ವ್ಯಾಕ್ಸಿನ್ ಡ್ರೈ ರನ್: ದೇಶದ 4 ರಾಜ್ಯಗಳಲ್ಲಿ 2 ದಿನ ಕೊರೋನಾ ಲಸಿಕೆ ತಾಲೀಮು!

ದೇಶದಾದ್ಯಂತ ಜನವರಿ ತಿಂಗಳಿನಲ್ಲಿ ಜನರಿಗೆ ಕೊರೋನಾ ಲಸಿಕೆ ನೀಡುವ ಅಭಿಯಾನ ಚಾಲನೆಗೆ ಮುಂದಾಗಿರುವ ಕೇಂದ್ರ ಸರ್ಕಾರ, ಇದಕ್ಕಾಗಿ ಪೂರ್ವಭಾವಿಯಾಗಿ ನಾಲ್ಕು ರಾಜ್ಯಗಳಲ್ಲಿ ಸೋಮವಾರ ಮತ್ತು ಮಂಗಳವಾರ 2 ದಿನ ಲಸಿಕೆ ನೀಡಿಕೆಯ ಅಣಕು ಕಾರ್ಯಾಚರಣೆ ನಡೆಸಲಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ದೇಶದಾದ್ಯಂತ ಜನವರಿ ತಿಂಗಳಿನಲ್ಲಿ ಜನರಿಗೆ ಕೊರೋನಾ ಲಸಿಕೆ ನೀಡುವ ಅಭಿಯಾನ ಚಾಲನೆಗೆ ಮುಂದಾಗಿರುವ ಕೇಂದ್ರ ಸರ್ಕಾರ, ಇದಕ್ಕಾಗಿ ಪೂರ್ವಭಾವಿಯಾಗಿ ನಾಲ್ಕು ರಾಜ್ಯಗಳಲ್ಲಿ ಸೋಮವಾರ ಮತ್ತು ಮಂಗಳವಾರ 2 ದಿನ ಲಸಿಕೆ ನೀಡಿಕೆಯ ಅಣಕು ಕಾರ್ಯಾಚರಣೆ ನಡೆಸಲಿದೆ. 

ಇದರ ಅನ್ವಯ ಪಂಜಾಬ್, ಅಸ್ಸಾಂ, ಆಂಧ್ರಪ್ರದೇಶ ಮತ್ತು ಗುಜರಾತ್ ರಾಜ್ಯಗಳ ತಲಾ 2 ಜಿಲ್ಲೆಗಳಲ್ಲಿ 2 ದಿನಗಳ ಲಸಿಕೆ ನೀಡಿಕೆಯ ಅಣಕು ಕಾರ್ಯಾಚರಣೆ ನಡೆಯಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಕೊರೋನಾ ಲಸಿಕೆ ಅಭಿಯಾನಕ್ಕೆ ಅಗತ್ಯವಿರುವ ಕ್ರಮಗಳಾದ ಕೋ-ವಿನ್ ಆ್ಯಪ್ ನಲ್ಲಿ ಲಸಿಕೆ ಫಲಾನುಭವಿಗಳ ಹೆಸರು ನೋಂದಣಿ, ಲಸಿಕೆ ಸಾಗಣೆಯ ಆನ್'ಲೈನ್ ಮೇಲ್ವಿಚಾರಣೆ, ಲಸಿಕೆ ಪಡೆಯುವವರ ಆಯ್ಕೆ, ಲಸಿಕೆ ಕೇಂದ್ರಗಳಲ್ಲಿ ಫಲಾನುಭವಿಗಳಿಗೆ ಅಣಕು ಲಸಿಕೆ ಹಾಕುವುದು ಸೇರಿದಂತೆ ಇನ್ನಿತರ ಪ್ರಕ್ರಿಯೆಗಳನ್ನು ಆ ಅಣಕು ಕಾರ್ಯಾಚರಣೆ ಒಳಗೊಂಡಿರಲಿದೆ. ಅಂದರೆ, ನಿಜವಾದ ಕೊರೋನಾ ಲಸಿಕೆ ಹಾಕುವುದು ಒಂದನ್ನು ಹೊರತುಪಡಿಸಿ ಉಳಿದೆಲ್ಲಾ ಅಂಶಗಳನ್ನು ಈ ಲಸಿಕೆಯ ಅಣಕು ತಾಲೀಮು ಒಳಗೊಂಡಿರಲಿದೆ. 

