ಗಡಿ ಹಿಂಸಾಚಾರ: ಅಸ್ಸಾಂ ಸಿಎಂ ಹಿಮಾಂತ, 6 ಮಂದಿ ಸರ್ಕಾರಿ ಅಧಿಕಾರಿಗಳ ವಿರುದ್ಧ ಮಿಜೋರಾಂ ಪೊಲೀಸರಿಂದ ಎಫ್ಐಆರ್ ದಾಖಲು

ಗಡಿ ಹಿಂಸಾಚಾರ ಪ್ರಕರಣ ಸಂಬಂಧ ಮಿಜೋರಾಂ ರಾಜ್ಯದ ಪೊಲೀಸರು ಅಸ್ಸಾಂ ರಾಜ್ಯದ ಮುಖ್ಯಮಂತ್ರಿ ಹಿಮಾಂತ ಬಿಸ್ವ ಶರ್ಮಾ ಹಾಗೂ 6 ಮಂದಿ ಸರ್ಕಾರಿ ಅಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿದ್ದಾರೆಂದು ಶನಿವಾರ ತಿಳಿದುಬಂದಿದೆ.
ಅಸ್ಸಾಂ ರಾಜ್ಯದ ಮುಖ್ಯಮಂತ್ರಿ ಹಿಮಾಂತ ಬಿಸ್ವ ಶರ್ಮಾ
ಅಸ್ಸಾಂ ರಾಜ್ಯದ ಮುಖ್ಯಮಂತ್ರಿ ಹಿಮಾಂತ ಬಿಸ್ವ ಶರ್ಮಾ
Updated on

ಗುವಾಹಟಿ: ಗಡಿ ಹಿಂಸಾಚಾರ ಪ್ರಕರಣ ಸಂಬಂಧ ಮಿಜೋರಾಂ ರಾಜ್ಯದ ಪೊಲೀಸರು ಅಸ್ಸಾಂ ರಾಜ್ಯದ ಮುಖ್ಯಮಂತ್ರಿ ಹಿಮಾಂತ ಬಿಸ್ವ ಶರ್ಮಾ ಹಾಗೂ 6 ಮಂದಿ ಸರ್ಕಾರಿ ಅಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿದ್ದಾರೆಂದು ಶನಿವಾರ ತಿಳಿದುಬಂದಿದೆ. 

ಜುಲೈ.26 ರಂದು ಅಸ್ಸಾಂ-ಮಿಜೋರಾಮ್ ಅಂತರ್ ರಾಜ್ಯ ಗಡಿ ಪ್ರದೇಶದಲ್ಲಿ ನಡೆದ ಹಿಂಸಾಚಾರ ಪ್ರಕರಣ ಸಂಬಂಧ ಅಸ್ಸಾಂ ಮುಖ್ಯಮಂತ್ರಿ, 6 ಮಂದಿ ಹಿರಿಯ ಅಧಿಕಾರಿಗಳು, 200 ಮಂದಿ ಪೊಲೀಸರ ವಿರುದ್ಧ ಮಿಜೋರಾಂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆಂದು ವರದಿಗಳು ತಿಳಿಸಿವೆ. 

ಡಿಐಜಿ ಅನುರಾಗ್ ಅಗರ್ವಾಲ್, ಉಪ ಐಜಿಪಿ ದೇವ್ ಜ್ಯೋತಿ ಮುಖರ್ಜಿ, ಜಿಲ್ಲಾ ಮ್ಯಾಜಿಸ್ಟ್ರೇಟ್ ಕೀರ್ತಿ ಜಲ್ಲಿ, ಎಸ್'ಪಿ ವೈಭವ್ ಚಂದ್ರಶೇಖರ್ ನಿಂಬಾಳ್ಕರ್, ವಿಭಾಗೀಯ ಅರಣ್ಯ ಅಧಿಕಾರಿ ಸನ್ನಿಡಿಯೋ ಚೌಧರಿ ಮತ್ತು ಧೋಲೈ ಪೊಲೀಸ್ ಠಾಣಾಧಿಕಾರಿ ಸಾಹಬ್ ಉದ್ದೀನ್ ಅವರ ವಿರುದ್ಧ ಎಫ್ಐಆರ್ ದಾಖಲಾಗಿದೆ ಎನ್ನಲಾಗುತ್ತಿದೆ. 

