ಸೂರತ್: ಗುಜರಾತ್ನ ಸೂರತ್ ನಗರದ ಅಮ್ರೋಲಿ ಪ್ರದೇಶದ ಅಂಜನಿ ಕೈಗಾರಿಕಾ ಪ್ರದೇಶದಲ್ಲಿ ವೇದಾಂತ ಟೆಕ್ಸೋ ಕಂಪನಿಯಲ್ಲಿ ತ್ರಿವಳಿ ಕೊಲೆ ನಡೆದಿದೆ. ಸೂರತ್ನಲ್ಲಿ ಕಸೂತಿ ಸಂಸ್ಥೆಯ ಮಾಲೀಕರು, ಅವರ ತಂದೆ ಮತ್ತು ಚಿಕ್ಕಪ್ಪನನ್ನು ವ್ಯಕ್ತಿ ಮತ್ತು ಅವನ ಸಹಚರರು ಚಾಕುವಿನಿಂದ ಇರಿದು ಕೊಂದಿದ್ದಾರೆ.
ಆರೋಪಿಯು ತನ್ನ ಮಾಜಿ ಉದ್ಯೋಗಿಯಾಗಿದ್ದು ಇತ್ತೀಚೆಗೆ ಆತನನ್ನು ಕೆಲಸದಿಂದ ತೆಗೆದುಹಾಕಿದ್ದರು. ಇದರಿಂದ ಅಸಮಾಧಾನಗೊಂಡಿದ್ದ ಆತನ ಈ ದುಷ್ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ. ಇನ್ನು ತ್ರಿವಳಿ ಕೊಲೆಗೆ ಸಂಬಂಧಿಸಿದಂತೆ ಗೃಹ ಸಚಿವ ಹರ್ಷ ಸಾಂಘ್ವಿ ಸೂರತ್ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.
ಸೂರತ್ ಪೊಲೀಸರು ಇಬ್ಬರೂ ಆರೋಪಿಗಳನ್ನು ಕಸ್ಟಡಿಗೆ ತೆಗೆದುಕೊಂಡಿದ್ದು, ಪ್ರಕರಣದ ತನಿಖೆಗಾಗಿ ವಿಶೇಷ ತನಿಖಾ ತಂಡವನ್ನು(ಎಸ್ಐಟಿ) ರಚಿಸಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಡಿಸಿಪಿ ವಲಯ-5ರ ಉಪ ಪೊಲೀಸ್ ಆಯುಕ್ತ ಹರ್ಷದ್ ಮೆಹ್ತಾ ಮಾತನಾಡಿ, ಆರೋಪಿ ಮತ್ತು ಆತನ ಸಹಚರರು ಇಂದು ಬೆಳಗ್ಗೆ ಕಂಪನಿಗೆ ಬಂದು ಘಟಕದ ಮಾಲೀಕ, ಆತನ ತಂದೆ ಮತ್ತು ಚಿಕ್ಕಪ್ಪನಿಗೆ ಚಾಕುವಿನಿಂದ ಇರಿದಿದ್ದಾರೆ ಎಂದರು.
ಆರೋಪಿಗಳಿಬ್ಬರನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಹರ್ಷದ್ ಮೆಹ್ತಾ ತಿಳಿಸಿದ್ದಾರೆ. ಮೃತರನ್ನು ಕಲ್ಪೇಶ್ ಧೋಲಾಕಿಯಾ (36), ಧಂಜಿ ಧೋಲಾಕಿಯಾ (61) ಮತ್ತು ಘನಶ್ಯಾಮ್ ರಾಜೋಡಿಯಾ (48) ಎಂದು ಗುರುತಿಸಲಾಗಿದೆ.
ಕಸೂತಿ ಸಂಸ್ಥೆಯ ಮಾಲೀಕರು ಮತ್ತು ಅವರ ಉದ್ಯೋಗಿ ನಡುವಿನ ಜಗಳದಿಂದಾಗಿ ಮೂವರನ್ನು ಕೊಲೆ ಮಾಡಲಾಗಿದೆ ಎಂದು ಡಿಸಿಪಿ ಹೇಳಿದ್ದಾರೆ. ಆರೋಪಿಯನ್ನು ವಿಚಾರಣೆ ನಡೆಸಿದಾಗ, 10 ದಿನಗಳ ಹಿಂದೆ ರಾತ್ರಿ ಪಾಳಿಯಲ್ಲಿ ಮಲಗಿದ್ದಾಗ ಅವರ ನಡುವೆ ತೀವ್ರ ವಾಗ್ವಾದ ನಡೆದ ನಂತರ ಕಾರ್ಖಾನೆ ಮಾಲೀಕರು ಆತನನ್ನು ಕೆಲಸದಿಂದ ತೆಗೆದುಹಾಕಿದ್ದರು ಎಂದು ತಿಳಿದುಬಂದಿದೆ.
ಆರೋಪಿಗಳು ಹರಿತವಾದ ಆಯುಧಗಳೊಂದಿಗೆ ಕಾರ್ಖಾನೆಗೆ ನುಗ್ಗಿ ಸಂತ್ರಸ್ತರಿಗೆ ಹಲವು ಬಾರಿ ಇರಿದಿರುವುದು ಸಿಸಿಟಿವಿ ದೃಶ್ಯಾವಳಿಗಳಲ್ಲಿ ಕಂಡುಬಂದಿದೆ ಎಂದು ಡಿಸಿಪಿ ಮೆಹ್ತಾ ತಿಳಿಸಿದ್ದಾರೆ. 'ಇಡೀ ಘಟನೆಯು ತುಂಬಾ ಗಂಭೀರವಾಗಿದ್ದು ದುಃಖಕರವಾಗಿದೆ ಎಂದರು.
ಫೋರೆನ್ಸಿಕ್ ತಂಡದ ಸಹಾಯದಿಂದ ಸಾಕ್ಷ್ಯ ಸಂಗ್ರಹಿಸಲಾಗುತ್ತಿದ್ದು, ವಾರದೊಳಗೆ ಚಾರ್ಜ್ ಶೀಟ್ ಸಲ್ಲಿಸುವ ಗುರಿ ಹೊಂದಿದ್ದೇವೆ ಎಂದ ಡಿಸಿಪಿ, ಮಾಲೀಕನ ಜತೆ ಜಗಳವಾಡಿ ಆನ್ ಲೈನ್ ನಲ್ಲಿ ಆರೋಪಿ ಚಾಕು ಖರೀದಿಸಿರುವುದು ಪ್ರಾಥಮಿಕ ತನಿಖೆಯಿಂದ ಬೆಳಕಿಗೆ ಬಂದಿದೆ ಎಂದರು.
Advertisement