ನವದೆಹಲಿ: ದೇಶದ ವಿವಿಧ ನ್ಯಾಯಮಂಡಳಿಗಳಲ್ಲಿನ ಸಿಬ್ಬಂದಿ ಮತ್ತು ಅಧಿಕಾರಿಗಳು, ಮುಖ್ಯಸ್ಥರ ಕೊರತೆಯನ್ನು ತುರ್ತಾಗಿ 2 ವಾರಗಳಲ್ಲಿ ನೀಗಿಸುವಂತೆ ಕೇಂದ್ರ ಸರ್ಕಾರಕ್ಕೆ ಬುಧವಾರ ಸುಪ್ರೀಂ ಕೋರ್ಟ್ ಸೂಚಿಸಿದೆ.
ದೇಶದ ವಿವಿಧ ನ್ಯಾಯಮಂಡಳಿಗಳಲ್ಲಿ ಅಧ್ಯಕ್ಷರು ಮತ್ತು ನ್ಯಾಯಾಂಗ ಮತ್ತು ತಾಂತ್ರಿಕ ಸದಸ್ಯರ ಕೊರತೆಯ ತೀವ್ರ ಸಂಕಷ್ಟ ಎದುರಿಸುತ್ತಿದ್ದು, ಮುಂದಿನ 2 ವಾರಗಳಲ್ಲಿ ಈ ಸಮಸ್ಯೆ ನೀಗಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಬುಧವಾರ ಸೂಚಿಸಿದೆ.
ಅಂತೆಯೇ ಈ ಪ್ರಕ್ರಿಯೆಯಲ್ಲಿ ಶಿಫಾರಸ್ಸು ಮಾಡಲಾದ ವ್ಯಕ್ತಿಯನ್ನು ತೆಗೆದರೆ ಅದಕ್ಕೆ ಸೂಕ್ತ ಉತ್ತರ ನೀಡುವಂತೆಯೂ ಸರ್ವೋಚ್ಛ ನ್ಯಾಯಾಲಯ ಸೂಚಿಸಿದೆ.
ಈ ಪ್ರಕರಣದ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ಮತ್ತು ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್ ನೇತೃತ್ವದ ನ್ಯಾಯಪೀಠವು, 'ರಾಷ್ಟ್ರದಾದ್ಯಂತದ ಅರೆ ನ್ಯಾಯಾಂಗ ಸಂಸ್ಥೆಗಳಲ್ಲಿ ಭರ್ತಿ ಮಾಡದಿರುವ ಹುದ್ದೆಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿತು. ಇದು 'ಕರುಣಾಜನಕ' ಸ್ಥಿತಿಯಾಗಿದ್ದು, ದಾವೆ ಹೂಡುವವರನ್ನು 'ಸುಮ್ಮನೆ ಬಿಡಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿತು.
ಈ ವೇಳೆ ಸರ್ಕಾರದ ಪರ ವಾದ ಮಂಡಿಸಿದ ಅಟಾರ್ನಿ ಜನರಲ್ ಕೆ ಕೆ ವೇಣುಗೋಪಾಲ್ ಅವರು, ಶೋಧ ಮತ್ತು ಆಯ್ಕೆ ಸಮಿತಿಯಿಂದ ಶಿಫಾರಸು ಮಾಡಲಾದ ವ್ಯಕ್ತಿಗಳ ಪಟ್ಟಿಯಿಂದ ನ್ಯಾಯಮಂಡಳಿಗಳಲ್ಲಿ ಎರಡು ವಾರಗಳಲ್ಲಿ ಕೇಂದ್ರ ಸರ್ಕಾರವು ನೇಮಕಾತಿ ಮಾಡುವುದಾಗಿ ಪೀಠಕ್ಕೆ ಭರವಸೆ ನೀಡಿದರು.
ಮೂಲಗಳ ಪ್ರಕಾರ ವಿವಿಧ ಪ್ರಮುಖ ನ್ಯಾಯಾಧಿಕರಣಗಳು ಮತ್ತು ಮೇಲ್ಮನವಿ ನ್ಯಾಯಾಧಿಕರಣಗಳಲ್ಲಿ ಸುಮಾರು 250 ಹುದ್ದೆಗಳು ಖಾಲಿ ಇವೆ. ನ್ಯಾಯಮಂಡಳಿಗಳಲ್ಲಿ ಖಾಲಿ ಇರುವ ಹುದ್ದೆಗಳು ಮತ್ತು ಅರೆ ನ್ಯಾಯಾಂಗ ಸಂಸ್ಥೆಗಳನ್ನು ನಿಯಂತ್ರಿಸುವ ಹೊಸ ಕಾನೂನಿನ ಕುರಿತು ಅರ್ಜಿಗಳ ಕುರಿತು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿದೆ.
Advertisement