ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಆಸ್ಪತ್ರೆಗಳ ವ್ಯವಸ್ಥೆ ಕುಸಿದ್ದೇ ಆದರೆ, ಲಾಕ್ಡೌನ್ ಮಾಡದೆ ಬೇರೆ ದಾರಿಯಿಲ್ಲ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಭಾನುವಾರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ 24 ಗಂಟೆಗಳಲ್ಲಿ ದೆಹಲಿಯಲ್ಲಿ 10,732 ಹೊಸ ಕೇಸ್ ಪತ್ತೆಯಾಗಿದ್ದು, ಪರಿಸ್ಥಿತಿ ಗಂಭೀರವಾಗಿದೆ. ತುರ್ತು ಕೆಲಸಗಳ ಹೊರತುಪಡಿಸಿ ಅನಗತ್ಯವಾಗಿ ಹೊರಗೆಹೋಗದಿರಿ. ಕೊರೋನಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಕೊರೋನಾ ಮಣಿಸಲು ಲಾಕ್ಡೌನ್ ಒಂದೇ ಪರಿಹಾರವಲ್ಲ ಎಂಬುದನ್ನು ನಾನೂ ನಂಬಿದ್ದೇನೆ. ಆದರೆ, ಆಸ್ಪತ್ರೆಗಳ ವ್ಯವಸ್ಥೆ ಕುಸಿದಿದ್ದೇ ಆದರೆ, ನಮಗೆ ಬೇರೆ ದಾರಿಯಿಲ್ಲ, ಲಾಕ್ಡೌನ್ ಮಾಡಲೇಬೇಕಾಗುತ್ತದೆ ಎಂದು ಹೇಳಿದ್ದಾರೆ.
ಸೋಂಕು ದೃಢಪಟ್ಟ ಕೂಡಲೇ ಆಸ್ಪತ್ರೆಗೆ ಹೋಗುವುದನ್ನು ನಿಯಂತ್ರಿಸಿ. ಸೋಂಕು ಕಾಣಿಸಿಕೊಂಡ ಬಳಿಕ ಆರೋಗ್ಯದಲ್ಲಿ ಏರುಪೇರಾದ್ರೆ ಆಸ್ಪತ್ರೆಗೆ ದಾಖಲಾಗಿ. ಕೊರೋನಾ ಲಕ್ಷಣಗಳು ಇರದಿದ್ದರೆ, ಮನೆಯಲ್ಲಿಯೇ ವೈದ್ಯರ ಸಲಹೆ ಮರೆಗೆ ಕ್ವಾರಂಟೈನ್ ಆಗಿ. ಸೋಂಕು ದೃಢಪಟ್ಟ ಎಲ್ಲರೂ ಆಸ್ಪತ್ರೆಗಳಿಗೆ ದಾಖಲಾದರೆ ಗಂಭೀರ ರೋಗಿಗಳಿಗೆ ಹಾಸಿಗೆ ಸಿಗುವುದಿಲ್ಲ. ಒಂದು ವೇಳೆ ಆಸ್ಪತ್ರೆಗಳಲ್ಲಿ ಹಾಸಿಕೆಗಳು ಕೊರತೆಯಾದರೆ ನಮ್ಮ ಮುಂದಿರುವ ಆಯ್ಕೆ ಲಾಕ್ಡೌನ್ ಒಂದೇ ಎಚ್ಚರಿಕೆ ನೀಡಿದ್ದಾರೆ.
ದೆಹಲಿಯಲ್ಲಿ ಕೊರೋನಾ ಆ್ಯಪ್ ಲಭ್ಯವಿದ್ದು, ಬೆಡ್ಗಳಿರುವ ಆಸ್ಪತ್ರೆ ಮಾಹಿತಿ ಪಡೆಯಬಹುದಾಗಿದೆ. ಹಾಸಿಗೆ ಲಭ್ಯವಿರುವ ಆಸ್ಪತ್ರೆಗೆ ನೇರವಾಗಿ ಸೋಂಕಿತರು ತೆರಳಿ ಚಿಕಿತ್ಸೆ ಪಡೆಯಬಹುದಾಗಿದೆ. ಆದರೆ, ಹೆಚ್ಚಿನ ಜನರು ಖಾಸಗಿ ಆಸ್ಪತ್ರೆಗಳತ್ತ ಮುಖ ಮಾಡುತ್ತಿದ್ದು, ಅಲ್ಲಿ ಹಾಸಿಗೆ ಕೊರತೆ ಇದೆ. ಆದ್ದರಿಂದ ಸರ್ಕಾರಿ ಆಸ್ಪತ್ರೆಗಳಿಗೆ ಬನ್ನಿ. ಅಲ್ಲಿ ನಿಮಗೆ ವ್ಯವಸ್ಥೆಯನ್ನ ಕಲ್ಪಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಕೊರೋನಾ ವಿರುದ್ಧ ಹೋರಾಡಲು ಎಲ್ಲಾ ರಾಜಕೀಯ ಪಕ್ಷಗಳೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕಿದೆ. ಇದು ರಾಜಕೀಯ ಮಾಡಲು ಹಾಗೂ ಒಬ್ಬರನ್ನು ಬೊಟ್ಟು ಮಾಡಿ ತೋರಿಸುವ ಸಮಯವಲ್ಲ ಎಂದಿದ್ದಾರೆ.
Advertisement