ಅಸ್ಸಾಂ ಮತ್ತು ಮಿಜೋರಂ ಮಧ್ಯೆ ಉಂಟಾಗಿರುವ ಗಡಿ ವಿವಾದ ವಿಕೋಪಕ್ಕೆ ತಿರುಗಿದೆ. ಕಳೆದೊಂದು ವಾರದಿಂದ ಗಡಿಯಲ್ಲಿ ಹಿಂಸಾಚಾರ ನಡೆಯುತ್ತಿದೆ. ಜುಲೈ 26 ರಂದು ಉಭಯ ರಾಜ್ಯಗಳ ಗಡಿಯಲ್ಲಿ ಸಂಭವಿಸಿದ ಹಿಂಸಾಚಾರದಲ್ಲಿ 6 ಮಂದಿ ಪೊಲೀಸರು ಹಾಗೂ ಓರ್ವ ನಾಗರೀಕ ಸಾವನ್ನಪ್ಪಿದ್ದರು.

ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಅಸ್ಸಾಂ ಮತ್ತು ಮಿಜೋರಂ ಮಧ್ಯೆ ನಿರಂತಂತರ ಸಂಘರ್ಷಗಳು ಸಂಭವಿಸುತ್ತಲೇ ಇವೆ. 2020ರ ಆಗಸ್ಟ್‌ನಲ್ಲಿ ಉಂಟಾದ ಸಂಘರ್ಷ ವೇಳೆ ಮಿಜೋರಂ ಗಡಿಯಲ್ಲಿರುವ ಗುಡಿಸಲುಗಳಿಗೆ ಬೆಂಕಿ ಹಚ್ಚಲಾಗಿತ್ತು. ಈ ಘಟನೆಯಲ್ಲಿ ಹಲವು ಮಂದಿ ಗಾಯಗೊಂಡಿದ್ದರು. ಬಳಿಕ ಈ ವರ್ಷದ ಫೆಬ್ರವರಿಯಲ್ಲಿ ಸಂಘರ್ಷಗಳು ಏರ್ಪಟ್ಟಿದ್ದವು. 

ಇತ್ತೀಚೆಗೆ ಮಿಜೋರಾಂ ದುಷ್ಕರ್ಮಿಗಳು ಅಸ್ಸಾಂನ ಕ್ಯಾಚರ್‌ ಜಿಲ್ಲೆಯೊಳಗೆ ಐಇಡಿ ಬಾಂಬ್‌ಗಳನ್ನು ಸ್ಛೋಟಿಸಿದ್ದರು. ಇದು ಮತ್ತೊಮ್ಮೆ ಸಂಘರ್ಷ ಭುಗಿಲೇಳುವಂತೆ ಮಾಡಿದೆ. 

ಮಿಜೋರಾಂ ದುಷ್ಕರ್ಮಿಗಳು ನಡೆಸಿದ ದಾಳಿಯಲ್ಲಿ 6 ಮಂದಿ ಪೊಲೀಸರು ಸಾವಿಗೀಡಾಗಿದ್ದಾರೆ. ಮಿಜೋರಂನಿಂದ ಬಂದ ದುಷ್ಕರ್ಮಿಗಳು ಕಲ್ಲುತೂರಾಟದಲ್ಲಿ ಭಾಗಿಯಾಗಿದ್ದಾರೆ ಮತ್ತು ಅಸ್ಸಾಂ ಸರ್ಕಾರಿ ಅಧಿಕಾರಿಗಳ ಮೇಲೆ ದಾಳಿ ನಡೆಸಿದ್ದಾರೆ ಎಂದು ಅಸ್ಸಾಂ ಪೊಲೀಸರು ಆರೋಪಿಸಿದ್ದಾರೆ. ಆದರೆ, ಅಸ್ಸಾಂ ಸರ್ಕಾರವು, ಪೊಲೀಸ್‌ ಪಡೆಯನ್ನು ಬಳಸಿ ಗಡಿ ಭಾಗದ ಜನರ ಮೇಲೆ ದೌರ್ಜನ್ಯ ಎಸಗುತ್ತಿದೆ ಎಂದು ಮಿಜೋರಾಂ ಆರೋಪಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com