ಪಾಟ್ನಾ: ಬಿಹಾರದ ಛಾಪ್ರಾದಲ್ಲಿ ನಕಲಿ ಮದ್ಯ ಸೇವಿಸಿ ಮೃತಪಟ್ಟಿರುವವರ ಸಂಖ್ಯೆ 50ಕ್ಕೆ ಏರಿಕೆಯಾಗಿದೆ.
ಪ್ರಕರಣ ಸಂಬಂಧ ಇಂದು 11 ಮಂದಿ ಸಾವನ್ನಪ್ಪಿದ್ದು, ಇದರೊಂದಿಗೆ ಮೃತರಕ ಸಂಖ್ಯೆ 50ಕ್ಕೆ ಏರಿಕೆಯಾಗಿದೆ. ಈ ದುರಂತದ ಹಿನ್ನೆಲೆಯಲ್ಲಿ ಛಾಪ್ರಾ ಠಾಣಾಧಿಕಾರಿ ರಿತೇಶ್ ಮಿಶ್ರಾ ಮತ್ತು ಕಾನ್ಸ್ ಟೇಬಲ್ ವಿಕೇಶ್ ತಿವಾರಿಯನ್ನು ಕೂಡಲೇ ಜಾರಿಯಾಗುವಂತೆ ಸೇವೆಯಿಂದ ಅಮಾನತು ಮಾಡಲಾಗಿದೆ.
ಬಹುತೇಕ ಸಾವುಗಳು ಬುಧವಾರ ಹಾಗೂ ಗುರುವಾರ ಸಂಭವಿಸಿದೆ ಎಂದು ತಿಳಿದುಬಂದಿದೆ. ಏಪ್ರಿಲ್ 2016 ರಿಂದ ನಿತೀಶ್ ಕುಮಾರ್ ಸರ್ಕಾರವು ಬಿಹಾರದಲ್ಲಿ ಮದ್ಯ ಮಾರಾಟ ಮತ್ತು ಸೇವನೆಯನ್ನು ನಿಷೇಧಿಸಿತಿತ್ತು. ಇದೀಗ ನಕಲಿ ಮದ್ಯ ಸೇವಿಸಿ ಹಲವರು ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಈ ಘಟನೆಯು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಕೋಲಾಹಲ ಸೃಷ್ಟಿಸಿದೆ.
ನಿತೀಶ್ ಕುಮಾರ್ ಅವರ ಮಾಜಿ ಮಿತ್ರ ಪಕ್ಷವಾದ ಬಿಜೆಪಿ ನಾಯಕರು, ಗುರುವಾರ ರಾಜ್ಯಸಭೆಯಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿ, ಸರ್ಕಾರದ ವಿರುದ್ಧ ತೀವ್ರವಾಗಿ ವಾಗ್ದಾಳಿ ನಡೆಸಿದರು.
ಬಿಜೆಪಿ ಆರೋಪಕ್ಕೆ ಉತ್ತರಿಸಿದ ನಿತೀಶ್ ಕುಮಾರ್ ಅವರು, ಯಾರೆಲ್ಲಾ ನಕಲಿ ಮದ್ಯ ಸೇವಿಸ್ತಾರೋ ಅವರೆಲ್ಲಾ ಸಾಯೋದು ಖಂಡಿತ. ಖುದ್ದು ಜನರೇ ಈ ವಿಚಾರದಲ್ಲಿ ಎಚ್ಚರಿಕೆ ವಹಿಸಬೇಕು. ಕೆಲವೊಂದು ವ್ಯಕ್ತಿಗಳು ದುಡ್ಡಿಗಾಗಿ ಈ ಕೆಲಸ ಮಾಡ್ತಾರೆ. ಕೆಲವು ವ್ಯಕ್ತಿಗಳು ನಕಲಿ ಮದ್ಯ ಸೇವಿಸುವ ತಪ್ಪು ಮಾಡ್ತಾರೆ. ಇಂಥವನ್ನೆಲ್ಲಾ ಸೇವಿಸುವ ವ್ಯಕ್ತಿಗಳು ಖಂಡಿತವಾಗಿ ಸಾಯುತ್ತಾರೆ ಎಂದು ಹೇಳಿದರು.
ಬಿಹಾರದ ಅಬಕಾರಿ ಸಚಿವ ಸುನೀಲ್ ಕುಮಾರ್ ಮಾತನಾಡಿ, ಘಟನೆಗೆ ಕಾರಣರಾದ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.
ಎಫ್ಐಆರ್ ದಾಖಲಿಸುವ ಪ್ರಕ್ರಿಯೆ ನಡೆಯುತ್ತಿದೆ. ಎಸ್ಪಿ ಜತೆ ದೂರವಾಣಿ ಮೂಲಕ ಮಾತನಾಡಿದ್ದೇನೆ ಎಂದು ಹೇಳಿದ್ದಾರೆ.
Advertisement