ನವದೆಹಲಿ: ಸಾಕಷ್ಟು ಪರಿಶ್ರಮದ ಬಳಿಕವೂ ಪರಿಸ್ಥಿತಿ ನಿಯಂತ್ರಿಸುವಲ್ಲಿ ದೆಹಲಿ ಪೊಲೀಸರು ವಿಫಲರಾಗಿದ್ದು, ಭದ್ರತೆಗೆ ಇದೀಗ ಸೇನಾಪಡೆಗಳನ್ನು ನಿಯೋಜಿಸುವ ಅಗತ್ಯವಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ದೆಹಲಿಯಲ್ಲಿ ಸೃಷ್ಟಿಯಾಗಿರುವ ಪರಿಸ್ಥಿತಿ ಭೀತಿಯನ್ನು ಹುಟ್ಟಿಸುತ್ತಿದೆ. ಸಾಕಷ್ಟು ಪರಿಶ್ರಮದ ಬಳಿಕವೂ ದೆಹಲಿ ಪೊಲೀಸರಿಗೆ ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಭದ್ರತೆಗೆ ಸೇನಾಪಡೆಗಳನ್ನು ನಿಯೋಜಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ಹಿಂಸಾಚಾರ ಹತ್ತಿಕ್ಕಲು ಹಾಗೂ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಹಿಂಸಾಚಾರ ಪೀಡಿತ ಪ್ರೇದಶಗಳಲ್ಲಿ ಈಗಾಗಲೇ ಕರ್ಫ್ಯೂ ಜಾರಿ ಮಾಡಲಾಗಿದೆ. ಉಳಿದ ಪ್ರದೇಶಗಳಲ್ಲೂ ಕರ್ಫ್ಯೂ ಜಾರಿಮಾಡುವ ಅಗತ್ಯವಿದೆ. ಅಲ್ಲದೆ, ಭದ್ರತೆ ನೀಡಲು ಸೇನಾ ಪಡೆಗಳ ನಿಯೋಜಿಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆಯಲಾಗುತ್ತದೆ ಎಂದು ತಿಳಿಸಿದ್ದಾರೆ.
ಪೌರತ್ವ ತಿದ್ದುಪಡಿ ಪರ-ವಿರೋಧವಾಗಿ ಈಶಾನ್ಯ ದೆಹಲಿಯಲ್ಲಿ ಶನಿವಾರ ಸಣ್ಣ ಪ್ರಮಾಧಲ್ಲಿ ಆರಂಭವಾಗಿ, ಭಾನುವಾರ-ಸೋಮವಾರಗಳಂದು ಹಿಂಸಾಚಾರ ರೂಪ ಪಡೆದುಕೊಂಡಿದ್ದ ಪ್ರತಿಭಟನೆ, ಮಂಗಳವಾರ ರಕ್ತಪಾತಕ್ಕೆ ಕಾರಣವಾಗಿತ್ತು. ಮಂಗಳವಾರ ಬೆಳಿಗ್ಗೆಯಿಂದಲೂ ಜಫ್ರಾಬಾದ್ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ಭಾರೀ ಹಿಂಸಾಚಾರ ನಡೆದು, 20 ಮಂದಿ ಸಾವನ್ನಪ್ಪಿದ್ದಾರೆ.
ಘಟನೆಯಲ್ಲಿ 50 ಪೊಲೀಸರು ಸೇರಿದಂತೆ 180 ಮಂದಿ ಗಾಯಗೊಂಡಿದ್ದು, ಅವರ ಪೈಕಿ ಕೆಲವರ ಸ್ಥಿತಿ ಗಂಭೀರವಾಗಿದೆ. ಈ ಹಿನ್ನೆಲೆಯಲ್ಲಿ ನಾಲ್ಕು ಠಾಣಾ ವ್ಯಾಪ್ತಿಯಲ್ಲಿ ಕರ್ಫ್ಯೂ ಜಾರಿಗೊಳಿಸಲಾಗಿದ್ದು, ಹಿಂಸಾಚಾರ ಹತ್ತಿಕ್ಕಲು ಕಂಡಲ್ಲಿ ಗುಂಡಿಕ್ಕಲು ಆದೇಶಿಸಲಾಗಿದೆ. ಅಲ್ಲದೆ, ಪೊಲೀಸರಿಗೆ ಮುಕ್ತ ಹಸ್ತವನ್ನೂ ನೀಡಿದೆ ಎಂದು ವರದಿಗಳು ತಿಳಿಸಿವೆ.
Advertisement