ಮಹಾಮಾರಿ ಕೊರೋನಾ ವೈರಸ್ ಇಡೀ ವಿಶ್ವಕ್ಕೇ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ವೈರಸ್ ಹರಡುವುದನ್ನು ತಡೆಗಟ್ಟಲು ನಾನಾ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಿದ್ದರೂ, ಸೋಂಕು ಹರಡುವುದು ಮಾತ್ರ ನಿಯಂತ್ರಣಕ್ಕೆ ಬರುತ್ತಿಲ್ಲ. 

ಇದರ ನಡುವೆ ಈ ವೈರಸ್​ಗೆ ಲಸಿಕೆ ಕಂಡು ಹಿಡಿಯಲು ಹಲವು ಕಂಪನಿಗಳು ಯಶಸ್ವಿಯಾಗಿದ್ದು, ಅಮೆರಿಕ, ಇಂಗ್ಲೆಂಡ್​ನಲ್ಲಿ ಈಗಾಗಲೇ ಕೊರೊನಾ ವೈರಸ್ ವಿರುದ್ಧದ ಲಸಿಕೆ ನೀಡಿಕೆ ಆರಂಭವಾಗಿದೆ. 

ಅಮೆರಿಕದಲ್ಲಿ ಈಗಾಗಲೇ ಹತ್ತು ಲಕ್ಷ ಜನರಿಗೆ ಲಸಿಕೆ ನೀಡಲಾಗಿದೆ. ಫೈಝರ್, ಮಾಡೆರ್ನಾ ಕಂಪನಿಯ ಲಸಿಕೆಗಳನ್ನ ಅಮೆರಿಕ, ಇಂಗ್ಲೆಂಡ್ ಜನರ ಬಳಕೆಗೆ ಅನುಮೋದಿಸಲಾಗಿದೆ.

ಭಾರತದಲ್ಲಿ ಇನ್ನೂ ಯಾವುದೇ ಕಂಪನಿಯ ಲಸಿಕೆಯನ್ನ ಜನರ ತುರ್ತು ಬಳಕೆಗೆ ಅನುಮೋದಿಸಿಲ್ಲ. ಆದರೆ, ಭಾರತದಲ್ಲಿ ಲಸಿಕೆಯ ಸಂಗ್ರಹ, ಸಾಗಾಟ, ಲಸಿಕೆ ನೀಡಲು ಸಿದ್ಧತೆಗಳನ್ನ ನಡೆಸಲಾಗುತ್ತಿದೆ. ದೇಶದ 4 ರಾಜ್ಯಗಳಲ್ಲಿ ಲಸಿಕೆ ನೀಡಿಕೆಯ ರಿಹರ್ಸಲ್ ನಡೆಸಲು ಕೇಂದ್ರ ಸರ್ಕಾರ ನಿರ್ಧರಿಸಲಾಗಿದ್ದು, ದೇಶದ ನಾಲ್ಕು ದಿಕ್ಕಿನ ತಲಾ ಒಂದು ರಾಜ್ಯವನ್ನ ಇದಕ್ಕಾಗಿ ಆಯ್ಕೆ ಮಾಡಲಾಗಿದೆ. ಉತ್ತರದಲ್ಲಿ ಪಂಜಾಬ್, ದಕ್ಷಿಣದಲ್ಲಿ ಆಂಧ್ರಪ್ರದೇಶ, ಪಶ್ಚಿಮದಲ್ಲಿ ಗುಜರಾತ್, ಪೂರ್ವದ ಅಸ್ಸಾಂನಲ್ಲಿ ಇಂದಿನಿಂದ ಲಸಿಕೆ ನೀಡಿಕೆ ರಿಹರ್ಸಲ್ ನಡೆಯಲಿದೆ. ಪಂಜಾಬ್​ನ ಎರಡು ಜಿಲ್ಲೆಗಳಾದ ಲೂಧಿಯಾನ ಹಾಗೂ ಭಗತ್ ಸಿಂಗ್ ನಗರ ಜಿಲ್ಲೆಯಲ್ಲಿ ಲಸಿಕೆ ನೀಡಿಕೆಯ‌ ರಿಹರ್ಸಲ್ ನಡೆಸಲಾಗುತ್ತದೆ.

