ದೃಶ್ಯಂ ಸ್ಟೈಲಲ್ಲಿ ಸ್ಟೇಡಿಯಂ ಮಧ್ಯ ಶವ ಹೂತ ಕೊಲೆಗಾರ: ಸಂಚು ಬಯಲಿಗೆಳೆದ ಒಡಿಶಾ ಪೊಲೀಸರು
ಭುವನೇಶ್ವರ: ಸುಟ್ಟು ಕರಕಲಾದ ಯುವತಿಯ ಶವವೊಂದನ್ನು ಒಡಿಶಾ ಪೊಲೀಸರು ಕಾಳಿಂದಿ ಜಿಲ್ಲೆಯ ಮಹಾಲಿಂಗ್ ಸ್ಟೇಡಿಯಂನಿಂದ ವಶಪಡಿಸಿಕೊಂಡಿದ್ದಾರೆ. ಸ್ಥಳೀಯರು ನೀಡಿದ ಸುಳಿವಿನ ಆಧಾರದ ಮೇಲೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು.
ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ಅಭಿನಯದ ದೃಶ್ಯಂ ಸಿನಿಮಾದಲ್ಲಿಯೂ ಕಥಾನಾಯಕ ತನ್ನ ಮಗಳಿಗೆ ಕಿರುಕುಳ ನೀಡುತ್ತಿದ್ದ ವ್ಯಕ್ತಿಯನ್ನು ಕಾಮಗಾರಿ ಹಂತದಲ್ಲಿದ್ದ ಪೊಲೀಸ್ ಠಾಣೆ ಅಡಿಯೇ ಹೂತು ಹಾಕಿರುತ್ತಾನೆ.
ಇದನ್ನೂ ಓದಿ: ಮಂಗಳೂರು: ದಸರಾ ಪಾರ್ಟಿಯಲ್ಲಿ ಗಲಾಟೆ; ಯುವಕನ ಹತ್ಯೆ
ಇದೇ ದೃಶ್ಯಂ ಸಿನಿಮಾದ ಕನ್ನಡ ಅವತರಣಿಕೆಯಲ್ಲಿ ಕ್ರೇಜಿ ಸ್ಟಾರ್ ರವಿಚಂದ್ರನ್ ಅಭಿನಯಿಸಿದ್ದಾರೆ. ಮೈ ಜುಮ್ಮೆನ್ನಿಸುವ ಆ ಸಿನಿಮಾ ದೃಶ್ಯ ಮಾದರಿಯಲ್ಲಿಯೇ ಅಪರಾಧ ಕೃತ್ಯಗಳು ನಡೆಯುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ಮಮತಾ ಎನ್ನುವ ಶಾಲಾ ಶಿಕ್ಷಕಿಯೋರ್ವಳು ಕಳೆದ ಕೆಲ ದಿನಗಳಿಂದ ನಾಪತ್ತೆಯಾಗಿದ್ದರು. ಏನು ಮಾಡಿದರೂ ಅವರ ಇರುವಿಕೆ ಪತ್ತೆಯಾಗಿರಲಿಲ್ಲ. ಈ ಸಂದರ್ಭ ಸ್ಥಳೀಯರು ಆಕೆಯನ್ನು ಕೊಂದು ಸ್ಟೇಡಿಯಂ ಒಳಗೆ ಮುಚ್ಚಿ ಹಾಕಿರಬಹುದು ಎಂದು ಸಂದೇಹ ವ್ಯಕ್ತಪಡಿಸಿದ್ದರು.
ಸ್ಥಳೀಯರು ಸೂಚಿಸಿದ ಸ್ಟೇಡಿಯಂನಲ್ಲಿ ತಿಂಗಳುಗಳಿಂದ ಕಾಮಗಾರಿ ನಡೆಯುತ್ತಿತ್ತು. ಹತ್ತಿರದಲ್ಲಿಯೇ ಇದ್ದಿದ್ದರಿಂದ ಸ್ಥಳೀಯರಿಗೆ ಕೊಲೆ ಮಾಡಿ ಹೂತು ಹಾಕಲು ಅದೇ ಪ್ರಶಸ್ತ ಜಾಗವೆಂದು ಮಾತನಾಡಿಕೊಂಡಿದ್ದರು. ಅದನ್ನೇನೂ ಪೊಲೀಸರು ನಂಬಲಿಲ್ಲ. ಸ್ಟೇಡಿಯಂ ಬಳಿ ಸ್ಲಂನಲ್ಲಿದ್ದವನ್ನು ವಿಚಾರಣೆಗೆ ಒಳಪಡೀಸಿದ್ದರು.
ಸ್ಲಂ ನವರು ಯುವತಿ ಕಾಣೆಯಾದ ದಿನದಂದು ಸ್ಟೇಡಿಯಂ ಒಳಗೆ ಬೆಂಕಿ ಜ್ವಾಲೆಗಳು ಕಂಡಿದ್ದಾಗಿ ಹೇಳಿದರು. ಪೊಲೀಸರ ಬುದ್ಧಿ ಚುರುಕುಗೊಳ್ಳಲು ಇಷ್ಟು ಮಾಹಿತಿ ಸಾಕಾಯಿತು. ಮಾರನೇ ದಿನವೇ ಸ್ಟೇಡಿಯಂ ಅನ್ನು ಅಗೆಸಲು ಮುಂದಾದರು. ಈ ಸಂದರ್ಭ ಸುಟ್ಟು ಕರಕಲಾದ ಯುವತಿಯ ಶವ ಸಿಕ್ಕಿಬಿಟ್ಟಿತ್ತು.
ಕೊಲೆಯಾದ ಯುವತಿ ಕೆಲಸ ಮಾಡುತ್ತಿದ್ದ ಸನ್ ಶೈನ್ ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ ಗೋಬಿಂದ್ ಸಾಹು ಅವರೇ ಕೊಲೆ ಮಾಡಿರಬಹುದೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಯುವತಿ ಕಾಣೆಯಾದ ರಾತ್ರಿ ಗೋಬಿಂದ್ ಕಾರು ಸ್ಟೇಡಿಯಂ ಸನಿಹ ಓಡಾಡಿರುವುದು ಪತ್ತೆಯಾಗಿದೆ. ಪೊಲಿಸರು ತನಿಖೆ ಮುಂದುವರಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