ಲಖನೌ: ಉತ್ತರ ಪ್ರದೇಶದ ಚಾಂದೌಲಿ ಜಿಲ್ಲೆಯ ಹಳ್ಳಿಯೊಂದರಲ್ಲಿ ಜಾನುವಾರುಗಳನ್ನು ಸಾಗಿಸುತ್ತಿದ್ದ ಟ್ರಕ್ ವೊಂದು ಗುಡಿಸಲಿಗೆ ನುಗ್ಗಿದ ಪರಿಣಾಮ ಇಬ್ಬರು ಮಹಿಳೆಯರು, ನಾಲ್ವರು ಮಕ್ಕಳು ಸೇರಿದಂತೆ ಸ್ಥಳದಲ್ಲಿಯೇ ಏಳು ಮಂದಿ ಮೃತಪಟ್ಟಿರುವ ಘಟನೆ ಇಂದು ಮುಂಜಾನೆ ನಡೆದಿದೆ.
ಈ ಮಧ್ಯೆ ನಿರ್ಲಕ್ಷ್ಯದ ಕಾರಣ ಸ್ಥಳೀಯ ಪೊಲೀಸ್ ಠಾಣೆಯ ಮೂವರು ಪೊಲೀಸರು ಹಾಗೂ ಒಬ್ಬ ಇನ್ಸ್ ಪೆಕ್ಟರ್ ನನ್ನು ಸೇವೆಯಿಂದ ಅಮಾನತುಗೊಳಿಸಿದೆ.
ಇಂದು ಮುಂಜಾನೆ ಜಾನುವಾರುಗಳನ್ನು ಸಾಗಿಸುತ್ತಿದ್ದ ಟ್ರಕ್ ವೊಂದನ್ನು ಪೊಲೀಸ್ ವ್ಯಾನ್ ಬೆನ್ನತ್ತಿದೆ. ಈ ಸಂದರ್ಭದಲ್ಲಿ ವೇಗದ ಮೇಲೆ ನಿಯಂತ್ರಣ ಸಾಧಿಸಲಾಗಿದೆ ಎಂದು ಟ್ರಕ್ ಚಾಲಕ ವಿದ್ಯುತ್ ಕಂಬವೊಂದಕ್ಕೆ ಢಿಕ್ಕಿ ಹೊಡಿಸಿದ್ದಾನೆ. ಬಳಿಕ ಕಾಳು ರಾಮ್ ಎಂಬವರ ಗುಡಿಸಲಿಗೆ ನುಗ್ಗಿಸಿದ್ದಾನೆ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.
ಮನೆಯಿಂದ ಹೊರಗಡೆ ಇದ್ದ ಕಾಳು ರಾಮ್ , ಆತನ ಮಗ ಹಾಗೂ ಸೊಸೆ ಮಾತ್ರ ಉಳಿದುಕೊಂಡಿದ್ದು, ಉಳಿದ ಏಳು ಮಂದಿ ಮೃತಪಟ್ಟಿದ್ದಾರೆ.
ಆದಾಗ್ಯೂ, ಈ ಘಟನೆಯಿಂದ ಆಕ್ರೋಶಗೊಂಡ ಗ್ರಾಮಸ್ಥರು ಪೊಲೀಸರ ಮೇಲೆ ಕಲ್ಲುತೂರಾಟ ನಡೆಸಿದ್ದಾರೆ. ಜಿಲ್ಲಾಧಿಕಾರಿಗಳು ಬರುವವರೆಗೂ ಮರಣೋತ್ತರ ಪರೀಕ್ಷೆಗಾಗಿ ಮೃತದೇಹಗಳನ್ನು ನೀಡುವುದಿಲ್ಲ ಎಂದು ಪಟ್ಟು ಹಿಡಿದು ಪ್ರತಿಭಟನೆ ನಡೆಸಿದರು.
Advertisement