ರಾಜಸ್ತಾನದಲ್ಲಿ ಪೈಲಟ್-ಗೆಹ್ಲೋಟ್ ನಡುವೆ ಬಿಕ್ಕಟ್ಟು: ಕೇರಳದಲ್ಲಿ ಸ್ವಪಕ್ಷದವರ ವಿರುದ್ಧ ತರೂರ್ ಫೈಟು; ಡಿ.4 ರಂದು ಖರ್ಗೆ ನೇತೃತ್ವದಲ್ಲಿ ಸಭೆ

ಡಿಸೆಂಬರ್ 4 ರಂದು ಕಾಂಗ್ರೆಸ್ ಪಕ್ಷದ ಮೊದಲ ಸ್ಟೀರಿಂಗ್ ಕಮಿಟಿ ಸಭೆಯ ಅಧ್ಯಕ್ಷತೆಯನ್ನು ನೂತನ ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ವಹಿಸಲಿದ್ದು, ನಾಯಕತ್ವದ ಸಮಸ್ಯೆಗಳನ್ನು ಎದುರಿಸುತ್ತಿರುವ ಎರಡು ರಾಜ್ಯಗಳಾದ ರಾಜಸ್ಥಾನ ಮತ್ತು ಕೇರಳದಲ್ಲಿ ಬಿಕ್ಕಟ್ಟನ್ನು ನಿಭಾಯಿಸುವುದು ಅವರ ತಕ್ಷಣದ ಸವಾಲಾಗಿದೆ.
ಮಲ್ಲಿಕಾರ್ಜುನ ಖರ್ಗೆ
ಮಲ್ಲಿಕಾರ್ಜುನ ಖರ್ಗೆ
Updated on

ನವದೆಹಲಿ: ಡಿಸೆಂಬರ್ 4 ರಂದು ಕಾಂಗ್ರೆಸ್ ಪಕ್ಷದ ಮೊದಲ ಸ್ಟೀರಿಂಗ್ ಕಮಿಟಿ ಸಭೆಯ ಅಧ್ಯಕ್ಷತೆಯನ್ನು ನೂತನ ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ವಹಿಸಲಿದ್ದು, ನಾಯಕತ್ವದ ಸಮಸ್ಯೆಗಳನ್ನು ಎದುರಿಸುತ್ತಿರುವ ಎರಡು ರಾಜ್ಯಗಳಾದ ರಾಜಸ್ಥಾನ ಮತ್ತು ಕೇರಳದಲ್ಲಿ ಬಿಕ್ಕಟ್ಟನ್ನು ನಿಭಾಯಿಸುವುದು ಅವರ ತಕ್ಷಣದ ಸವಾಲಾಗಿದೆ.

ಖರ್ಗೆ ಅವರು ಎಐಸಿಸಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಸಂಚಾಲನಾ ಸಮಿತಿಯ ಮೊದಲ ಸಭೆಯಾಗಿರುವುದರಿಂದ ಈ ಸಭೆ ಮಹತ್ವ ಪಡೆದುಕೊಂಡಿದೆ. ಕಾಂಗ್ರೆಸ್ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡ ನಂತರ, ಪಕ್ಷದ ಸಂವಿಧಾನದ ಪ್ರಕಾರ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯನ್ನು ವಿಸರ್ಜಿಸಿ ನಂತರ ಉಸ್ತುವಾರಿ ಸಮಿತಿಯನ್ನು ಖರ್ಗೆ ಮರುರಚಿಸಿದ್ದರು.

ಸಭೆಯ ಅಜೆಂಡಾವು ಸಮಗ್ರ ಅಧಿವೇಶನದ ದಿನಾಂಕಗಳನ್ನು ಅಂತಿಮಗೊಳಿಸುವುದು, ಭಾರತ್ ಜೋಡೋ ಯಾತ್ರೆ ಮತ್ತು ಇತರ ಸಾಂಸ್ಥಿಕ ವಿಷಯಗಳ ಕುರಿತಾಗಿರುತ್ತದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಹೇಳಿದ್ದಾರೆ.

ಆದರೆ ಪಕ್ಷದ ಒಳಗಿನವರು ಹೇಳುವ ಪ್ರಕಾರ, ರಾಜಸ್ಥಾನದಲ್ಲಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ಅವರ ಶತ್ರು ಸಚಿನ್ ಪೈಲಟ್  ತಿಕ್ಕಾಟ, ಶಶಿ ತರೂರ್ ಅವರ ಉತ್ತರ ಕೇರಳದ ರಾಜಕೀಯ  ಪ್ರವಾಸದ ನಂತರ ಉಂಟಾದ ರಾಜಕೀಯ ಪ್ರಹಸನಗಳ ಕುರಿತು ಸಭೆಯಲ್ಲಿ ಚರ್ಚಿಸಲಾಗುತ್ತದೆ ಎಂದು ಹೇಳಲಾಗುತ್ತಿದೆ.

