ನವದೆಹಲಿ: ಗಲ್ವಾನ್ ಗಡಿಯಲ್ಲಿ ಗಡಿ ಕ್ಯಾತೆ ಪ್ರಾರಂಭಿಸಿದ್ದ ಚೀನಾ, ಭಾರತ ಹಾಗೂ ಮಯನ್ಮಾರ್ ಗಡಿ ಪ್ರದೇಶದಲ್ಲಿ ಶಸ್ತ್ರಾಸ್ತ್ರಗಳನ್ನು ಸಾಗಣೆ ಮಾಡುತ್ತಿದ್ದು, ಪ್ರಾದೇಶಿಕ ಭದ್ರತೆ, ಸ್ಥಿರತೆಗೆ ಅಪಾಯ ಎದುರಾಗುತ್ತಿರುವುದನ್ನು ಗುಪ್ತಚರ ಇಲಾಖೆ ಭಾರತ ಸರ್ಕಾರದ ಗಮನಕ್ಕೆ ತಂದಿದೆ.
ಭಾರತದ ಈಶಾನ್ಯ ರಾಜ್ಯಗಳ ಮೂಲಕ ಎಕೆ-47, ಎಂ-16, ಹಾಗೂ ಚೀನಾ ಪಿಸ್ತೂಲ್ ಗಳೂ ಸೇರಿ 423 ಅಕ್ರಮ ಶಸ್ತ್ರಾಸ್ತ್ರಗಳನ್ನು ಈ ವರ್ಷ ಇಲ್ಲಿಯವರೆಗೂ ವಶಕ್ಕೆ ಪಡೆಯಲಾಗಿದೆ.
ಮಯನ್ಮಾರ್ ಗಡಿ ಪ್ರದೇಶದಲ್ಲಿರುವ ದಂಗೆಕೋರ ಗುಂಪುಗಳು ಶಸ್ತ್ರಾಸ್ತ್ರಗಳಿಗೆ ಉತ್ತಮ ಬೆಲೆ ನೀಡುತ್ತಿದ್ದು, ಚೀನಾ ಈ ಗುಂಪುಗಳಿಗೆ ಶಸ್ತ್ರಾಸ್ತ್ರ ಹಾಗೂ ಮದ್ದುಗುಂಡುಗಳನ್ನು ಪೂರೈಕೆ ಮಾಡುತ್ತಿರುವುದನ್ನು ಗುಪ್ತಚರ ಇಲಾಖೆ ಸರ್ಕಾರದ ಗಮನಕ್ಕೆ ತಂದಿದೆ.
ಭಾರತದ ಗುಪ್ತಚರ ಇಲಾಖೆಗಳ ಪ್ರಕಾರ ಅಸ್ಸಾಂ, ಮಣಿಪುರ, ನಾಗಾಲ್ಯಾಂಡ್, ಮಿಜೋರಾಮ್ ಗಳಲ್ಲಿನ ದಂಗೆಕೋರ ಗುಂಪುಗಳು ಚೀನಾದ ಗುಪ್ತಚರ ಏಜೆನ್ಸಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಹಲವಾರು ಪ್ರಯೋಜನಗಳನ್ನು ಪಡೆದುಕೊಂಡಿವೆ.
ಚೀನಾ ಶಸ್ತ್ರಾಸ್ತ್ರಗಳನ್ನು ಮಾತ್ರ ಪೂರೈಕೆ ಮಾಡುವುದಲ್ಲದೇ, ಈಶಾನ್ಯ ಗಡಿ ಪ್ರದೇಶದಲ್ಲಿ ದಂಗೆಕೋರ ಗುಂಪುಗಳಿಗೆ ತರಬೇತಿ ನೀಡುವುದು ಹಾಗೂ ಗಡಿಪಾರಾದ ಭಯೋತ್ಪಾದರಿಗೆ ಆಶ್ರಯ ನೀಡುವುದನ್ನು ಭಾರತದ ವಿರುದ್ಧದ ಡಿಪ್ಲೊ-ಭಯೋತ್ಪಾದನೆ ಭಾಗವಾಗಿ ನಡೆಸುತ್ತಿರುವುದನ್ನು ಗುಪ್ತಚರ ಸಂಸ್ಥೆಗಳು ತಿಳಿಸಿವೆ.
Advertisement