ನವದೆಹಲಿ: ದೆಹಲಿ ಕೋರ್ಟ್ ಆವರಣದಲ್ಲಿ ನಡೆದ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಗೋಗಿ ಹಾಗೂ ಟಿಲ್ಲು ಗ್ಯಾಂಗ್ ಸದಸ್ಯರಿರುವ ಜೈಲಿಗೆ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ಅಧಿಕಾರಿಗಳು ಶನಿವಾರ ಮಾಹಿತಿ ನೀಡಿದ್ದಾರೆ.
ದೆಹಲಿಯ ರೋಹಿಣಿ ಕೋರ್ಟ್ ಆವರಣವದಲ್ಲಿ ನಿನ್ನೆಯಷ್ಟೇ ಶೂಟೌಟ್ ನಡೆದಿತ್ತು. ದಿಲ್ಲಿಯ ಮೋಸ್ಟ್ ವಾಂಟೆಡ್ ಕ್ರಿಮಿನಲ್, ಗ್ಯಾಂಗ್ಸ್ಟರ್ ಜಿತೇಂದ್ರ ಗೋಗಿ ಹಾಗೂ ಇತರೆ ಮೂವರು ಶೂಟೌಟ್ ನಲ್ಲಿ ಸಾವನ್ನಪ್ಪಿದ್ದರು.
ಇದನ್ನೂ ಓದಿ: ದೆಹಲಿಯ ರೋಹಿಣಿ ಕೋರ್ಟ್ ನಲ್ಲಿ ಶೂಟೌಟ್: ಗ್ಯಾಂಗ್ ಸ್ಟರ್ ಜಿತೇಂದರ್ ಮನ್ 'ಗೋಗಿ' ಸೇರಿ ನಾಲ್ವರ ಸಾವು
ಗ್ಯಾಂಗ್ಸ್ಟರ್ ಜಿತೇಂದ್ರನನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲು ರೋಹಿಣಿ ಕೋರ್ಟ್ 206 ನೇ ಸಂಖ್ಯೆ ಕರೆದುಕೊಂಡು ಬರುವಾಗ ದಾಳಿ ನಡೆದಿತ್ತು.
ವಕೀಲರ ದಿರಿಸಿನಲ್ಲಿ ಬಂದಿದ್ದ ದಾಳಿಕೋರರು, ಜಿತೇಂದ್ರನ ಮೇಲೆ ಗುಂಡಿನ ದಾಳಿ ನಡೆಸಿ ಆತನನ್ನು ಸ್ಥಳದಲ್ಲಿಯೇ ಹತ್ಯೆ ಮಾಡಿದ್ದರು. ಕೂಡಲೇ ಪ್ರತಿ ದಾಳಿ ನಡೆಸಿದ ದಿಲ್ಲಿ ವಿಶೇಷ ಘಟಕದ ಪೊಲೀಸರು ಇಬ್ಬರು ದಾಳಿಕೋರರನ್ನು ಹತ್ಯೆ ಮಾಡಿದ್ದರು. ದಾಳಿಕೋರರನ್ನು ಜಿತೇಂದ್ರನ ವೈರಿ ಗ್ಯಾಂಗ್ ಟಿಲ್ಲು ತಾಜ್ಪೂರಿಯಾಕ್ಕೆ ಸೇರಿದವರು ಎಂದು ಹೇಳಲಾಗುತ್ತಿದೆ.
ಘಟನೆ ಸಂಬಂಧ ಗೋಗಿ ಹಾಗೂ ಟಿಲ್ಲು ಗ್ಯಾಂಗ್ ಸದಸ್ಯರನ್ನು ಇರಿಸಿರುವ ಜೈಲುಗಳಿಗೆ ಇದೀಗ ಹೆಚ್ಚಿನ ಭದ್ರತೆಯನ್ನು ನಿಯೋಜಿಸಲಾಗಿದೆ ಎಂದು ಹಿರಿಯ ಜೈಲು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
Advertisement