ಭಾರತೀಯರು ಕಚ್ಛಾ ತೈಲಕ್ಕೆ ಹೆಚ್ಚಿನ ಬೆಲೆ ನೀಡಲು ಸಾಧ್ಯವಿಲ್ಲ: ರಷ್ಯಾದಿಂದ ಇಂಧನ ಖರೀದಿ ಬಗ್ಗೆ ಎಸ್. ಜೈಶಂಕರ್ ಮಾತು

ಬಹುತೇಕ ಭಾರತೀಯರು ಕಚ್ಛಾ ತೈಲಕ್ಕೆ ಹೆಚ್ಚಿನ ಬೆಲೆಯನ್ನು ಪಾವತಿಸಲು ಸಾಧ್ಯವಿಲ್ಲ. ಆದ್ದರಿಂದ, ದೇಶವು ರಷ್ಯಾದೊಂದಿಗೆ ಕಚ್ಛಾ ತೈಲ ಖರೀದಿ ಒಪ್ಪಂದಗಳನ್ನು ಮುಂದುವರಿಸಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ತಿಳಿಸಿದ್ದಾರೆ.
ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್
ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್

ನವದೆಹಲಿ: ಬಹುತೇಕ ಭಾರತೀಯರು ಕಚ್ಛಾ ತೈಲಕ್ಕೆ ಹೆಚ್ಚಿನ ಬೆಲೆಯನ್ನು ಪಾವತಿಸಲು ಸಾಧ್ಯವಿಲ್ಲ. ಆದ್ದರಿಂದ, ದೇಶವು ರಷ್ಯಾದೊಂದಿಗೆ ಕಚ್ಛಾ ತೈಲ ಖರೀದಿ ಒಪ್ಪಂದಗಳನ್ನು ಮುಂದುವರಿಸಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ತಿಳಿಸಿದ್ದಾರೆ.

'ನಾವು ನಮ್ಮ ಹಿತಾಸಕ್ತಿಗಳ ಕುರಿತಾಗಿ ತುಂಬಾ ಮುಕ್ತ ಮತ್ತು ಪ್ರಾಮಾಣಿಕವಾಗಿದ್ದೇವೆ. ನಾನು 2000 ಡಾಲರ್ ತಲಾದಾಯವನ್ನು ಹೊಂದಿರುವ ದೇಶವನ್ನು ಹೊಂದಿದ್ದೇನೆ. ಇವರು ಹೆಚ್ಚಿನ ಇಂಧನ ಬೆಲೆಗಳನ್ನು ನಿಭಾಯಿಸುವ ಜನರಲ್ಲ. ಹೀಗಾಗಿ ಅವರಿಗೆ ಉತ್ತಮ ವ್ಯವಹಾರವನ್ನು ಒದಗಿಸುವುದು ನನ್ನ ನೈತಿಕ ಕರ್ತವ್ಯವಾಗಿದೆ' ಎಂದು ಅವರು ತಿಳಿಸಿದರು.

ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ಶುರುಮಾಡಿದಾಗಿನಿಂದ ಹಲವು ಪಾಶ್ಚಿಮಾತ್ಯ ರಾಷ್ಟ್ರಗಳು ರಷ್ಯಾದ ಮೇಲೆ ನಿರ್ಬಂಧ ವಿಧಿಸಿದ್ದವು. ಈ ಪೈಕಿ ಅಮೆರಿಕವು ಸೇರಿತ್ತು. ಹೀಗಾಗಿ ಏಪ್ರಿಲ್‌ನಲ್ಲಿ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಜೆ ಬ್ಲಿಂಕೆನ್ ಅವರು, ರಷ್ಯಾದಿಂದ ಹೆಚ್ಚುವರಿ ತೈಲವನ್ನು ಖರೀದಿಸದಂತೆ ಭಾರತವನ್ನು ಒತ್ತಾಯಿಸಿದರು.

'ತೈಲ ಖರೀದಿಗಳು, ನಿರ್ಬಂಧಗಳು ಇತ್ಯಾದಿಗಳ ವಿಷಯಕ್ಕೆ ಬಂದಾಗ, ಇಂಧನ ಖರೀದಿಗೆ ನಿರ್ಬಂಧಗಳಿವೆ ಎಂಬುದನ್ನು ನಾನು ಗಮನಿಸುತ್ತೇನೆ. ಖಂಡಿತವಾಗಿ, ನಾವು ಕೂಡ ರಷ್ಯಾದಿಂದ ಹೆಚ್ಚುವರಿ ಇಂಧನವನ್ನು ಖರೀದಿಸದಂತೆ ದೇಶಗಳನ್ನು ಪ್ರೋತ್ಸಾಹಿಸುತ್ತಿದ್ದೇವೆ. ಆದರೆ, ಪ್ರತಿಯೊಂದು ದೇಶವೂ ವಿಭಿನ್ನವಾಗಿದೆ. ಹೀಗಾಗಿ ವಿಭಿನ್ನ ಅಗತ್ಯಗಳು ಮತ್ತು ಅವಶ್ಯಕತೆಗಳನ್ನು ಹೊಂದಿರುತ್ತದೆ. ಆದರೆ, ನಾವು ಮಿತ್ರರಾಷ್ಟ್ರಗಳು ಮತ್ತು ಪಾಲುದಾರ ರಾಷ್ಟ್ರಗಳು ರಷ್ಯಾದಿಂದ ಇಂಧನ ಖರೀದಿಯನ್ನು ಹೆಚ್ಚಿಸದಿರಲು ನೋಡುತ್ತಿದ್ದೇವೆ' ಎಂದು ತಿಳಿಸಿದ್ದಾರೆ.

