ನವದೆಹಲಿ: ಪಂಜಾಬ್ ರಾಜ್ಯದ ಚಂಡೀಗಢದಲ್ಲಿ ವ್ಯಕ್ತಿಯೊಬ್ಬರಲ್ಲಿ ವೈರಸ್ ದೃಢಪಟ್ಟಿದ್ದು, ಇದರಂತೆ ದೇಶದಾದ್ಯಂತ ಸೋಂಕಿತರ ಸಂಖ್ಯೆ 170ಕ್ಕೆ ಏರಿಕೆಯಾಗಿದೆ.
ಚಂಡೀಗಢ ಮೂಲಕ 23 ವರ್ಷದ ಮಹಿಲೆಯಲ್ಲಿ ವೈರಾಣು ದೃಢಪಟ್ಟಿದೆ ಎಂದು ಹೇಳಲಾಗುತ್ತಿದ್ದು, ಮಹಿಳೆ ಇತ್ತೀಚೆಗಷ್ಟೇ ಬ್ರಿಟನ್ ನಿಂದ ಭಾರತಕ್ಕೆ ವಾಪಸ್ಸಾಗಿದ್ದರು ಎಂದು ತಿಳಿದುಬಂದಿದೆ.
ಕಳೆದ ಶನಿವಾರವಷ್ಟೇ ನೂರರ ಗಡಿ ದಾಟಿದ್ದ ಭಾರತದಲ್ಲಿ ಕೊರೋನಾ ಸೋಂಕು ಪೀಡಿತರ ಸಂಖ್ಯೆ ಗುರುವಾರ 170ಕ್ಕೆ ತಲುಪಿದೆ.
ನಿನ್ನೆಯಷ್ಟೇ ದೇಶದ ವಿವಿಧ ರಾಜ್ಯಗಳಲ್ಲಿ ಹೊಸದಾಗಿ 23 ಮಂದಿಯಲ್ಲಿ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಈ ವರೆಗೂ ಭಾರತದಲ್ಲಿ ವೈರಸ್'ಗೆ ಮೂವರು ಸಾವನ್ನಪ್ಪಿದ್ದಾರೆ. ಸುದೈವವಶಾತ್ 14 ಜನರು ಗುಣಮುಖರಾಗಿ ಮನೆಗೆ ಮರಳಿದ್ದಾರೆ.
ಈ ನಡುವೆ ಕೊರೋನಾ ಭೀತಿಯಿಂದಾಗಿ 5800 ಕೈದಿಗಳನ್ನು ಬಿಡುಗಡೆ ಮಾಡಲು ಪಂಜಾಬ್ ಬಂದೀಖಾನೆ ಸಚಿವಾಲಯ ಮುಂದಾಗಿದೆ ಎಂದು ತಿಳಿದುಬಂದಿದೆ.
ಡ್ರಗ್ಸ್ ಪ್ರಕರಣದಲ್ಲಿ ಜೈಲು ಪಾಲಾಗಿರುವ 3000 ಹಾಗೂ ಸಣ್ಣಪುಟ್ಟ ಪ್ರಕರಣಗಳಲ್ಲಿ ಬಂಧಿತರಾಗಿರುವ 2800 ಕೈದಿಗಳ ಬಿಡುಗಡೆಗೆ ಸಚಿವಾಲಯ ಪ್ರಸ್ತಾಪ ಕಳುಹಿಸಿದೆ.
2.5 ಕೋಟಿ ನಿರುದ್ಯೋಗಿಗಳು
ಕೊರೋನಾ ಪರಿಣಾಮ ವಿಶ್ವದಾದ್ಯಂತ 2.5 ಕೋಟಿ ಜನ ನಿರುದ್ಯೋಗಿಗಳಾಲಿದ್ದಾರೆ. ಜಾಗತಿಕ ಮಟ್ಟದಲ್ಲಿ ಕಾರ್ಮಿಕರು ರೂ.251 ಲಕ್ಷ ಕೋಟಿ ಆದಾಯ ಕಳೆದುಕೊಂಡು ನಷ್ಟ ಅನುಭವಿಸಲಿದ್ದಾರೆಂದು ವಿಶ್ವ ಸಂಸ್ಥೆಯ ಅಂಗಸಂಸ್ಥೆಯಾದ ವಿಶ್ವ ಕಾರ್ಮಿಕ ಸಂಘಟನೆ ಎಚ್ಚರಿಸಿದೆ.
Advertisement