ದೆಹಲಿ: ಸಾರ್ವಜನಿಕ ಸೇವೆಗಳು ಮನೆ ಬಾಗಿಲಿಗೆ, ಎಎಪಿ ಸರ್ಕಾರದಿಂದ ಚಾಲನೆ !

ರಾಷ್ಟ್ರ ರಾಜಧಾನಿ ಜನರಿಗೆ 40 ಸಾರ್ವಜನಿಕ ಸೇವೆಗಳನ್ನು ಮನೆ ಬಾಗಿಲಿಗೆ ಒದಗಿಸುವ ಐತಿಹಾಸಿಕ ಹೆಜ್ಜೆ ಹಾಗೂ ಕ್ರಾಂತಿಕಾರಿಕ ಬದಲಾವಣೆ ಎಂದೇ ಕರೆಯಲಾಗುತ್ತಿರುವ ಯೋಜನೆಗೆ ದೆಹಲಿಯಲ್ಲಿ ಇಂದು ಆಮ್ ಆದ್ಮಿ ಸರ್ಕಾರ ಚಾಲನೆ ನೀಡಿದೆ.
ಅರವಿಂದ್ ಕೇಜ್ರಿವಾಲ್
ಅರವಿಂದ್ ಕೇಜ್ರಿವಾಲ್

ನವದೆಹಲಿ: ರಾಷ್ಟ್ರ ರಾಜಧಾನಿ  ಜನರಿಗೆ 40 ಸಾರ್ವಜನಿಕ ಸೇವೆಗಳನ್ನು ಮನೆ ಬಾಗಿಲಿಗೆ ಒದಗಿಸುವ  ಐತಿಹಾಸಿಕ ಹೆಜ್ಜೆ  ಹಾಗೂ ಕ್ರಾಂತಿಕಾರಿಕ ಬದಲಾವಣೆ ಎಂದೇ ಕರೆಯಲಾಗುತ್ತಿರುವ  ಯೋಜನೆಗೆ  ದೆಹಲಿಯಲ್ಲಿ  ಇಂದು ಆಮ್ ಆದ್ಮಿ  ಸರ್ಕಾರ  ಚಾಲನೆ ನೀಡಿದೆ.

ದೆಹಲಿ ಸಚಿವಾಲಯದಲ್ಲಿ ಈ ಯೋಜನೆಗೆ ಇಂದು ಚಾಲನೆ ನೀಡಿ ಮಾತನಾಡಿದ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಸರ್ಕಾರ ಕಚೇರಿಗಾಗಿ ಜನರು ಇನ್ನು ಮುಂದೆ  ಸರದಿ ಸಾಲಿನಲ್ಲಿ ನಿಂತು ಸಮಯ ವ್ಯರ್ಥ ಮಾಡುವ ಅಗತ್ಯವಿಲ್ಲ ಎಂದರು.

ಇದು  ಆಡಳಿತ ಯುಗದ ಅಂತ್ಯವಾಗಿದ್ದು,  ಹೊಸ ಯುಗ ಆರಂಭವಾಗಿದೆ.  ಸರ್ಕಾರ ನಿಮ್ಮ ಮನೆ ಬಾಗಿಲಿಗೆ ಬಂದು ನಿಮ್ಮ ಸೇವೆ ಮಾಡಲಾಗಿದೆ. ಪ್ರಾಮಾಣಿಕ ರೀತಿಯಲ್ಲಿ ಸರ್ಕಾರ ಸಾರ್ವಜನಿಕರ ಸೇವೆ ಮಾಡಲಿದೆ ಎಂದು ಕೇಜ್ರಿವಾಲ್ ಹೇಳಿದರು.

