ಉತ್ತರ ಪ್ರದೇಶದಲ್ಲಿ ಕಾಮುಕರ ಅಟ್ಟಹಾಸ, ಯುವತಿಯನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ
ಮುಜಾಫರ್ ನಗರ: ಹೈದ್ರಾಬಾದಿನಲ್ಲಿ ಪಶು ವೈದ್ಯೆಯನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರವೆಸಗಿದ್ದ ನಾಲ್ವರು ಕಾಮುಕರನ್ನು ಪೊಲೀಸರು ಎನ್ ಕೌಂಟರ್ ನಲ್ಲಿ ಹತ್ಯೆ ಮಾಡಿದ್ದರೂ ದೇಶದಲ್ಲಿ ಮಹಿಳೆಯರ ಅಪಹರಣ, ಸಾಮೂಹಿಕ ಅತ್ಯಾಚಾರದಂತಹ ಘಟನೆಗಳು ಮರು ಕಳಿಸುತ್ತಲೇ ಇವೆ.
ಉತ್ತರ ಪ್ರದೇಶದ ಮುಜಾಫರ್ ನಗರದಲ್ಲಿ ಕಾಮುಕರು ಅಟ್ಟಹಾಸ ಮೆರೆದಿದ್ದಾರೆ. 16 ವರ್ಷದ ಯುವತಿಯನ್ನು ಅಪಹರಿಸಿ, ಸಾಮೂಹಿಕ ಅತ್ಯಾಚಾರ ವೆಸಗಿದ್ದಾರೆ ಎಂದು ಪೊಲೀಸರು ಇಂದು ತಿಳಿಸಿದ್ದಾರೆ
ಯುವತಿಯನ್ನು ರಕ್ಷಿಸಲಾಗಿದೆ. ಸಲ್ಮಾನ್ ಹಾಗೂ ಪರ್ವೇಜ್ ಬಂಧಿತ ಆರೋಪಿಗಳಾಗಿದ್ದಾರೆ ಎಂದು ಠಾಣಾಧಿಕಾರಿ ಅನಿಲ್ ಕಾಪೆರ್ವನ್ ಹೇಳಿದ್ದಾರೆ. ಅಂಗಡಿಗೆ ಹೋಗಿ ಬರುತ್ತೇನೆಂದು ಹೇಳಿ ಗುರುವಾರ ಮನೆ ಬಿಟ್ಟು ಹೋಗಿದ್ದ ಯುವತಿ ಅಲ್ಲಿಂದ ಪತ್ತೆಯಾಗಿರಲಿಲ್ಲ.
ಯುವತಿಯ ತಂದೆ ನೀಡಿದ ದೂರಿನ ಅನ್ವಯ ತನಿಖೆ ನಡೆಸಿ, ಯುವತಿಯನ್ನು ರಕ್ಷಿಸಲಾಗಿದೆ. ಹತ್ತಿರದ ಸ್ಥಳವೊಂದಕ್ಕೆ ಯುವತಿಯನ್ನು ಕರೆದೊಯ್ದು ಆರೋಪಿಗಳು ಅತ್ಯಾಚಾರ ನಡೆಸಿ, ಯಾರಿಗೂ ಹೇಳದಂತೆ ಬೆದರಿಕೆ ಹಾಕಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಪೊಕ್ಸೊ ಕಾಯ್ದೆಯಡಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ವೈದ್ಯಕೀಯ ಪರೀಕ್ಷೆಗಾಗಿ ಯುವತಿಯನ್ನು ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಅನಿಲ್ ಕಾರ್ಪೆವನ್ ತಿಳಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