ಲಸಿಕೆ ತಾಲೀಮು ಹೇಗೆ ನಡೆಯುತ್ತದೆ..?
ಲಸಿಕೆ ನೀಡಿಕೆಯ ಅಣಕು ಕಾರ್ಯಾಚರಣೆ ವೇಳೆ ಎದುರಾಗುವ ಸಮಸ್ಯೆಗಳು, ಸವಾಲುಗಳು ತಿಳಿದುಬರಲಿದೆ ಲಸಿಕೆಯನ್ನ ವಿಮಾನಗಳ ಮೂಲಕ ರಾಜ್ಯಗಳಿಗೆ ಸಾಗಿಸಬೇಕು.‌ ಎಲ್ಲೆಡೆ ರೆಫ್ರಿಜರೇಟರ್ ಇಟ್ಟು, ಅವುಗಳಲ್ಲಿ ಲಸಿಕೆ ಸಂಗ್ರಹಿಸಿಡಬೇಕು.

ಲಸಿಕೆ ನೀಡಿಕೆಗೆ ಫಲಾನುಭವಿಗಳ ಪಟ್ಟಿಯನ್ನು ಕೊವಿನ್ ಆ್ಯಪ್​ನಲ್ಲಿ ರಿಜಿಸ್ಟರ್ ಮಾಡಲಾಗಿರುತ್ತದೆ.‌ ಆದ್ಯತೆ ಪಟ್ಟಿಯಲ್ಲಿರೋರಿಗೆ ಮಾತ್ರ ಲಸಿಕೆ ನೀಡಬೇಕು. ಲಸಿಕೆ‌ ನೀಡಿಕೆಗೆ ಸೂಕ್ತ ಸ್ಥಳಾವಕಾಶ ಇರಬೇಕು. ಈಗಾಗಲೇ ಕೇಂದ್ರ ಸರ್ಕಾರ ಲಸಿಕೆ ನೀಡಿಕೆಗೆ ಮಾರ್ಗಸೂಚಿ ನೀಡಿದೆ. ಆ ಮಾರ್ಗಸೂಚಿ ಪ್ರಕಾರ ಲಸಿಕೆ ನೀಡಬೇಕು. ‌ಇದನ್ನು ಹೊರತುಪಡಿಸಿ ಬೇರೆ ವಿಚಾರಗಳಲ್ಲಿ ಯಾವ ರೀತಿಯ ಸಮಸ್ಯೆಗಳು ಎದುರಾಗುತ್ತದೆ ಎಂಬುದನ್ನು ತಿಳಿದುಕೊಳ್ಳುವ ಸಲುವಾಗಿ ಲಸಿಕೆ ನೀಡಿಕೆಯ ತಾಲೀಮು ನಡೆಸಲಾಗುತ್ತಿದೆ.

ಭಾರತದಲ್ಲಿ ಗಣ್ಯರಿಗೆ ಭದ್ರತೆ ನೀಡುವ ಸಂದರ್ಭದಲ್ಲೂ ಕೂಡ ಭದ್ರತಾ ಪಡೆಗಳು ತಾಲೀಮು ನಡೆಸುತ್ತವೆ. ಉಗ್ರರ ವಿರುದ್ಧ ಕಾರ್ಯಾಚರಣೆಯ ಅಣಕು ಪ್ರದರ್ಶನಗಳು ನಡೆಯುತ್ತದೆ. ಬೆಂಕಿ ನಂದಿಸಲು ಕೂಡ ಅಣಕು ಕಾರ್ಯಾಚರಣೆ ನಡೆಯುತ್ತದೆ. ವಿಪತ್ತಿನ‌ ಸಂದರ್ಭದಲ್ಲಿ ಜನರ ರಕ್ಷಣೆಯ ಅಣಕು ಕಾರ್ಯಾಚರಣೆ ನಡೆಯುತ್ತದೆ. ಇದೀಗ ಅದೇ ರೀತಿಯಲ್ಲಿ ಕೊರೋನಾ ವೈರಸ್ ವಿರುದ್ಧದ ಲಸಿಕೆ ನೀಡಿಕೆಯ ತಾಲೀಮು ಅಥವಾ ಪೂರ್ವಾಭ್ಯಾಸ ನಡೆಯುತ್ತಿರುವುದು ವಿಶೇಷವೆಂದೇ ಹೇಳಬಹುದಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com