ಇದೊಂದು ಕ್ರಾಂತಿಕಾರಿಕ ರೀತಿಯ ಬದಲಾವಣೆಯಾಗಿದೆ. ಕೇವಲ 1076 ಕರೆ ಮಾಡಿದ್ದರೆ  ಅವರ ಬಯಸಿದ ಸೇವೆ ನೀಡಲಾಗುತ್ತದೆ. 50 ರೂಪಾಯಿ ಪಾವತಿಸಿದ್ದರೆ  ಮನೆ ಬಾಗಿಲಲ್ಲೇ 40 ಸೇವೆ ಪಡೆಯಬಹುದು , ಯಾವುದೇ ಅಡ್ಡಿ ಇಲ್ಲದಂತೆ ಕೆಲಸವನ್ನು ತ್ವರಿತವಾಗಿ , ಸುಲಭವಾಗಿ ಮಾಡಿಕೊಡಲಾಗುತ್ತದೆ ಎಂದು ಅವರು ತಿಳಿಸಿದರು.

ಈ ಯೋಜನೆಯಡಿ ವಿವಾಹ, ಜಾತಿ , ಆದಾಯ, ಜನ್ಮ, ಮರಣ  ಪ್ರಮಾಣ ಪತ್ರ, ನಕಲಿ ಆರ್ ಸಿ ಸೇರಿದಂತೆ 40 ಸೇವೆಗಳನ್ನು ಒದಗಿಸಲಾಗುತ್ತಿದೆ. ಅಲ್ಲದೇ ಚಾಲನ ಪರವಾನಗಿ, ನೀರು, ಒಳಚರಂಡಿ ಸಂಪರ್ಕ ಅಥವಾ ಸ್ಥಗಿತಗೊಳಿಸಲಾಗುತ್ತದೆ. ಮೊಬೈಲ್ ಸಹಾಯಕದ  ಮೂಲಕ ಬೆಳಗ್ಗೆ 8 ರಿಂದ ರಾತ್ರಿ 10 ಗಂಟೆಯವರೆಗೂ  ಸೇವೆ ಒದಗಿಸಲಾಗುತ್ತದೆ

11 ಜಿಲ್ಲೆಗಳಲ್ಲಿ ತಲಾ 6 ರಂತೆ ಇಂತಹ  ಮೊಬೈಲ್ ಸಹಾಯಕಗಳಿದ್ದು, ಅವುಗಳನ್ನು ಜಿಲ್ಲಾ ಮೇಲ್ವಿಚಾರಕರು ನಿರ್ವಹಣೆ ಮಾಡುತ್ತಾರೆ . ಒಂದು ವೇಳೆ ಸೇವೆಯಲ್ಲಿ ಏನಾದರೂ ತೊಂದರೆ ಉಂಟಾದಲ್ಲಿ ಅದೇ ನಂಬರ್ ನಿಂದ ಜನರು ದೂರು ದಾಖಲಿಸಬಹುದಾಗಿದೆ.

ಇದೇ ಸಂದರ್ಭದಲ್ಲಿ ಮಾತನಾಡಿದ ಆಡಳಿತ ಸುಧಾರಣಾ ಖಾತೆ ಸಚಿವ ಕೈಲಾಶ್ ಗೆಹ್ಲೋಟ್, ಮುಂಬರುವ  ತಿಂಗಳಲ್ಲಿ ಈ ಯೋಜನೆಯನ್ನು 100 ಸೇವೆಗಳಿಗೆ ವಿಸ್ತರಿಸುವ ಗುರಿಯನ್ನು ಸರ್ಕಾರ ಹೊಂದಿದೆ ಎಂದು ತಿಳಿಸಿದರು.

 ಪಡಿತರವನ್ನು ಕೂಡಾ ಮನೆ ಬಾಗಿಲಿಗೆ  ಒದಗಿಸಲು ಬಯಸಿರುವುದಾಗಿ  ತಿಳಿಸಿದ ಕೇಜ್ರಿವಾಲ್,   ಪಡಿತರ ಸಂಬಂಧ ಎಲ್ಲಾ ವಿವಾದಗಳನ್ನು ಬಗೆಹರಿಸಿ ಶೀಘ್ರದಲ್ಲಿ ಮನೆ ಬಾಗಿಲಿಗೆ ಒದಗಿಸುವ ವಿಶ್ವಾಸ ಇರುವುದಾಗಿ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com