ಸಿಎಎ ಪ್ರತಿಭಟಕಾರರ ವಿರುದ್ಧ ಪೋಸ್ಟರ್: ನಿಮ್ಮ ಕ್ರಮ ಬೆಂಬಲಿಸುವ ಯಾವುದೇ ಕಾನೂನಿಲ್ಲ- ಯೋಗಿ ಸರ್ಕಾರದ ವಿರುದ್ಧ ಸುಪ್ರೀಂ ಕಿಡಿ

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಸಿದವರಿಗೆ ಹೆಸರು, ಫೋಟೋ ಹಾಗೂ ವಿಳಾಸವನ್ನೊಳಗೊಂಡ ಪೋಸ್ಟರ್ ಹಾಕಿದ್ದ ಉತ್ತರ ಪ್ರದೇಶ ಸರ್ಕಾರದ ವಿರುದ್ಧ ಸುಪ್ರೀಂಕೋರ್ಟ್ ತೀವ್ರವಾಗಿ ಕಿಡಿಕಾರಿದೆ. 
ಸುಪ್ರೀಂಕೋರ್ಟ್
ಸುಪ್ರೀಂಕೋರ್ಟ್

ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಸಿದವರಿಗೆ ಹೆಸರು, ಫೋಟೋ ಹಾಗೂ ವಿಳಾಸವನ್ನೊಳಗೊಂಡ ಪೋಸ್ಟರ್ ಹಾಕಿದ್ದ ಉತ್ತರ ಪ್ರದೇಶ ಸರ್ಕಾರದ ವಿರುದ್ಧ ಸುಪ್ರೀಂಕೋರ್ಟ್ ತೀವ್ರವಾಗಿ ಕಿಡಿಕಾರಿದೆ. 

ಲಖನೌನಲ್ಲಿ ಪ್ರತಿಭಟನಾಕಾರರ ಹೆಸರು, ಫೋಟೋ ಹಾಗೂ ವಿಳಾಸಗಳನ್ನೊಳಗೊಂಡಿರುವ ಪೋಸ್ಟರ್ ಗಳನ್ನು ತೆಗೆದುಹಾಕುವಂತೆ ಅಲಹಾಬಾದ್ ನ್ಯಾಯಾಲಯ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಉತ್ತರಪ್ರದೇಶ ಸರ್ಕಾರ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು.

ಈ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡಿರುವ ಇಬ್ಬರು ನ್ಯಾಯಾಧೀಶರ ರಜಾಕಾಲತ ಪೀಠ, ಅಲಹಾಬಾದ್ ಹೈಕೋರ್ಟ್ ಆದೇಶಕ್ಕೆ ತಡೆ ನೀಡಲು ನಿರಾಕರಿಸಿದೆ. ನಿಮ್ಮ ಕ್ರಮಗಳಿಗೆ ಬೆಂಬಲ ನೀಡುವ ಯಾವುದೇ ಕಾನೂನಿಗಳಿಲ್ಲ ಎಂದು ಹೇಳಿದ್ದು, ಅದೇ ಸಮಯ ಪ್ರಕರಣವನ್ನು ತ್ರಿಸದಸ್ಯ ಸಾಮಾನ್ಯ ಪೀಠಕ್ಕೆ ವಹಿಸಿದೆ. 

ಅರ್ಜಿ ವಿಚಾರಣೆಗೆ ಬಂದ ಸಮಯದಲ್ಲಿ ಉತ್ತರಪ್ರದೇಶ ಸರ್ಕಾರದ ಪರುವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ವಾದ ಮಂಡಿಸಿದರು. ಸಂಬಂಧಿತ ಪ್ರಾಧಿಕಾರವು 95 ಮಂದಿಯನ್ನು ವಿಚಾರಣೆ ನಡೆಸಿದ್ದು, 57 ಮಂದಿ ಹಿಂಸೆಗೆ ಕಾರಣರಾಗಿದ್ದಾರೆ. ಇವರು ವಿವಿಧ ಸಮುದಾಯಗಳಿಗೆ ಸೇರಿದವರಾಗಿದ್ದಾರೆಂದು ಹೇಳಿದರು. 

ಹೋರಾಟಗಾರರ ಪರ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರು ವಾದಿಸಿ, ಯಾವಾಗಿನಿಂದ ಆರೋಪಿಗಳನ್ನು ಈ ರೀತಿ ಅವಮಾನಿಸಲು ಅನುಮತಿ ನೀಡಲಾಗಿದೆ ಎಂದು ಪ್ರಶ್ನಿಸಿದರು. ಇಂತಹ ಪೋಸ್ಟರುಗಳಲ್ಲಿ ಕಾಣಿಸಿಕೊಂಡವರ ಮೇಲೆ ದಾಳಿ ನಡಸಲು ಜನರನ್ನು ಪ್ರಚೋದಿಸುವುದು ಇಂತಹ ಕೃತ್ಯದ ಉದ್ದೇಶ ಎಂದೂ ಇದೇ ವೇಳೆ ತಿಳಿಸಿದ್ದಾರೆ. 

ವಾದ ಹಾಗೂ ಪ್ರತಿವಾದಗಳನ್ನು ಆಲಿಸಿದ ನ್ಯಾಯಾಲಯ ಉತ್ತರಪ್ರದೇಶ ಸರ್ಕಾರದ ವಿರುದ್ಧ ತೀವ್ರವಾಗಿ ಕಿಡಿಕಾರಿದ್ದು, ನಿಮ್ಮ ಕ್ರಮಗಳನ್ನು ಬೆಂಬಲಿಸುವ ಯಾವುದೇ ಕಾನೂನುಗಳಿಲ್ಲ ಎಂದು ಹೇಳಿದೆ. ಅಲ್ಲದೆ, ಗಲಭೆಕೋರರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು ಮತ್ತು ಗಲಭೆಗೆ ಕಾರಣವಾಗುವವರಿಗೆ ಶಿಕ್ಷೆಯಾಗಬೇಕು. ಈ ವಿಚಾರದಲ್ಲಿ ಯಾವುದೇ ಅನುಮಾನವಿಲ್ಲ ಎಂದು ತಿಳಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com