ಮುಂದುವರಿದು, 'ರಷ್ಯಾದಿಂದ ಇಂಧನ ಖರೀದಿಸುವುದನ್ನು ನೀವು ನೋಡುತ್ತಿದ್ದರೆ, ನಿಮ್ಮ ಗಮನವು ಯುರೋಪಿನತ್ತಲೂ ಕೇಂದ್ರೀಕರಿಸಬೇಕೆಂದು ನಾನು ಸಲಹೆ ನೀಡುತ್ತೇನೆ. ನಮ್ಮ ಇಂಧನ ಸುರಕ್ಷತೆಗೆ ಅಗತ್ಯವಾದ ಕೆಲವು ಇಂಧನಗಳನ್ನು ನಾವು ಖರೀದಿಸುತ್ತೇವೆ. ಆದರೆ, ಅಂಕಿಅಂಶಗಳತ್ತಲೂ ಗಮನ ಹರಿಸುವುದು ಅಗತ್ಯ ಎಂದು ನಾನು ಭಾವಿಸುತ್ತೇನೆ. ಏಕೆಂದರೆ, ನಾವು ತಿಂಗಳಿಗೆ ಖರೀದಿಸುವ ಇಂಧನವು ಯುರೋಪ್ ಮಧ್ಯಾಹ್ನವೊಂದಕ್ಕೆ ಖರೀದಿಸುವುದಕ್ಕಿಂತಲೂ ಕಡಿಮೆ ಇದೆ' ಎಂದಿದ್ದಾರೆ.

9ನೇ ಭಾರತ-ಥಾಯ್ಲೆಂಡ್ ಜಂಟಿ ಆಯೋಗದ ಸಭೆಯಲ್ಲಿ ಭಾಗವಹಿಸಲು ಹಾಗೂ ಭಾರತೀಯ ಸಮುದಾಯದ ಸದಸ್ಯರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಲು ಜೈಶಂಕರ್ ಮಂಗಳವಾರ ಥಾಯ್ಲೆಂಡ್‌ಗೆ ಬಂದಿದ್ದರು. ಭಾರತ ಮತ್ತು ಥಾಯ್ಲೆಂಡ್ ರಾಜತಾಂತ್ರಿಕ ಸಂಬಂಧಗಳ ಸ್ಥಾಪನೆಗೆ 75 ವರ್ಷ ತುಂಬಿದೆ.

ಭಾರತ ಮತ್ತು ಥಾಯ್ಲೆಂಡ್ ನಡುವಿನ 8ನೇ ಜಂಟಿ ಆಯೋಗದ ಸಭೆಯು (JCM) 2019ರ ಅಕ್ಟೋಬರ್ 10 ರಂದು ದೆಹಲಿಯಲ್ಲಿ ನಡೆದಿತ್ತು. ಭಾರತದ ಕಡೆಯ ನೇತೃತ್ವವನ್ನು ಜೈಶಂಕರ್ ಮತ್ತು ಥಾಯ್ಲೆಂಡ್ ಕಡೆಯ ನೇತೃತ್ವವನ್ನು ಅಲ್ಲಿನ ವಿದೇಶಾಂಗ ವ್ಯವಹಾರಗಳ ಸಚಿವ ಡಾನ್ ಪ್ರಮುದ್ವಿನೈ ವಹಿಸಿದ್ದರು.

ಸಭೆಗಳಲ್ಲಿ, ಉಭಯ ದೇಶಗಳ ಕಡೆಯವರು ರಾಜಕೀಯ, ರಕ್ಷಣೆ ಮತ್ತು ಭದ್ರತೆ, ಆರ್ಥಿಕ ಮತ್ತು ವಾಣಿಜ್ಯ, ಸಂಪರ್ಕ, ಸಾಂಸ್ಕೃತಿಕ, ಪ್ರವಾಸೋದ್ಯಮ ಮತ್ತು ಜನರ ನಡುವಿನ ಸಂಬಂಧಗಳು ಸೇರಿದಂತೆ ದ್ವಿಪಕ್ಷೀಯ ಸಂಬಂಧದ ಎಲ್ಲಾ ಕ್ಷೇತ್ರಗಳಲ್ಲಿ ಸಾಧಿಸಿದ ಪ್ರಗತಿಯನ್ನು ಪರಿಶೀಲಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com