ಭಾರಿ ಮಳೆಯಿಂದಾಗಿ ವ್ಯಾಸರಪಾಡಿಯಲ್ಲಿ ಜಲಾವೃತಗೊಂಡ ಗಣೇಶಪುರಂ ಮಾರ್ಗ ದಾಟಲು ಸ್ಥಳೀಯ ನಿವಾಸಿಗಳ ಹರಸಾಹಸ
ಭಾರಿ ಮಳೆಯಿಂದಾಗಿ ವ್ಯಾಸರಪಾಡಿಯಲ್ಲಿ ಜಲಾವೃತಗೊಂಡ ಗಣೇಶಪುರಂ ಮಾರ್ಗ ದಾಟಲು ಸ್ಥಳೀಯ ನಿವಾಸಿಗಳ ಹರಸಾಹಸ

ತಮಿಳುನಾಡಿನ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ; ಚೆನ್ನೈನಲ್ಲಿ ಮಳೆ ಅವಘಡಗಳಲ್ಲಿ ಇಬ್ಬರು ಸಾವು; ಆರೆಂಜ್ ಅಲರ್ಟ್ ಘೋಷಣೆ

ತಮಿಳುನಾಡಿನ ಹಲವು ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಚೆನ್ನೈನಲ್ಲಿ ಮಳೆ ಸಂಬಂಧಿತ ಘಟನೆಗಳಿಂದ ನಗರದಲ್ಲಿ ಇಬ್ಬರು ಮೃತಪಟ್ಟಿದ್ದಾರೆ ಎಂದು ವರದಿಗಳು ತಿಳಿಸಿವೆ.
Published on

ಚೆನ್ನೈ: ತಮಿಳುನಾಡಿನ ಹಲವು ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಚೆನ್ನೈನಲ್ಲಿ ಮಳೆ ಸಂಬಂಧಿತ ಘಟನೆಗಳಿಂದ ನಗರದಲ್ಲಿ ಇಬ್ಬರು ಮೃತಪಟ್ಟಿದ್ದಾರೆ ಎಂದು ವರದಿಗಳು ತಿಳಿಸಿವೆ.

ಮಂಗಳವಾರ ಬೆಳಗ್ಗೆ ಮನೆಯ ಬಾಲ್ಕನಿ ಗೋಡೆಯ ಒಂದು ಭಾಗ 47 ವರ್ಷದ ಮಹಿಳೆಯೊಬ್ಬರ ಮೇಲೆ ಬಿದ್ದು ಮೃತಪಟ್ಟಿದ್ದಾರೆ. ಪುಲಿಯನ್‌ತೋಪ್‌ನ ಪ್ರಕಾಶ್ ರಾವ್ ಕಾಲೋನಿ ನಿವಾಸಿಯಾದ ಶಾಂತಿ ಎಂಬುವವರು ತಮ್ಮ ಮನೆಯ ಹೊರಗೆ ನಿಂತು ಕಾರ್ಪೋರೇಷನ್ ನೀರನ್ನು ಪಂಪ್ ಮಾಡುತ್ತಿದ್ದಾಗ ಗೋಡೆಯು ಆಕೆಯ ಮೇಲೆ ಬಿದ್ದಿದೆ.

ಶಾಂತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಆಕೆಯ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಸ್ಟಾನ್ಲಿ ಆಸ್ಪತ್ರೆಗೆ ಕಳುಹಿಸಲಾಗಿದೆ. ಪುಲಿಯನ್‌ತೋಪ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಸೋಮವಾರ ಸಂಜೆಯಿಂದ ಸುರಿದ ಭಾರಿ ಮಳೆಗೆ ಹಳೆಯ ಮನೆಯ ಗೋಡೆ ಕುಸಿದಿದೆ ಎಂದು ಪ್ರಾಥಮಿಕ ವಿಚಾರಣೆಯಿಂದ ತಿಳಿದುಬಂದಿದೆ.

