ಭಾರತದ ಗಡಿಯೊಳಗೆ ನುಗ್ಗಲು ಯತ್ನಿಸಿದ ಶಸ್ತ್ರಸಜ್ಜಿತ ಉಗ್ರರು, ಯೋಧರ ಗುಂಡಿನ ದಾಳಿ ಬೆನ್ನಲ್ಲೇ ಪರಾರಿ!

ಆಫ್ಘಾನಿಸ್ತಾನ ತಾಲಿಬಾನ್ ತೆಕ್ಕೆಗೆ ಜಾರಿದ ಬೆನ್ನಲ್ಲೇ ಇತ್ತ ಇಂಡೋ-ಪಾಕ್ ಗಡಿಯಲ್ಲಿ ಉಗ್ರ ಚಟುವಟಿಕೆ ತೀವ್ರಗೊಂಡಿದ್ದು, ಇಂದು ಮುಂಜಾನೆ ಶಸ್ತ್ರಸಜ್ಜಿತ ಉಗ್ರರು ಭಾರತದ ಗಡಿಯೊಳಗೆ ನುಗ್ಗಲು ಯತ್ನಿಸಿದ್ದಾರೆ.
ಭಾರತೀಯ ಸೇನೆ
ಭಾರತೀಯ ಸೇನೆ
Updated on

ಶ್ರೀನಗರ: ಆಫ್ಘಾನಿಸ್ತಾನ ತಾಲಿಬಾನ್ ತೆಕ್ಕೆಗೆ ಜಾರಿದ ಬೆನ್ನಲ್ಲೇ ಇತ್ತ ಇಂಡೋ-ಪಾಕ್ ಗಡಿಯಲ್ಲಿ ಉಗ್ರ ಚಟುವಟಿಕೆ ತೀವ್ರಗೊಂಡಿದ್ದು, ಇಂದು ಮುಂಜಾನೆ ಶಸ್ತ್ರಸಜ್ಜಿತ ಉಗ್ರರು ಭಾರತದ ಗಡಿಯೊಳಗೆ ನುಗ್ಗಲು ಯತ್ನಿಸಿದ್ದಾರೆ.

ಹೌದು..  ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯಲ್ಲಿ ಭಾರೀ ಪ್ರಮಾಣದ ಶಸ್ತ್ರಾಸ್ತ್ರ ಹೊಂದಿದ್ದ ಭಯೋತ್ಪಾದಕರ ಗುಂಪೊಂದು ಒಳನುಸುಳುವಿಕೆಗೆ ಪ್ರಯತ್ನಿಸಿದ್ದು, ಈ ವೇಳೆ ಅಲ್ಲೇ ಗಸ್ತು ತಿರುಗುತ್ತಿದ್ದ ಭಾರತೀಯ ಸೇನೆಯು ಉಗ್ರರತ್ತ ಗುಂಡು ಹಾರಿಸಿ ಅವರ ಪ್ರಯತ್ನವನ್ನು ವಿಫಲಗೊಳಿಸಿದೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ಸೇನಾ ಪಡೆಯ ವಕ್ತಾರ ಲೆಫ್ಟಿನೆಂಟ್ ಕರ್ನಲ್ ದೇವೇಂದರ್ ಆನಂದ್ ಅವರು, 'ಭಾರತೀಯ ಸೇನೆಯ ವಿಚಕ್ಷಣ ಪಡೆಗಳಿಂದ ಒಳನುಸುಳುವಿಕೆ ಪ್ರಯತ್ನ ಪತ್ತೆಯಾಗಿದ್ದು, ನಿನ್ನೆ ರಾತ್ರಿ (ಗುರುವಾರ) ಪೂಂಚ್ ಸೆಕ್ಟರ್‌ನಲ್ಲಿ ಎಲ್‌ಒಸಿ ಉದ್ದಕ್ಕೂ ಭಾರೀ ಶಸ್ತ್ರಸಜ್ಜಿತ ಪಾಕಿಸ್ತಾನಿ ಭಯೋತ್ಪಾದಕರ ಗುಂಪು ಒಳನುಸುಳಲು ಪ್ರಯತ್ನಿಸಿತು. ಈ ವೇಳೆ ಕೂಡಲೇ ಸೈನಿಕರು ಅವರನ್ನು ಗುರಿಯಾಗಿಸಿಕೊಂಡು ಗುಂಡಿನ ದಾಳಿ ನಡೆಸಿದ್ದು, ಗುಂಡಿನ ದಾಳಿ ಆರಂಭವಾದ ಬೆನ್ನಲ್ಲೇ ಉಗ್ರರು ಪಾಕಿಸ್ತಾನದತ್ತ ಪರಾರಿಯಾಗಿದ್ದಾರೆ ಎಂದು ಹೇಳಿದರು.

ಭಾರಿ ಪ್ರಮಾಣದ ಸಾಮಗ್ರಿ ವಶಕ್ಕೆ
ಅಂತೆಯೇ ಈ ಪ್ರದೇಶ ಅತ್ಯಂತ ದುರ್ಗಮವಾಗಿದ್ದು, ಭಾರೀ ಗಿಡಗಂಟೆಗಳಿಂದ ಕೂಡಿದೆ. ಹೀಗಾಗಿ ಇಲ್ಲಿ ರಾತ್ರಿ ವೇಳೆ ಸುಲಭವಾಗಿ ಭಾರತದ ಗಡಿಯೊಳಗೆ ನುಸುಳ ಬಹುದು ಎಂಬುದು ಉಗ್ರರ ಲೆಕ್ಕಾಚಾರವಾಗಿತ್ತು. ಆದರೆ ಉಗ್ರರ ಈ ಪ್ರಯತ್ನವನ್ನು ನಮ್ಮ ಸೈನಿಕರು ವಿಫಲಗೊಳಿಸಿದ್ದಾರೆ.  ಎನ್ಕೌಂಟರ್ ಸ್ಥಳದಲ್ಲಿ ಸಂಪೂರ್ಣ ಶೋಧ ನಡೆಸಲಾಗಿದ್ದು, ಭಯೋತ್ಪಾದಕರು ಬಿಟ್ಟು ಹೋಗಿದ್ದ ಅಪಾರ ಪ್ರಮಾಣದ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ, ಇದರಲ್ಲಿ ಬಟ್ಟೆ, ಪ್ಯಾಕೇಜ್ ಮಾಡಿದ ಆಹಾರ ಪದಾರ್ಥಗಳು ಮತ್ತು ಪಾಕಿಸ್ತಾನದ ಗುರುತುಗಳನ್ನು ಹೊಂದಿರುವ ಔಷಧಗಳು ಸೇರಿವೆ ಎಂದು ಲೆಫ್ಟಿನೆಂಟ್ ಕರ್ನಲ್ ಆನಂದ್ ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com