ಬಾಂಗ್ಲಾ ವಿಮಾನ ಹಾರಾಟದ ವೇಳೆ ಪೈಲಟ್ ಗೆ ಹೃದಯಾಘಾತ: ನಾಗ್ಪುರದಲ್ಲಿ ತುರ್ತು ಭೂಸ್ಪರ್ಶ

ಅದೇ ವಿಮಾನದ ಮತ್ತೊಬ್ಬ ವಿಮಾನ ಚಾಲಕ ಕೋಲ್ಕತಾದ ವಿಮಾನ ನಿಯಂತ್ರಣ ಕೊಠಡಿಗೆ ಕರೆ ಮಾಡಿ ಪರಿಸ್ಥಿತಿ ವಿವರಿಸಿ ಸಹಾಯ ಯಾಚಿಸಿದ್ದ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನಾಗ್ಪುರ: ಧಾಕಾದಿಂದ ಮಸ್ಕಟ್ ಗೆ ತೆರಳುತ್ತಿದ್ದ ಬಾಂಗ್ಲಾದೇಶದ ಬಿಮಾನ್ ಸಂಸ್ಥೆಯ ವಿಮಾನ ಆಕಾಶದಲ್ಲಿ ಹಾರುತ್ತಿದ್ದಾಗಲೇ ವಿಮಾನ ಚಾಲಕ ಹೃದಯಾಘಾತಕ್ಕೀಡಾದ ಘಟನೆ ನಡೆದಿದೆ. 

ಬೋಯಿಂಗ್ ವಿಮಾನದಲ್ಲಿ ಈ ಸಂದರ್ಭ 126 ಮಂದಿ ಪ್ರಯಾಣಿಕರಿದ್ದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಚಾಲಕ ಹೃದಯಾಘಾತಕ್ಕೀಡಾದಾಗ ವಿಮಾನ ಭಾರತದ ಮೇಲೆ ಹಾರುತ್ತಿತ್ತು. ಈ ಸಂದರ್ಭ ಅದೇ ವಿಮಾನದ ಮತ್ತೊಬ್ಬ ವಿಮಾನ ಚಾಲಕ ಕೋಲ್ಕತಾದ ವಿಮಾನ ನಿಯಂತ್ರಣ ಕೊಠಡಿಗೆ ಕರೆ ಮಾಡಿ ಪರಿಸ್ಥಿತಿ ವಿವರಿಸಿ ಸಹಾಯ ಯಾಚಿಸಿದ್ದ. 

ಒಡನೆಯೇ ಸಹ ಪೈಲಟ್ ಮನವಿಗೆ ಸ್ಪಂದಿಸಿದ ಕೋಲ್ಕತಾದ ವಿಮಾನ ನಿಯಂತ್ರಣ ಕೊಠಡಿಯ ಸಿಬ್ಬಂದಿ ವಿಮಾನವನ್ನು ಹತ್ತಿರದ ನಾಗ್ಪುರದಲ್ಲಿ ಇಳಿಸುವಂತೆ ಸೂಚನೆ ನೀಡಿದ್ದರು.  ಅದರಂತೆ ವಿಮಾನ ನಾಗ್ಪುರದಲ್ಲಿ ತುರ್ತು ಭೂಸ್ಪರ್ಶ ಮಾಡಿತ್ತು.

ಕೊರೊನಾ ಕಾರಣದಿಂದ ಮುಚ್ಚಿದ್ದ ಬಿಮಾನ್ ವಿಮಾನಯಾನ ಸಂಸ್ಥೆ ಇತ್ತೀಚಿಗಷ್ಟೆ ಭಾರತ ಸೇರಿದಂತೆ ಕೆಲ ರಾಷ್ಟ್ರಗಳಿಗೆ ವಿಮಾನ ಹಾರಾಟ ಪುನರಾರಂಭಿಸಿತ್ತು.

ವಿಮಾನ ಚಾಲಕನನ್ನು ನಾಗ್ಪುರ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಆತನ ಆರೋಗ್ಯ ಸ್ಥಿತಿ ನಿಯಂತ್ರಣದಲ್ಲಿದೆ ಎಂದು ವೈದ್ಯರು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com