ಏದುರಾಳಿಗಳ ಅಥವಾ ಶತ್ರುಪಡೆಯ ಸೇನೆಗಿಂತಲೂ ಹೆಚ್ಚಿನ ಸಾಮರ್ಥ್ಯವನ್ನು ಅಳವಡಿಸಿಕೊಂಡರೆ ಮಾತ್ರ ಅವುಗಳನ್ನು ಎದುರಿಸಬಹುದು ಎಂದು ಧನೋವಾ ಹೇಳಿದ್ದಾರೆ. ಅಂತೆಯೇ ಚೀನಾ ಮಿಲಿಟರಿ ಆಧುನೀಕರಣವನ್ನು ಉಲ್ಲೇಖಿಸಿ ಮಾತನಾಡಿದ ಅವರು, ಭಾರತದ ನೆರೆಯ ಎದುರಾಳಿ ಚೀನಾ ಎಂದಿಗೂ ತಟಸ್ಥವಾಗಿ ಕುಳಿತಿಲ್ಲ. ತನ್ನ ಸೇನೆಯನ್ನು ನಿರಂತರವಾಗಿ ಆಧುನೀಕರಿಸುತ್ತಿದೆ. ಅದರ ವಾಯು ಸೇನೆಯು ಆಧುನೀಕರಣದತ್ತ ದಾಪುಗಾಲಿರಿಸಿದ್ದು, ಅದಕ್ಕೆ ತಕ್ಕಂತೆ ನಾವು ಕೂಡ ನಮ್ಮ ಭಾರತೀಯ ವಾಯು ಸೇನೆಯನ್ನು ತಾಂತ್ರಿಕವಾಗಿ ಆಧುನೀಕರಿಸಬೇಕಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ರಾಫೆಲ್ ಜೆಟ್ ಯುದ್ಧ ವಿಮಾನ ಒಪ್ಪಂದ ಮಾಡಿಕೊಂಡಿದ್ದು, ಎಸ್-400 ಕ್ಷಿಪಣಿಗಳನ್ನು ಹೊತ್ತೊಯ್ಯಬಲ್ಲ ಸಾಮರ್ಥ್ಯ ರಾಫೆಲ್ ಯುದ್ಧ ವಿಮಾನಗಳಿಗಿದೆ ಎಂದು ಧನೋವಾ ಹೇಳಿದ್ದಾರೆ.