630 ಜೀವ ಉಳಿಸಿದ ಕೊರೋನಾ ವೈರಸ್ ಲಾಕ್‌ಡೌನ್‌: ಅಧ್ಯಯನ

ಮಾರಕ ಕೊರೋನಾ ವೈರಸ್ ನಿಂದಾಗಿ ಭಾರತದಲ್ಲಿ ಹೇರಲಾಗಿದ್ದ ಲಾಕ್ಡೌನ್ ನಿಂದಾಗಿ ದೇಶದಲ್ಲಿ 630 ಮಂದಿ ಜೀವ ಉಳಿದಿದೆ.
ಲಾಕ್ ಡೌನ್
ಲಾಕ್ ಡೌನ್

ನವದೆಹಲಿ: ಮಾರಕ ಕೊರೋನಾ ವೈರಸ್ ನಿಂದಾಗಿ ಭಾರತದಲ್ಲಿ ಹೇರಲಾಗಿದ್ದ ಲಾಕ್ಡೌನ್ ನಿಂದಾಗಿ ದೇಶದಲ್ಲಿ 630 ಮಂದಿ ಜೀವ ಉಳಿದಿದೆ.

ಅರೆ ಇದೇನಿದು ಲಾಕ್ಡೌನ್ ನಿಂದಾಗಿ ದೇಶದಲ್ಲಿ ಉದ್ಯೋಗ ಇಲ್ಲದೆ, ಸರಿಯಾದ ಸಮಯಕ್ಕೆ ಆಹಾರವಿಲ್ಲದೇ ಹಲವರು ಸಾವನ್ನಪ್ಪಿದ್ದಾರೆ ಎಂಬ ಸುದ್ದಿಗಳಿರುವಾಗ ಲಾಕ್ಡೌನ್ ನಿಂದಾಗಿ 630 ಜೀವ ಉಳಿದಿದೆ ಎಂದು ಹೇಳುತ್ತಿದ್ದಾರಲ್ಲ ಎಂದು ನೀವು ಪ್ರಶ್ನಿಸಬಹುದು. ಆದರೆ ಈ ಸುದ್ದಿ ನಿಜ. ಭಾರತದಲ್ಲಿ ಹೇರಲಾಗಿದ್ದ ಲಾಕ್ಡೌನ್ ನಿಂದಾಗಿ ದೇಶದಲ್ಲಿ 630 ಮಂದಿ ಜೀವ ಉಳಿದಿದೆ. ಈ ಬಗ್ಗೆ ಬ್ರಿಟನ್‌ನ ಸರ್ರೆ ವಿಶ್ವವಿದ್ಯಾಲಯದ ವಿಜ್ಞಾನಿಗಳು ನಡೆಸಿದ ಸಂಶೋಧನೆಯಲ್ಲಿ ಈ ಅಂಶ ಬೆಳಕಿಗೆ ಬಂದಿದೆ. 

ಕೋವಿಡ್‌–19 ಹಿನ್ನೆಲೆಯಲ್ಲಿ ದೇಶದಾದ್ಯಂತ ಇದ್ದ ಲಾಕ್‌ಡೌನ್‌ನಿಂದಾಗಿ ದೇಶದಲ್ಲಿ ವಾಯುಮಾಲಿನ್ಯ ಪ್ರಮಾಣ ಇಳಿಕೆಯಾಗಿ, 630 ಅವಧಿಪೂರ್ವ ಮರಣ ತಪ್ಪಿದಂತಾಗಿದೆ. ಅಲ್ಲದೆ, ಅಂದಾಜು 5,174 ಕೋಟಿರೂ ಆರೋಗ್ಯ ವೆಚ್ಚವೂ ಉಳಿತಾಯವಾಗಿದೆ ಎಂದು ಅಧ್ಯಯನವೊಂದು ತಿಳಿಸಿದೆ. 

ಬ್ರಿಟನ್‌ನ ಸರ್ರೆ ವಿಶ್ವವಿದ್ಯಾಲಯದ ವಿಜ್ಞಾನಿಗಳು ಸೇರಿದಂತೆ ಇತರೆ ವಿಶ್ವವಿದ್ಯಾಲಯದ ವಿಜ್ಞಾನಿಗಳು ಲಾಕ್‌ಡೌನ್‌ ಆರಂಭವಾದಾಗಿನಿಂದ ದೆಹಲಿ, ಮುಂಬೈ, ಕೋಲ್ಕತ್ತ, ಚೆನ್ನೈ ಮತ್ತು ಹೈದರಾಬಾದ್‌ ನಗರಗಳಲ್ಲಿ, ವಾಹನ ಮತ್ತು ಇತರೆ ಮೂಲಗಳಿಂದ ಉತ್ಪತ್ತಿಯಾಗುವ ಸೂಕ್ಷ್ಮ ಕಣಗಳ (ಪಿಎಂ 2.5) ಪ್ರಮಾಣವನ್ನು ಅಧ್ಯಯನ ಮಾಡಿದ್ದಾರೆ. ಮಾರ್ಚ್‌ 25ರಿಂದ ಮೇ 11ರವರೆಗೆ ಈ ಅಧ್ಯಯನ ನಡೆದಿದ್ದು, ಈ ಪ್ರಮಾಣವನ್ನು ಕಳೆದ ಐದು ವರ್ಷಕ್ಕೆ ಹೋಲಿಸಲಾಗಿದೆ. ಈ ವರದಿ ‘ಸಸ್ಟೈನೇಬಲ್ ಸಿಟೀಸ್‌ ಆ್ಯಂಡ್‌ ಸೊಸೈಟಿ’ ಹೆಸರಿನ ನಿಯತಕಾಲಿಕದಲ್ಲಿ ಪ್ರಕಟವಾಗಿದೆ. 

ಈ ಸಂದರ್ಭದಲ್ಲಿ ಐದೂ ನಗರಗಳಲ್ಲಿ ವಾಯುಮಾಲಿನ್ಯ ಪ್ರಮಾಣ ಇಳಿಕೆಯಾಗಿರುವುದು ಕಂಡುಬಂದಿದೆ. ಮುಂಬೈನಲ್ಲಿ ಜೀವಕ್ಕೆ ಹಾನಿ ಉಂಟುಮಾಡಬಲ್ಲ ಕಣಗಳ ಪ್ರಮಾಣ ಶೇ 10 ಹಾಗೂ ದೆಹಲಿಯಲ್ಲಿ ಶೇ 54ರಷ್ಟು ಇಳಿಕೆಯಾಗಿತ್ತು. ಉಳಿದ ನಗರಗಳಲ್ಲಿ ಈ ಪ್ರಮಾಣ ಶೇ 24–32ರ ನಡುವಿತ್ತು. ಇದರಿಂದ ಸಾಕಷ್ಟು ಪರಿಸರ ಮಾಲಿನ್ಯ ತಪ್ಪಿದ್ದು, ಪರಿಸರ ಮಾಲೀನ್ಯದಿಂದ ಸಾವನ್ನಪ್ಪುತ್ತಿದ್ದ ಮರಣ ಸಂಖ್ಯೆ ತಪ್ಪಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com