ಶ್ರೀನಗರ: ಈದ್ -ಉಲ್ -ಫಿತರ್ ಹಬ್ಬದ ಅಂಗವಾಗಿ ಜಮ್ಮು- ಕಾಶ್ಮೀರದ ಎಲ್ ಒಸಿಯಲ್ಲಿ ಭಾರತ ಮತ್ತು ಪಾಕಿಸ್ತಾನ
ಸೈನಿಕರು ಗುರುವಾರ ಸಿಹಿ ವಿನಿಮಯ ಮಾಡಿಕೊಂಡು, ಪರಸ್ಪರ ಶುಭ ಹಾರೈಸಿದ್ದಾರೆ ಎಂದು ರಕ್ಷಣಾ ಅಧಿಕಾರಿಗಳು ತಿಳಿಸಿದ್ದಾರೆ.
ರಾಷ್ಟ್ರೀಯ ಹಬ್ಬಗಳು ಹಾಗೂ ಈದ್, ಹೊಳಿ, ದೀಪಾವಳಿಯಂತಹ ದೊಡ್ಡ ಹಬ್ಬಗಳಲ್ಲಿ ಸಾಂಪ್ರದಾಯಿಕವಾಗಿ ಸಿಹಿ ವಿನಿಮಯ ಮಾಡಿಕೊಳ್ಳುವಂತೆ ಉರಿಯಲ್ಲಿನ ಕಾಮನ್ ಅಮನ್ ಸೇತು, ಕುಪ್ವಾರ ಮತ್ತು ಕೃಷ್ಣಗಂಗಾ ಸಮೀಪದ ತಿಟ್ವಾಳ ಗಡಿ ಬಳಿ ಭೇಟಿಯಾಗಿ ಪರಸ್ಪರ ಅಭಿನಂದಿಸಿ, ಸಿಹಿ ವಿನಿಮಯ ಮಾಡಿಕೊಳ್ಳಲಾಯಿತು ಎಂದು ವಕ್ತಾರರೊಬ್ಬರು ತಿಳಿಸಿದ್ದಾರೆ.
ಈ ಮಧ್ಯೆ, ಪೂಂಚ್ನ ಎಲ್ಒಸಿ ಉದ್ದಕ್ಕೂ ಚಾಕನ್ ದಾ ಬಾಗ್ ಗಡಿಯಲ್ಲಿ ಭಾರತೀಯ ಮತ್ತು ಪಾಕಿಸ್ತಾನ ಸೇನೆಯು ಸಿಹಿತಿಂಡಿಗಳನ್ನು ವಿನಿಮಯ ಮಾಡಿಕೊಂಡಿದೆ. ಎಂದು ಜಮ್ಮುವಿನ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಉಭಯ ದೇಶಗಳ ನಡುವೆ ಕದನ ವಿರಾಮ ಪರಿಣಾಮವಾಗಿ ನಿಯಂತ್ರಣ ರೇಖೆಯ ಉದ್ದಕ್ಕೂ ಶಾಂತಿ ಸ್ಥಾಪನೆ ನಿಟ್ಟಿನಲ್ಲಿ ಪರಸ್ಪರ ಶುಭ ಹಾರೈಸಿ ಸಿಹಿ ವಿನಿಮಯ ಮಾಡಿಕೊಳ್ಳಲಾಗಿದೆ. ಉಭಯ ದೇಶಗಳ ಸೈನಿಕರಿಂದ ಮೆಚ್ಚುಗೆ ವ್ಯಕ್ತವಾಗಿದ್ದು, ಪರಸ್ಪರ ನಂಬಿಕೆ ಹಾಗೂ ಸೌಹಾರ್ದತೆ ಪ್ರೋತ್ಸಾಹಿಸುವ ನಿರೀಕ್ಷೆಯಿದೆ ಎಂದು ಅವರು ಹೇಳಿದ್ದಾರೆ,
ಉಭಯ ದೇಶಗಳ ಸೈನಿಕರ ಎಲ್ಲಾ ಕೋವಿಡ್-19 ಶಿಷ್ಟಾಚಾರ ಅನುಸರಿಸುವ ಮೂಲಕ ಸಿಹಿ ವಿನಿಮಯ ಮಾಡಿಕೊಂಡು ಶುಭ ಹಾರೈಸಿದರು ಎಂದು ಅವರು ತಿಳಿಸಿದ್ದಾರೆ.
Advertisement