ಕೋಲ್ಕತ್ತಾ: ಪಶ್ಚಿಮ ಬಂಗಾಳ ರಾಜಧಾನಿ ಕೋಲ್ಕತ್ತಾದಿಂದ ಸಿಲಿಗುರಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 31 ನಿನ್ನೆ ಭಾನುವಾರ ಅಕ್ಷರಶಃ ಯುದ್ಧಭೂಮಿಯಂತೆ ಮಾರ್ಪಟ್ಟಿತ್ತು.
ಶಾಲಾ ಬಾಲಕಿಯೊಬ್ಬ ಮೇಲೆ ಗ್ಯಾಂಗ್ ರೇಪ್ ಮಾಡಿ ಕೊಲೆ ಮಾಡಿದ್ದ ಘಟನೆಗೆ ಸಂಬಂಧಿಸಿ ಪ್ರತಿಭಟನಾಕಾರರು ರಸ್ತೆ ತಡೆ ನಡೆಸಿ ತೀವ್ರ ಪ್ರತಿಭಟನೆ ನಡೆಸಿದರು. ವಾಹನಗಳಿಗೆ ಬೆಂಕಿ ಹಚ್ಚಿದರು.
ಕೋಲ್ಕತ್ತಾದಿಂದ 500 ಕಿಲೋ ಮೀಟರ್ ಉತ್ತರಕ್ಕೆ ಚೋಪ್ರಾ ಎಂಬ ಪ್ರದೇಶದಲ್ಲಿ ಈ ಪ್ರತಿಭಟನೆ ನಡೆದಿದೆ. ಸುಮಾರು 2 ಗಂಟೆಗಳ ಕಾಲ ಪೊಲೀಸರು ಪ್ರತಿಭಟನಾಕಾರರನ್ನು ಚದುರಿಸಲು ಯತ್ನಿಸಿದರು. ಆದರೆ ತೀವ್ರ ಪ್ರತಿಭಟನೆ ನಡೆಸಿದ್ದರಿಂದ ಪೊಲೀಸರು ಗುಂಪನ್ನು ಚದುರಿಸಲು ಲಾಠಿ ಚಾರ್ಜ್, ಅಶ್ರುವಾಯು ಸಿಡಿಸಬೇಕಾಗಿ ಬಂತು.
ನಿನ್ನೆ ಅಪರಾಹ್ನ 2 ಗಂಟೆ ಸುಮಾರಿಗೆ ಆರಂಭವಾದ ಪ್ರತಿಭಟನೆ ಹಲವು ಗಂಟೆಗಳ ಕಾಲ ಮುಂದುವರಿದು ಮೂರು ಬಸ್ಸುಗಳು ಮತ್ತು ಪೊಲೀಸ್ ವಾಹನಗಳಿಗೆ ಬೆಂಕಿ ಹಚ್ಚಿದರು. ಪೊಲೀಸರು ಹರಸಾಹಸ ಮಾಡಿ ಪ್ರತಿಭಟನಾಕಾರರನ್ನು ಚದುರಿಸಲು ಸಾಯಂಕಾಲ 5 ಗಂಟೆ ಹಿಡಿಯಿತು. ಆದರೆ ಮತ್ತೊಂದು ರಸ್ತೆಯಲ್ಲಿ ಹೋದ ಪ್ರತಿಭಟನಾಕಾರರು ಅಲ್ಲಿ ತಮ್ಮ ಕೈಗೆ ಸಿಕ್ಕಿದ ಆಯುಧಗಳಿಂದ ಪೊಲೀಸರ ಮೇಲೆ ದಾಳಿ ಮಾಡಲು ಆರಂಭಿಸಿದರು.
ಪ್ರತಿಭಟನಾಕಾರರು ಬಾಲಕಿ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿದೆ ಎನ್ನುತ್ತಿದ್ದರೆ ಪಶ್ಚಿಮ ಬಂಗಾಳ ಪೊಲೀಸರು ಹೇಳುವುದೇ ಬೇರೆ, ಬಾಲಕಿಯ ಮರಣೋತ್ತರ ಪರೀಕ್ಷೆಯಲ್ಲಿ ಆಕೆಯ ದೇಹದಲ್ಲಿ ಹಲ್ಲೆ ಗುರುತುಗಳಾಗಲಿ, ಶಾರೀರಿಕವಾಗಿ ಹಿಂಸೆ ನೀಡಿದ್ದು, ಲೈಂಗಿಕವಾಗಿ ದುರ್ಬಳಕೆ, ಹಲ್ಲೆ ಮಾಡಿಕೊಂಡ ಗುರುತುಗಳಿಲ್ಲ, ವಿಷ ದೇಹಕ್ಕೆ ಹೋದ ಪರಿಣಾಮ ಮೃತ್ಯುಗೊಂಡಿದ್ದಾಳೆ ಎಂದು ಕಂಡುಬರುತ್ತಿದೆ ಎಂದಿದ್ದಾರೆ.
ಈ ಬಗ್ಗೆ ಇಷ್ಟೊಂದು ಪ್ರತಿಭಟನೆ ನಡೆದರೂ ಕೂಡ ಯಾವುದೇ ಪೊಲೀಸ್ ದೂರು ದಾಖಲಾಗಿಲ್ಲ. ಪರಿಸ್ಥಿತಿ ಸದ್ಯ ನಿಯಂತ್ರಣದಲ್ಲಿದ್ದು, ಬಾಲಕಿ ಸಾವಿನ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.
Advertisement