ಶಿಮ್ಲಾ: ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯ ಕಶನ್ನಲ್ಲಿ ಭಾರೀ ಮಳೆ ಸುರಿದಾಗ, ಹುಷಾರಾಗಿರುವಂತೆ ವಾಟ್ಸಾಪ್ ಗ್ರೂಪ್ನಲ್ಲಿ ಎಚ್ಚರಿಕೆ ಸಂದೇಶ ಕಳುಹಿಸಿದ್ದ ಗ್ರಾಮದ ಮುಖ್ಯಸ್ಥ ಖೇಮ್ ಸಿಂಗ್ ಮತ್ತು ಆತನ ಸಂಬಂಧಿಕರು ಭೂಕುಸಿತದಲ್ಲಿ ಮೃತಪಟ್ಟಿದ್ದಾರೆ.
ಭೂಕುಸಿತದಲ್ಲಿ ಗ್ರಾಮದ 'ಪ್ರಧಾನ್' ಖೇಮ್ ಸಿಂಗ್ ಮತ್ತು ಇತರ ಏಳು ಕುಟುಂಬ ಸದಸ್ಯರು ಸಾವನ್ನಪ್ಪಿದ್ದಾರೆ.
ಮುಖ್ಯಮಂತ್ರಿ ಜೈ ರಾಮ್ ಠಾಕೂರ್ ಅವರು ಸೋಮವಾರ ಮಂಡಿ ಜಿಲ್ಲೆಯಲ್ಲಿ ಹಠಾತ್ ಪ್ರವಾಹ ಮತ್ತು ಭೂಕುಸಿತ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ನಂತರ, ಖೇಮ್ ಸಿಂಗ್ ಅವರ ಮನೆಯನ್ನು ಸರ್ಕಾರದಿಂದ ಪುನರ್ನಿರ್ಮಿಸಲಾಗುವುದು ಎಂದು ಹೇಳಿದ್ದರು.
ಶನಿವಾರ ಹಿಮಾಚಲ ಪ್ರದೇಶದಾದ್ಯಂತ ಭಾರೀ ಮಳೆಯಿಂದ ಉಂಟಾದ ಭೂಕುಸಿತ ಮತ್ತು ಹಠಾತ್ ಪ್ರವಾಹದಿಂದ ಸಂಭವಿಸಿದ 36 ಪ್ರತ್ಯೇಕ ಘಟನೆಗಳಲ್ಲಿ 22 ಜನರು ಸಾವನ್ನಪ್ಪಿದ್ದಾರೆ, ಹನ್ನೆರಡು ಮಂದಿ ಗಾಯಗೊಂಡಿದ್ದಾರೆ ಮತ್ತು ಐವರು ನಾಪತ್ತೆಯಾಗಿದ್ದಾರೆ.
ಭೂಕುಸಿತ ಮತ್ತು ಹಠಾತ್ ಪ್ರವಾಹದಲ್ಲಿ ಸಾವನ್ನಪ್ಪಿದ ಮೃತರ ಸಂಬಂಧಿಕರಿಗೆ ರಾಜ್ಯ ಸರ್ಕಾರ 4 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಠಾಕೂರ್ ಘೋಷಿಸಿದ್ದಾರೆ.
ಭೂಕುಸಿತದ ಬಗ್ಗೆ ಮಾಹಿತಿ ಪಡೆದ ನಂತರ ಯಾವುದೇ ಸಮಯ ವ್ಯರ್ಥ ಮಾಡದೆ ರಕ್ಷಣಾ ತಂಡಗಳು ಗ್ರಾಮಕ್ಕೆ ತೆರಳಿದರೂ ಅವರ ಜೀವ ಉಳಿಸಲು ಸಾಧ್ಯವಾಗಲಿಲ್ಲ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.
Advertisement
Advertisement