ಹೈದರಾಬಾದ್: ದೆಹಲಿ ಅಬಕಾರಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ನೀಡಿರುವ ನೋಟಿಸ್ಗೆ ಉತ್ತರ ನೀಡಿರುವ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ಅವರ ಪುತ್ರಿ ಮತ್ತು ಎಂಎಲ್ ಸಿ ಕೆ. ಕವಿತಾ, ವಿಚಾರಣೆ ದಿನಾಂಕ ಮುಂದೂಡುವಂತೆ ಪತ್ರ ಬರೆದಿದ್ದಾರೆ.
ಡಿಸೆಂಬರ್ 6ರಂದು ವಿಚಾರಣೆಗೆ ಹಾಜರಾಗುವಂತೆ ಟಿಆರ್ಸಿ ಎಂಎಲ್ಸಿ ಆಗಿರುವ ಕೆ. ಕವಿತಾ ಅವರಿಗೆ ಸಿಬಿಐ ನೋಟಿಸ್ ಜಾರಿಗೊಳಿಸಿತ್ತು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಕವಿತಾ, ಸಿಬಿಐ ನೋಟಿಸ್ ನಲ್ಲಿರುವಂತೆ ಡಿಸೆಂಬರ್ 6ರಂದು ವಿಚಾರಣೆಗೆ ಹಾಜರಾಗಲು ಸಾಧ್ಯವಿಲ್ಲ. ಪೂರ್ವನಿಯೋಜಿತ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಡಿಸೆಂಬರ್ 6ರಂದು ವಿಚಾರಣೆಗೆ ಹಾಜರಾಗಲು ಸಾಧ್ಯವಿಲ್ಲ. ಡಿ. 11, 12, 13 ಮತ್ತು 15 ದಿನಾಂಕಗಳ ಪೈಕಿ ಸಿಬಿಐ ಅನುಕೂಲಕ್ಕೆ ತಕ್ಕಂತೆ ತಮ್ಮ ನಿವಾಸದಲ್ಲಿ ಭೇಟಿಗೆ ಸಿದ್ಧವಿರುವುದಾಗಿ ತಿಳಿಸಿದ್ದಾರೆ.
ನಾನು ಕಾನೂನಿಗೆ ಬದ್ಧವಾಗಿದ್ದು, ತನಿಖೆಗೆ ಸಹಕರಿಸುತ್ತೇನೆ. ಬದಲಿ ದಿನಾಂಕದಂದು ವಿಚಾರಣೆಗೆ ಹಾಜರಾಗಲು ಸಿದ್ಧವಾಗಿದ್ದೇನೆ. ಅಂತೆಯೇ ಎಫ್ಐಆರ್ ಪ್ರತಿ ಹಾಗೂ ಪ್ರಕರಣಕ್ಕೆ ಸಂಬಂಧಿಸಿದಂತೆ ವೆಬ್ಸೈಟ್ನಲ್ಲಿ ಲಭ್ಯವಿರುವ ಮಾಹಿತಿಯನ್ನು ಪರಿಶೀಲಿಸಿದ್ದು, ತಮ್ಮ ಹೆಸರು ಎಲ್ಲಿಯೂ ಉಲ್ಲೇಖವಾಗಿಲ್ಲ ಎಂದು ಹೇಳಿದ್ದಾರೆ.
Advertisement