ಎರಡೂ ರಾಜ್ಯಗಳಲ್ಲಿನ ಬೆಳವಣಿಗೆಗಳು ಪಕ್ಷವನ್ನು ಹಿಮ್ಮೆಟ್ಟಿಸಿದರೂ, ಹೊಸ ಅಧ್ಯಕ್ಷರಾಗಿ ಖರ್ಗೆ  ರಾಜಸ್ಥಾನದಲ್ಲಿ ಸ್ವಲ್ಪ ಸಮಯದಿಂದ ಹುಟ್ಟಿಕೊಂಡ ಬಂಡಾಯವನ್ನು ಉಲ್ಬಣಗೊಳಿಸಲು ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ಪಕ್ಷದ ನಾಯಕರ ಒಂದು ವರ್ಗ  ಆರೋಪಿಸಿದೆ.

ಹೊಸ ಅಧ್ಯಕ್ಷರು ರಾಜಸ್ಥಾನ ಬಿಕ್ಕಟ್ಟನ್ನು ಆದ್ಯತೆಯ ಆಧಾರದ ಮೇಲೆ ನೋಡಬೇಕಿತ್ತು.ಈಗ ಅದನ್ನು ಬಗೆಹರಿಸಲು ಮುಂದಾಗಿದ್ದಾರೆ, ಆದರೆ ಸಮಯ ಮಿಂಚಿ ಹೋಗಿದೆ ಎಂದು ಪಕ್ಷದ ಮುಖಂಡರೊಬ್ಬರು ಅಭಿಪ್ರಾಯ ಪಟ್ಟಿದ್ದಾರೆ.

ಅಧಿಕಾರ ವಹಿಸಿಕೊಂಡು ಒಂದು ತಿಂಗಳು ಕಳೆದರೂ ಪಕ್ಷದಲ್ಲಿನ ನಾಯಕತ್ವ ಸಮಸ್ಯೆ ಬಗೆಹರಿಸುವಲ್ಲಿ ಖರ್ಗೆ ವಿಫಲರಾಗಿದ್ದಾರೆ ಎಂಬ ಅಸಮಾಧಾನ ನಾಯಕರ ವಲಯದಲ್ಲಿದೆ.

ಖರ್ಗೆ ಅಧಿಕಾರ ವಹಿಸಿಕೊಂಡ ಕೆಲವೇ ದಿನಗಳಲ್ಲಿ ಪೈಲಟ್ ಮತ್ತು ಗೆಹ್ಲೋಟ್ ನಡುವಿನ ಶೀತಲ ಸಮರವನ್ನು ನಿಲ್ಲಿಸಬೇಕಾಗಿತ್ತು.  ಗೆಹ್ಲೋಟ್ ಬೆಂಬಲಿಗರರು  ಸಿಎಲ್ ಪಿ ಪರ್ಯಾಯ ಸಭೆ ನಡೆಸಿದ್ದರ ಸಂಬಂಧ ಯಾವ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ರಾಜಸ್ತಾನ ಉಸ್ತುವಾರಿಗೆ ಅಜಯ್ ಮಾಕೇನ್ ರಾಜಿನಾಮೆ ನೀಡಿದ್ದರು.

ರಾಜ್ಯ ಉಸ್ತುವಾರಿ ಸ್ಥಾನಕ್ಕೆ ರಾಜೀನಾಮೆ ನೀಡುವ ಇಚ್ಛೆ ವ್ಯಕ್ತಪಡಿಸಿ ಮಾಕೆನ್ ಅವರ ಪತ್ರದ ನಂತರವೂ ಪಕ್ಷದ ಅಧ್ಯಕ್ಷರು ಮಧ್ಯಪ್ರವೇಶಿಸಲಿಲ್ಲ. ಖರ್ಗೆಯವರ ಕೈ ಕಟ್ಟಿದಂತೆ ಕಾಣುತ್ತಿದೆ. ಅವರು ಈಗಲೇ ಕ್ರಮಕೈಗೊಳ್ಳಬೇಕಿದೆ,’’ ಎಂದು ಮತ್ತೊಬ್ಬ ನಾಯಕ ಹೇಳಿದರು.

ಪಕ್ಷದ  ಹೊಸ  ಮುಖ್ಯಸ್ಥರು ಸುಧಾರಣೆಗಳನ್ನು ತರುತ್ತಾರೆ ಮತ್ತು ಕಾದಾಡುತ್ತಿರುವ ಬಣಗಳನ್ನು ಒಟ್ಟುಗೂಡಿಸುತ್ತಾರೆ ಎಂದು  ಇಟ್ಟುಕೊಂಡಿದ್ದ ನಿರೀಕ್ಷೆ  ಸುಳ್ಳಾಗಿದೆ, ಪಕ್ಷವು ಇನ್ನೂ ಅತಂತ್ರವಾಗಿದೆ ಎಂದು ಹಿರಿಯ ನಾಯಕರೊಬ್ಬರು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಯಲ್ಲಿ ಖರ್ಗೆ ವಿರುದ್ಧ ಸ್ಪರ್ಧಿಸಿ ಸೋತಿದ್ದ ಶಶಿ ತರೂರ್ ಕೇರಳದ ಕಡೆ ಗಮನ ಹರಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com