗಿ ತಲೆಬುರುಡೆಗಳನ್ನು ಹಿಡಿದು ದೆಹಲಿಗೆ ಆಗಮಿಸಿರುವ ತಮಿಳುನಾಡು ರೈತರು, ಸಂಸತ್ತಿಗೆ ಹೋಗುವುದನ್ನು ತಡೆಹಿಡಿದಿದ್ದೇ ಆದರೆ, ಬೆತ್ತಲೆಗೊಂಡು ಪ್ರತಿಭಟನೆ ನಡೆಸುವುದಾಗಿ ಶುಕ್ರವಾರ ಬೆದರಿಕೆ ಹಾಕಿದ್ದಾರೆ.
ನ್ಯಾಷನಲ್ ಸೌತ್ ಇಂಡಿಯನ್ ರಿವರ್ ಇಂಟರ್ಲಿಂಕಿಂಗ್ ಅಗ್ರಿಕಲ್ಚರ್ಸ್ ಅಸೋಸಿಯೇಶನ್’ನ 1,200 ಸದಸ್ಯರು ಈಗಾಗಲೇ ರಾಜಧಾನಿ ದೆಹಲಿ ತಲುಪಿದ್ದಾರೆಂದು ಪಿ.ಅಯ್ಯಕನ್ನು ಅವರು ಹೇಳಿದ್ದಾರೆ.
ಸಾವಿರಾರು ರೈತರು ರಾಮ್ ಲೀಲಾ ಮೈದಾನದಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ಶುಕ್ರವಾರ ಈ ರೈತರು ಸಂಸತ್ತಿಗೆ ತೆರಳುತ್ತಾರೆ. ಪ್ರತಿಭಟನೆ ವೇಳೆ ಸಾಲ ಮನ್ನಾ ಸೇರಿ ವಿವಿಧ ಬೇಡಿಕೆಗಳಿಗೆ ರೈತರು ಆಗ್ರಹಿಸುತ್ತಾರೆಂದು ತಿಳಿಸಿದ್ದಾರೆ.
ತಿರುಚಿ ಹಾಗೂ ಕರೂರಿನಲ್ಲಿಯೂ ಸಂಘಟನೆಗೆ ಸೇರಿದ ಹಲವಾರು ರೈತರಿದ್ದು, ಎಲ್ಲಾ ರೈತರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಬೇಕೆಂದು ಅಯ್ಯಕನ್ನು ಅವರು ಕರೆ ನೀಡಿದ್ದಾರೆ.
ರೈತರ ಸಾಲ ಮನ್ನಾ, ಬೆಲ ನಿಗದಿ, ರೈತರಿಗೆ ತಿಂಗಳಿಗೆ ರೂ.5,000 ಪಿಂಚಣಿ ನೀಡಬೇಕೆಂಬುದು ನಮ್ಮ ಪ್ರಮುಖ ಬೇಡಿಕೆಯಾಗಿದೆ ಎಂದಿದ್ದಾರೆ.
ಪ್ರತಿಭಟನೆಯಲ್ಲಿ ರೈತರ ನಾಯಕರು ಹಾಗೂ ಸಂಘಟನೆಗೆ ಸೇರಿದ ಇಬ್ಬರು ಎರಡು ತಲೆಬುರುಡೆಗಳನ್ನು ಹಿಡಿದು ಪ್ರತಿಭಟನೆಯನ್ನು ಭಾಗವಹಿಸಿದ್ದಾರೆ. ಸಾಲ ಮನ್ನಾ ಮಾಡಲು ಸಾಧ್ಯವಾಗದೆ ನಮ್ಮೊಂದಿಗಿದ್ದ ಇಬ್ಬರು ರೈತರು ಆತ್ಮಹತ್ಯೆಗ ಶರಣಾಗಿದ್ದರು. ಆ ಇಬ್ಬರು ರೈತರ ತಲೆಬುರುಡೆಗಳಿವು ಎಂದು ಹೇಳಿದ್ದಾರೆ.
ನಮಗೆ ಬೆಳೆ ಬೆಳೆಯಲು ನೀರಿಲ್ಲ. ಕಳದ 5 ವರ್ಷಗಳಿಂದ ಬರ ಪರಿಸ್ಥಿತಿಯನ್ನು ಎದುರಿಸುತ್ತಿದ್ದೇವೆ. ಈ ವರ್ಷ ಕೂಡ ಇದೇ ಪರಿಸ್ಥಿತಿ ಮುಂದುವರೆದಿದೆ. ನಾಳೆ ನಾವು ಸಂಸತ್ತಿಗೆ ತೆರಳುತ್ತಿದ್ದೇವೆ. ಒಂದು ವೇಳೆ ಪೊಲೀಸರು ನಮ್ಮನ್ನು ತಡೆಹಿಡಿದಿದ್ದೇ ಆದರೆ, ಬೆತ್ತಲೆಗೊಂಡು ಪ್ರತಿಭಟನೆ ನಡೆಸುತ್ತೇವೆಂದು ತಿಳಿಸಿದ್ದಾರೆ.
Advertisement