ರಕ್ಷಣಾ ಸಮಿತಿ ಸಭೆ: ಅಗ್ನಿಪಥ್ ಮರುಪರಿಶೀಲನೆ ಮನವಿ ಪತ್ರಕ್ಕೆ ಸಹಿ ಹಾಕಲು ಕಾಂಗ್ರೆಸ್ ಸಂಸದ ಮನೀಷ್ ತಿವಾರಿ ಹಿಂದೇಟು!
ನವದೆಹಲಿ: ರಕ್ಷಣಾ ಸಲಹಾ ಸಮಿತಿಯ ಭಾಗವಾಗಿರುವ ಕಾಂಗ್ರೆಸ್ ನಾಯಕ ಮನೀಷ್ ತಿವಾರಿ ಅಗ್ನಿಪಥ್ ಯೋಜನೆ ಹಿಂಪಡೆಯಲು ಮನವಿ ಮಾಡಿದ್ದ 6 ವಿಪಕ್ಷ ಸಂಸದರ ಪತ್ರಕ್ಕೆ ಸಹಿ ಹಾಕಲು ನಿರಾಕರಿಸಿದ್ದಾರೆ.
ಶಕ್ತಿಸಿಂಹ ಘೋಲಿ, ರಜನಿ ಪಾಟೀಲ್ (ಕಾಂಗ್ರೆಸ್) ಸುಪ್ರಿಯಾ ಸುಲೆ (ಎನ್ ಸಿಪಿ) ಸುಗತಾ ರಾಯ್, ಸುದೀಪ್ ಬಂಡೋಪಾಧ್ಯಾಯ(ಟಿಎಂಸಿ) ಆರ್ ಜೆಡಿಯ ಎಡಿ ಸಿಂಗ್ ಅವರು ಅಗ್ನಿಪಥ್ ಯೋಜನೆಯನ್ನು ಮರುಪರಿಶೀಲಿಸಬೇಕು, ಹಿಂಪಡೆಯಬೇಕು ಎಂಬ ಸಲಹೆಯನ್ನು ಕೈಬರಹದ ಮೂಲಕವಿದ್ದ ಪತ್ರದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ನೀಡಿದ್ದರು.
ಸಮಿತಿಯ ಸದಸ್ಯರಿಗೆ ಸರ್ಕಾರ ಅಗ್ನಿಪಥ್ ಯೋಜನೆಯ ಕುರಿತ ಪ್ರಸ್ತುತಿಯನ್ನು ನೀಡಿತ್ತು. ಸಭೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹಾಗೂ ಮೂರೂ ಪಡೆಗಳ ಮುಖ್ಯಸ್ಥರು ರಕ್ಷಣಾ ಕಾರ್ಯದರ್ಶಿಗಳು ಭಾಗವಹಿಸಿದ್ದರು.
ಮೂಲಗಳ ಪ್ರಕಾರ ಕಾಂಗ್ರೆಸ್ ಸಂಸದ ಮನೀಷ್ ತಿವಾರಿ ಅಗ್ನಿಪಥ್ ಯೋಜನೆಯನ್ನು ಬಹಿರಂಗವಾಗಿ ಹೊಗಳಿದ್ದು, ಸೇನಾ ಪಡೆಗಳಲ್ಲಿ ಬದಲಾವಣೆ ತರಲು ಅಗತ್ಯವಿದ್ದ ಯೋಜನೆ ಇದಾಗಿದೆ ಎಂದು ಹೇಳುವ ಮೂಲಕ ಪಕ್ಷದ ನಿಲುವಿಗೆ ತದ್ವಿರುದ್ಧವಾದ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಕಾಂಗ್ರೆಸ್ ತಿವಾರಿ ಅವರ ಅಭಿಪ್ರಾಯವನ್ನು ವೈಯಕ್ತಿಕ ದೃಷ್ಟಿಕೋನ, ಪಕ್ಷಕ್ಕೂ ಇದಕ್ಕೂ ಸಂಬಂಧವಿಲ್ಲ ಎಂದು ಹೇಳಿತ್ತು.

