ನವದೆಹಲಿ: ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಅಪರಾಧಿಗಳ ಪೈಕಿ ಒಬ್ಬನಾದ ವಿನಯ್ ಕುಮಾರ್ ಶರ್ಮಾ ಮಾನಸಿಕ ಅಸ್ವಸ್ಥತೆ, ಸ್ಕಿಜೋಫ್ರೇನಿಯಾ ಮತ್ತು ತಲೆ ಮತ್ತು ತೋಳಿನ ಗಾಯದಿಂದ ಬಳಲುತ್ತಿದ್ದು ಆತನಿಗೆ ತಕ್ಷಣ ಸೂಕ್ತ ಚಿಕಿತ್ಸೆ ನೀಡಬೇಕೆಂದು ದೆಹಲಿ ನ್ಯಾಯಾಲಯ ಗುರುವಾರ ತಿಹಾರ್ ಜೈಲು ಅಧಿಕಾರಿಗಳಿಗೆ ಹೇಳಿದೆ.
ವಿನಯ್ ಕುಮಾರ್ ಶರ್ಮಾ ಮನವಿಗೆ ಶನಿವಾರದೊಳಗೆ ಉತ್ತರಿಸುವಂತೆ ಹೆಚ್ಚುವರಿ ಸೆಷನ್ ನ್ಯಾಯಾಧೀಶ ಧರ್ಮೇಂದರ್ ರಾಣಾ ಜೈಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಜೈಲು ಅಧಿಕಾರಿಗಳು ಹೇಳುವಂತೆ ವಿನಯ್ ಶರ್ಮಾ ಜೈಲಿನಲ್ಲಿರುವ ತನ್ನ ಕೋಣೆಯ ಗೋಡೆಗೆ ತಲೆ ಬಡಿದುಕೊಂಡು ಗಾಯ ಮಾಡಿಕೊಂಡಿದ್ದಾನೆ.
ಭಾನುವಾರ ಮಧ್ಯಾಹ್ನ ಜೈಲು ಸಂಖ್ಯೆ 3 ರಲ್ಲಿ ಈ ಘಟನೆ ನಡೆದಿದ್ದು ಆತನಿಗೆ ಣ್ಣಪುಟ್ಟ ಗಾಯಗಳಾಗಿವೆ ಮತ್ತು ಜೈಲಿನ ಆವರಣದೊಳಗೆ ಚಿಕಿತ್ಸೆ ನೀಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಆದರೆ ವಿನಯ್ ಮಾನಸಿಕ ಅಸ್ವಸ್ಥತೆ, ಸ್ಕಿಜೋಫ್ರೇನಿಯಾ ಮತ್ತು ತಲೆ ಗಾಯಕ್ಕೆ ಉತ್ತಮ ಚಿಕಿತ್ಸೆ ಕೋರಿ ದೆಹಲಿ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾನೆ. ಅಪರಾಧಿ ತನ್ನ ತಾಯಿ ಸೇರಿದಂತೆ ಜನರನ್ನು ಗುರುತಿಸಲು ವಿಫಲವಾಗಿದ್ದಾನೆ ಎಂದು ಶರ್ಮಾ ಪರ ವಕೀಲರು ನ್ಯಾಯಾಲಯದಲ್ಲಿ ಹೇಳಿದ್ದಾರೆ. ಅಪರಾಧಿ ಮನವಿಗೆ ನ್ಯಾಯಾಲಯ ತಿಹಾರ್ ಜೈಲಿನ ಪ್ರತಿಕ್ರಿಯೆ ಕೋರಿದೆ. ಶನಿವಾರ ಉತ್ತರವನ್ನು ಸಲ್ಲಿಸುವಂತೆ ನಿರ್ದೇಶಿಸುತ್ತದೆ.
ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಾಲ್ವರು ಅಪರಾಧಿಗಳ ಮರಣದಂಡನೆಗೆ ನ್ಯಾಯಾಲಯವು ಫೆಬ್ರವರಿ 17 ರಂದು ಹೊಸ ಡೆತ್ ವಾರಂಟ್ ಹೊರಡಿಸಿತ್ತು.
Advertisement