ಇನ್ನೊಂದು ಘಟನೆಯಲ್ಲಿ ಸೋಮವಾರ ವ್ಯಾಸರಪಾಡಿಯಲ್ಲಿ ವಿದ್ಯುತ್ ತಂತಿ ಸ್ಪರ್ಶಿಸಿ 52 ವರ್ಷದ ಆಟೋ ಚಾಲಕರೊಬ್ಬರು ಸಾವಿಗೀಡಾಗಿದ್ದಾರೆ. ಮದ್ಯದ ಅಮಲಿನಲ್ಲಿದ್ದ ದೇವೇಂದ್ರನ್ ಎಂದು ಗುರುತಿಸಲಾದ ವ್ಯಕ್ತಿ ಸೋಮವಾರ ರಾತ್ರಿ ವ್ಯಾಸರಪಾಡಿಯ ಬಿವಿ ಕಾಲೋನಿಯಲ್ಲಿರುವ ತನ್ನ ಮನೆಗೆ ಮರಳುತ್ತಿದ್ದರು. ರಸ್ತೆಯಲ್ಲಿ ನಿಂತಿದ್ದ ಮೊಣಕಾಲುದ್ದದ ಮಳೆನೀರಿನಲ್ಲಿ ನಡೆದು ಹೋಗುತ್ತಿದ್ದಾಗ, ಮನೆಯ ಸಮೀಪದಲ್ಲಿ ನಿರ್ಮಿಸಲಾದ ಟೆಂಟ್‌ನ ಕಂಬದ ಸಂಪರ್ಕಕ್ಕೆ ಬಂದಿದ್ದಾರೆ. ಪಕ್ಕದ ಇಬಿ ಬಾಕ್ಸ್‌ನ ವಿದ್ಯುತ್ ತಂತಿಗೆ ಕಂಬ ತಗುಲಿದ್ದರಿಂದ ವಿದ್ಯುತ್ ಸ್ಪರ್ಶಿಸಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಎಂಕೆಬಿ ನಗರ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಸ್ಟಾನ್ಲಿ ಆಸ್ಪತ್ರೆಗೆ ರವಾನಿಸಿದ್ದಾರೆ. ಹೆಚ್ಚಿನ ತನಿಖೆಗಳು ನಡೆಯುತ್ತಿವೆ.

ಈಮಧ್ಯೆ, ಚೆನ್ನೈ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬುಧವಾರ ಬೆಳಗಿನ ತನಕ ಸಾಧಾರಣದಿಂದ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಚೆನ್ನೈನ ಎಲ್ಲಾ ವಾರ್ಡ್‌ಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.

ಮುನ್ಸೂಚನೆಯಂತೆ ಮಂಗಳವಾರ ಚೆನ್ನೈ ಮತ್ತು ನೆರೆಯ ಜಿಲ್ಲೆಗಳಾದ ತಿರುವಳ್ಳೂರು, ಕಾಂಚೀಪುರಂ ಮತ್ತು ಚೆಂಗಲ್‌ಪೇಟ್‌ನಲ್ಲಿ ಭಾರಿ ಮಳೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಚೆನ್ನೈ, ತಿರುವಳ್ಳೂರು, ಕಾಂಚೀಪುರಂ ಮತ್ತು ಚೆಂಗಲ್‌ಪೇಟ್ ಜಿಲ್ಲೆಗಳಲ್ಲಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.

ತಿರುವಳ್ಳೂರಿನ ರೆಡ್ ಹಿಲ್ಸ್‌ನಲ್ಲಿ ಮಂಗಳವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿಯೇ ಅತಿ ಹೆಚ್ಚು 13 ಸೆಂ.ಮೀ ಮಳೆಯಾಗಿದೆ. ಚೆನ್ನೈನ ಪೆರಂಬೂರ್‌ನಲ್ಲಿ 12 ಸೆಂ.ಮೀ., ಚೆನ್ನೈ ಕಲೆಕ್ಟರೇಟ್ ಕಟ್ಟಡ, ತೊಂಡೈಯಾರ್ಪೇಟ್, ವಿಲ್ಲಿವಕ್ಕಂ ಮತ್ತು ಪೊನ್ನೇರಿಯಲ್ಲಿನ ಹವಾಮಾನ ಕೇಂದ್ರಗಳಲ್ಲಿ 10 ಸೆಂ.ಮೀ ಮಳೆ ದಾಖಲಾಗಿದೆ.

ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರು, ಬೆನ್ನಿನ ಸಮಸ್ಯೆಯಿಂದ ಬಳಲುತ್ತಿರುವ ಕಾರಣ ರಾಜ್ಯದಾದ್ಯಂತ ಭಾರಿ ಮಳೆಯಿಂದಾಗಿ ಉಂಟಾದ ಅವ್ಯವಸ್ಥೆಗಳನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಮಂಗಳವಾರ ಪರಿಶೀಲಿಸಿದರು. ಕಂದಾಯ ಸಚಿವ ಕೆಕೆಎಸ್‌ಎಸ್‌ಆರ್ ರಾಮಚಂದ್ರನ್, ಮುಖ್ಯ ಕಾರ್ಯದರ್ಶಿ ವಿ ಇರೈ ಅನ್ಬು ಮತ್ತು ಎಲ್ಲಾ ಇಲಾಖೆಗಳ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ತಗ್ಗು ಪ್ರದೇಶಗಳು ಮತ್ತು ದಕ್ಷಿಣ ಚೆನ್ನೈನಲ್ಲಿ ವಾಸಿಸುವ ನಿವಾಸಿಗಳಿಗೆ ಈಗಾಗಲೇ ನಿರ್ದಿಷ್ಟ ಎಚ್ಚರಿಕೆಗಳನ್ನು ನೀಡಲಾಗಿದೆ. ರಾತ್ರಿಯ ಭಾರಿ ಮಳೆಯ ಹೊರತಾಗಿಯೂ, ಮಂಗಳವಾರದ ವೇಳೆಗೆ ಚೆನ್ನೈನ ಅನೇಕ ರಸ್ತೆಗಳಿಂದ ನೀರು ಹೊರಹೋಗಿದೆ ಎಂದು ವರದಿಯಾಗಿದೆ.

'ನಮ್ಮ ಪ್ರದೇಶದಲ್ಲಿ ನಿರಂತರ ಮಳೆಯಾಗುತ್ತಿರುವುದು ಇದೇ ಮೊದಲು ಮತ್ತು ನೀರು ನಿಲ್ಲುತ್ತಿಲ್ಲ, ಇಲ್ಲಿಯವರೆಗೆ ನೀರು ತ್ವರಿತವಾಗಿ ಬರಿದಾಗುತ್ತಿದೆ' ಎಂದು ವೆಲಚೇರಿಯ ಎಜಿಎಸ್ ಕಾಲೋನಿಯ ನಿವಾಸಿ ಗೀತಾ ಗಣೇಶ್ ಹೇಳಿದರು.

ಕನ್ನಂಕೋಟ್ಟೈ ಥೆರೋವಿ ಕಂಡಿಗೈ ಸರೋವರದಿಂದ 62 ಕ್ಯೂಸೆಕ್‌ಗಳನ್ನು ಹೊರಬಿಡಲಾಗಿದ್ದು, ನಗರದ ಕುಡಿಯುವ ನೀರಿನ ಜಲಾಶಯಗಳಿಂದ ಹೆಚ್ಚುವರಿ ನೀರನ್ನು ಇನ್ನೂ ಬಿಡುಗಡೆ ಮಾಡಬೇಕಾಗಿದೆ. ಮಳೆಯನ್ನು ಅವಲಂಬಿಸಿ, ಅವರು ಹೆಚ್ಚುವರಿ ನೀರನ್ನು ಬಿಡಲು ಯೋಜಿಸಲಾಗಿದೆ ಎಂದು ಜಲಸಂಪನ್ಮೂಲ ಇಲಾಖೆ (ಡಬ್ಲ್ಯುಆರ್‌ಡಿ) ಅಧಿಕಾರಿಯೊಬ್ಬರು ಟಿಎನ್‌ಐಇಗೆ ತಿಳಿಸಿದ್ದಾರೆ.

ಯಾವುದೇ ಕುಂದುಕೊರತೆ ಅಥವಾ ಪ್ರವಾಹಕ್ಕೆ ಸಂಬಂಧಿಸಿದ ಸಹಾಯಕ್ಕಾಗಿ ಸಾರ್ವಜನಿಕರು 1913 ಗೆ ಕರೆ ಮಾಡಬಹುದು. ಜನರು #ChennaiRains ಹ್ಯಾಶ್‌ಟ್ಯಾಗ್ ಅನ್ನು ಬಳಸಿಕೊಂಡು ಟ್ವಿಟರ್ ಮೂಲಕವೂ ಸಂಪರ್ಕಿಸಬಹುದು ಮತ್ತು ತನ್ನ ಅಧಿಕೃತ ಖಾತೆ @chennaicorp ಅನ್ನು ಟ್ಯಾಗ್ ಮಾಡಬಹುದು ಎಂದು ಚೆನ್ನೈ ಕಾರ್ಪೊರೇಷನ್ ತಿಳಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com