ಶ್ರೀನಗರ: ಎಲ್ಲಾ ಕಾಶ್ಮೀರಿ ಹಿಂದೂಗಳು ಕಾಶ್ಮೀರಿ ಪಂಡಿತರಲ್ಲ ಎಂದು ಜಮ್ಮು ಕಾಶ್ಮೀರ ಮತ್ತು ಲಡಾಖ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಕಾಶ್ಮೀರಿ ಪಂಡಿತರು, ಕಾಶ್ಮೀರಿ ಭಾಷೆ ಮಾತನಾಡುವ, ಕಾಶ್ಮೀರದಲ್ಲಿ ಹಲವು ತಲೆಮಾರುಗಳಿಂದ ನೆಲೆಸಿದ ಹಿಂದೂಗಳು. ಅವರನ್ನು ವಿಭಿನ್ನ ದಿರಿಸು, ಸಂಪ್ರದಾಯ ಮತ್ತು ಆಚಾರ ವಿಚಾರಗಳ ಸಹಾಯದಿಂದ ಗುರುತಿಸಬಹುದು.
ಕಾಶ್ಮೀರ ಕಣಿವೆಯಲ್ಲಿ ನೆಲೆಸಿರುವ ಇತರೆ ಹಿಂದೂಗಳಾದ ರಜಪೂತರು, ಬ್ರಾಹ್ಮಣರು, ಪರಿಶಿಷ್ಟ ಜಾತಿ ಪಂಗಡದವರಿಗಿಂತ ಕಾಶ್ಮೀರಿ ಪಂಡಿತರು ವಿಭಿನ್ನ ಸಂಸ್ಕೃತಿಯವರು ಎಂದು ನ್ಯಾಯಾಲಯ ತನ್ನ ತೀರ್ಪಿನಲ್ಲಿ ಅಭಿಪ್ರಾಯಪಟ್ಟಿದೆ.
ಪ್ರಧಾನಿ ಮೋದಿಯವರು ಕಾಶ್ಮೀರದಲ್ಲಿ ನೆಲೆಸಿರುವ ಕಾಶ್ಮೀರಿ ಪಂಡಿತರಿಗಾಗಿ ಸಹಾಯ ಪ್ಯಾಕೇಜು ಹಾಗೂ ಉದ್ಯೋಗ ಕೋಟಾ ನೆರವು ಘೋಷಿಸಿದ್ದರು. ಎಸ್ ಆರ್ ಓ ನಲ್ಲಿ ಕಾಶ್ಮೀರಿ ಪಂಡಿತರು ಎಂದರೆ ಯಾರು ಎಂಬುದನ್ನು ಸ್ಥೂಲವಾಗಿ ವಿವರಿಸದ ಕಾರಣ ಕಾಶ್ಮೀರದ ಇತರೆ ಹಿಂದೂಗಳನ್ನೂ ಕಾಶ್ಮೀರಿ ಪಂಡಿತರೆಂದು ಪರಿಗಣಿಸಿ ಪ್ರಧಾನಿ ಪ್ಯಾಕೇಜಿನ ಪ್ರಯೋಜನವನ್ನು ವಿಸ್ತರಿಸುವಂತೆ ಅರ್ಜಿ ಸಲ್ಲಿಸಲಾಗಿತ್ತು.
ಕಾಶ್ಮೀರಿ ಪಂಡಿತರ ಡೆಫೆನಿಷನ್ ಅನ್ನು ಸ್ಪಷ್ಟವಾಗಿ ತಿಳಿಸಲಾಗಿಲ್ಲ ಎಂಬುದನ್ನು ನ್ಯಾಯಲಯ ಒಪ್ಪಿಕೊಂಡಿದೆ. ಆದರೆ 1989ರಲ್ಲಿ ಕಾಶ್ಮೀರದಿಂದ ವಲಸೆ ಹೋಗದೆ ಅಲ್ಲಿಯೇ ಉಳಿದ ಕಾಶ್ಮೀರಿ ಪಂಡಿತರ ಕುಟುಂಬ ಎಂಬುದನ್ನು ಎಸ್ ಆರ್ ಓ ನಲ್ಲಿ ತಿಳಿಸಲಾಗಿದೆ. ಹೀಗಾಗಿ ಅರ್ಜಿದಾರರ ಮನವಿ ಪುರಸ್ಕರಿಸಲು ಆಗುವುದಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
Advertisement