ನವದೆಹಲಿ: ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಿದ್ದು, ಭಾರತದೊಂದಿಗೆ ಕಾಶ್ಮೀರ ಕಣಿವೆಯನ್ನು ಏಕೀಕರಣ ಮಾಡಿದರೆ ಮಾತ್ರ ಇಲ್ಲಿನ ಜನರ ಅಭಿವೃದ್ಧಿ ಸಾಧ್ಯ ಎಂದು ಕಾಶ್ಮೀರದ ಉನ್ನತ ಮುಸ್ಲಿಂ ಮಂಡಳಿ ಜಮೈತ್ ಉಲಾಮಾ-ಇ-ಹಿಂದ್(ಜುಹ್) ಗುರುವಾರ ನಿರ್ಣಯ ಹೊರಡಿಸಿದೆ.
ಮಂಡಳಿಯ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಈ ನಿರ್ಣಯ ಹೊರಡಿಸಲಾಯಿತು. ಈ ಮೂಲಕ ಕಾಶ್ಮೀರದ ಉನ್ನತ ಮಟ್ಟದ ಮುಸ್ಲಿಂ ಸಂಘಟನೆಯಿಂದಲೇ ಪಾಕಿಸ್ತಾನಕ್ಕೆ ವಿರೋಧ ಎದುರಾಗಿದೆ. ಕಾಶ್ಮೀರ ಪಾಕಿಸ್ತಾನಕ್ಕೆ ಸೇರಬೇಕು, ಅಂದರೆ ಮಾತ್ರ ಅಲ್ಲಿನ ಜನರ ಆಸೆ, ಆಕಾಂಕ್ಷೆ, ಆಶೋತ್ತರಗಳು ಈಡೇರಲು ಸಾಧ್ಯ ಎಂದು ಹೇಳಿಕೊಂಡು ಬರುತ್ತಿರುವ ಪಾಕಿಸ್ತಾನಕ್ಕೆ ಆಘಾತವುಂಟಾದಂತೆ ಆಗಿದೆ.
ಇದೇ ಸಂದರ್ಭದಲ್ಲಿ ಪಾಕಿಸ್ತಾನದ ಮೇಲೆ ತೀವ್ರ ವಾಗ್ದಾಳಿ ನಡೆಸಿದ ಸಂಘ, ನೆರೆ ದೇಶದ ದುಷ್ಟ ಶಕ್ತಿಗಳು ಇಲ್ಲಿನ ಜನರನ್ನು ಕತ್ತಿ, ಗುರಾಣಿಗಳಂತೆ ಬಳಸಿಕೊಂಡು ಕಾಶ್ಮೀರವನ್ನು ಹಾಳುಮಾಡುತ್ತಿದ್ದಾರೆ ಎಂದು ಆರೋಪಿಸಿದೆ.
ಕಾಶ್ಮೀರ ಭಾರತಕ್ಕೆ ಸೇರಿದ್ದು ಎಂದ ಮಾತ್ರಕ್ಕೆ ಇಲ್ಲಿನ ಜನರ ಆಸೆ, ಆಕಾಂಕ್ಷೆಗಳು, ಅವರ ಆತ್ಮಗೌರವ, ಸಾಂಸ್ಕೃತಿಕ ಗುರುತಿನ ಬಗ್ಗೆ ನಮಗೆ ಕಾಳಜಿಯಿಲ್ಲವೆಂದಲ್ಲ. ಕಾಶ್ಮೀರಿಗಳ ಸ್ವಾತಂತ್ರ ನಮಗೆ ಮುಖ್ಯ, ಆದರೆ ಇವೆಲ್ಲವೂ ಸಾಕಾರಗೊಳ್ಳಬೇಕಾದರೆ ಅದು ಭಾರತದೊಂದಿಗೆ ಅವಿಭಾಜ್ಯ ಅಂಗವಾಗಿ ಸೇರಬೇಕು. ಕಾಶ್ಮೀರಿಗಳ ಕಲ್ಯಾಣ ಭಾರತದೊಂದಿಗಿನ ಏಕೀಕರಣದಲ್ಲಿದೆ ಎಂದು ಹೇಳಿದೆ.
ನಾವು ಯಾವುದೇ ಪ್ರತ್ಯೇಕತಾವಾದಿ ಚಳವಳಿ, ಪ್ರತಿಭಟನೆಗಳನ್ನು ಬೆಂಬಲಿಸುವುದಿಲ್ಲ, ಇಂತಹ ಪ್ರತಿಭಟನೆಗಳು ದೇಶಕ್ಕೆ ಹಾನಿಯನ್ನುಂಟುಮಾಡುವುದಲ್ಲದೆ ಕಾಶ್ಮೀರ ಜನರಿಗೆ ಸಹ ಅಪಾಯಕಾರಿ ಎಂದು ಹೇಳಿದೆ.
Advertisement